ಕೊಟ್ಟ ಮಾತು ಉಳಿಸಿಕೊಳ್ಳಲು ಸಿನಿಮಾದಿಂದ ದೂರ ಸರಿದಿದ್ದ 'ಟಗರು ಪುಟ್ಟಿ' ಮಾನ್ವಿತಾ: ಆ ಮಾತೇನು?
ನಟಿ ಮಾನ್ವಿತಾ ಕಾಮತ್ ಕನ್ನಡ ಸಿನಿಮಾರಂಗದಲ್ಲಿ ಟಗರು ಪುಟ್ಟಿ ಅಂತಲೇ ಖ್ಯಾತಿ ಪಡೆದಿದ್ದಾರೆ. 'ಕೆಂಡಸಂಪಿಗೆ' ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಮಾನ್ವಿತಾ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಇತ್ತೀಚೆಗೆ ಮಾನ್ವಿತಾ ಹೆಚ್ಚಾಗಿ ಸಿನಿಮಾಗಳನ್ನು ಮಾಡಿದ ಕಾರಣ ಅಭಿಮಾನಿಗಳು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದರು.
ಆದರೆ ಇನ್ನೂ ಹೆಚ್ಚು ದಿನಗಳ ಕಾಲ ಮಾನ್ವಿತಾ ಅವರನ್ನು ಮಿಸ್ ಮಾಡಿಕೊಳ್ಳುವ ಅಗತ್ಯ ಇಲ್ಲ. ಯಾಕೆಂದರೆ ಇನ್ನು ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ. ಅಷ್ಟಕ್ಕೂ ಮಾನ್ವಿತಾ ಕಾಮತ್ ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ಳಲು ಕಾರಣ ಇದೆ. ಅದನ್ನು ಅವರೇ ರಿವೀಲ್ ಮಾಡಿದ್ದಾರೆ.
ತಮ್ಮ ತಾಯಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ನಟಿ ಮಾನ್ವಿತಾ ತಮ್ಮ ಅಭಿನಯದ ಜೊತೆ ಜೊತೆಗೆ ತಮ್ಮ ವಿದ್ಯಾಭ್ಯಾಸವನ್ನು ಕೂಡ ಮುಂದುವರೆಸಿದ್ದರು. ಈ ಬಗ್ಗೆ ಮಾನ್ವಿತಾ ಪೋಸ್ಟ್ ಹಂಚಿಕೊಂಡಿದ್ದಾರೆ ಹಾಗಿದ್ದರೆ ನಟಿ ಅಮ್ಮನಿಗೆ ಕೊಟ್ಟ ಮಾತೇನು, ಪೋಸ್ಟ್ನಲ್ಲಿ ಏನಿದೆ ಎನ್ನುವುದನ್ನು ಮುಂದೆ ಓದಿ..

ಇಷ್ಟು ದಿನ ಏನ್ ಮಾಡ್ತಿದ್ರು ಮಾನ್ವಿತಾ?
ನಟಿ ಮಾನ್ವಿತಾ ಕಾಮತ್ ನಟನೆಯ ಜೊತೆಗೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಸ್ನಾತಕೋತ್ತರ ಪದವಿಯನ್ನು ಪಡೆಯಲು ಮಾನ್ವಿತಾ ಕಾಮತ್ ಓದನ್ನು ಮುಂದುವರೆಸಿದ್ದರು. ಇದು ಮಾನ್ವಿತಾ ಕಾಮತ್ ಅವರ ತಾಯಿಯ ಕನಸು. ಮಾಸ್ ಕಮ್ಯೂನಿಕೇನ್ನಲ್ಲಿ ಮಾನ್ವಿತಾ ಕಾಮತ್ ಮಾಸ್ಟರ್ ಡಿಗ್ರಿ ಪಡೆದುಕೊಂಡಿದ್ದಾರೆ. ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿದ್ದಾರೆ ಮಾನ್ವಿತಾ ಹರೀಶ್. ಇದೇ ಕಾರಣಕ್ಕಾಗಿಯೇ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಿಲ್ಲ. ಸಿನಿಮಾಗಳನ್ನು ಮಾಡುತ್ತಿದ್ದರು ಕೂಡ ಬ್ರೇಕ್ ತೆಗೆದುಕೊಳ್ಳುವ ಅನಿವಾರ್ಯತೆ ಅವರಿಗೆ ಎದುರಾಗಿತ್ತು.
ಅಮ್ಮನಿಗೆ ಕೊಟ್ಟ ಮಾತು ಉಳಿಸಿದ ಮಾನ್ವಿತಾ!
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಾನ್ವಿತಾ, ಇನ್ನು ಮುಂದೆ ಸಿನಿಮಾಗಳನ್ನ ಮಾಡುವತ್ತ ನನ್ನ ಗಮನ ಇರುತ್ತದೆ ಎಂದಿದ್ದಾರೆ. "ಸ್ನಾತಕೋತ್ತರ ಪದವಿಯನ್ನು ಪಡೆಯಬೇಕು ಎಂದು ನಿರ್ಧರಿಸಿದ ಬಳಿಕ ಈ ಪಯಣ ರೋಲರ್ ರ್ಕೋಸ್ಟರ್ ರೈಡ್ನಂತೆ ಇತ್ತು. ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು ನನ್ನ ಬಳಿ ಇರುವ ಉಳಿತಾಯದ ಹಣದಲ್ಲಿಯೇ ಬದುಕು ನಡೆಸುವುದು ಸುಲಭವಾಗಿರಲಿಲ್ಲ. ಆದರೆ ನಾನು ಇದನ್ನು ಮಾಡಲೇಬೇಕಿತ್ತು. ನಾನು ನನ್ನ ತಾಯಿಗೆ ಮಾತುಕೊಟ್ಟಿದ್ದೆ. ಅದರ ಪ್ರತಿಫಲ ಇಂದು ನನಗೆ ಸಿಕ್ಕಿದೆ. ನಾನು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣಳಾಗಿದ್ದೇನೆ. ಇನ್ನು ಮುಂದೆ ಸಿನಿಮಾಗಳನ್ನ ಮಾಡುವತ್ತ ಮಾತ್ರ ನನ್ನ ಗಮನ ಇರುತ್ತದೆ." ಎಂದು ಮಾನ್ವಿತಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ಈ ರೀತಿಯಾಗಿ ಬರೆದುಕೊಂಡಿದ್ದಾರೆ.

ಮಾನ್ವಿತಾಗೆ ಶುಭ ಕೋರಿದ ನಟಿ ರಮ್ಯಾ!
ಜೈನ್ ಯೂನಿವರ್ಸಿಟಿಯಿಂದ ಮಾಸ್ ಕಮ್ಯುನಿಕೇಷನ್ ಸ್ನಾತಕೋತ್ತರ ಪದವಿಯನ್ನು ಮಾನ್ವಿತಾ ಪಡೆದುಕೊಂಡಿದ್ದಾರೆ. ಈ ವಿಚಾರವನ್ನು ನಟಿ ಹಂಚಿಕೊಳ್ಳುತ್ತಿದ್ದಂತೆಯೇ, ಶುಭಾಶಯಗಳು ಹರಿದು ಬಂದಿದೆ. ಅಭಿಮಾನಿಗಳ ಜೊತೆಗೆ ಕನ್ನಡ ಸಿನಿಮಾ ನಟಿಯರು ಕೂಡ ಮಾನ್ವಿತಾಗೆ ಶುಭ ಕೋರಿದ್ದಾರೆ. ನಟಿ ಅಮೂಲ್ಯ, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ರಮ್ಯಾ, ಆಶಿಕಾ ರಂಗನಾಥ್ ಸೇರಿದಂತೆ ಹಲವರು ಮಾನ್ವಿತಾಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಮಾನ್ವಿತಾ ಮುಂದಿನ ಸಿನಿಮಾಗಳು!
'ಕೆಂಡಸಂಪಿಗೆ' ಮೂಲಕ ನಾಯಕ ನಟಿಯಾಗಿ ಗಮನ ಸೆಳೆದ ಮಾನ್ವಿತ ಕಾಮತ್, ಬಳಿಕ ಚೌಕ, ಕನಕ, ಟಗರು, ತಾರಕಾಸುರ, ರಿಲಾಕ್ಸ್ ಸತ್ಯ, ಇಂಡಿಯಾ ವರ್ಸಸ್ ಇಂಗ್ಲೆಂಡ್, ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಅವರ ಮುಂಬರುವ ಸಿನಿಮಾಗಳ ಪಟ್ಟಿಯಲ್ಲಿ 'ಶಿವ 143', ರಾಜಸ್ಥಾನ್ ಡೈರೀಸ್, ಹ್ಯಾಪಿಲಿ ಮ್ಯಾರೀಡ್ ಸಿನಿಮಾಗಳು ಇವೆ. ಆದರೆ ಈ ಎಲ್ಲಾ ಸಿನಿಮಾಗಳ ಬಳಿಕ ಮತ್ತೆ ಬಿಗ್ ಕಮ್ಬ್ಯಾಕ್ ಮೂಲಕ ಬರುವ ಸೂಚನೆಯನ್ನ ಮಾನ್ವಿತಾ ಕಾಮತ್ ಕೊಟ್ಟಿದ್ದಾರೆ ಅದು ಯಾವ ಸಿನಿಮಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











