ಕೋವಿಡ್ ಸಮಯದಲ್ಲಿ ಸಿನಿ ಕಾರ್ಮಿಕರಿಗೆ ಯಶ್ ಎಷ್ಟು ಕೋಟಿ ಸಹಾಯ ಮಾಡಿದ್ರು?
5 ವರ್ಷಗಳ ಹಿಂದೆ ಮಹಾಮಾರಿ ಕೊರೋನಾ ವೈರಸ್ ಪ್ರಪಂಚಕ್ಕೆ ತಂದಿದ್ದ ಸಂಕಷ್ಟ ಅಷ್ಟಿಷ್ಟಲ್ಲ. ವೈರಸ್ ಹಾವಳಿಯಿಂದ ಸಾವು ನೋವು ಅನುಭವಿಸಿದವರ ಕಥೆ ಒಂದೆಡೆಯಾದರೆ ಕೆಲಸ ಕಾರ್ಯ ಇಲ್ಲದೇ ಊಟಕ್ಕಾಗಿ ಜೀವನಕ್ಕಾಗಿ ಜನ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಚಿತ್ರರಂಗದ ತಾರೆಯರು ಕೂಡ ಸಹಾಯ ಹಸ್ತ ಚಾಚಿದ್ದರು.
ಕೋವಿಡ್ ಲಾಕ್ಡೌನ್ನಿಂದಾಗಿ ಎಲ್ಲಾ ಚಟುವಟಿಕೆಗಳು ಸ್ತಬ್ಧವಾಗಿತ್ತು. ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಸಂಪೂರ್ಣ ಬಂದ್ ಆಗಿತ್ತು. ಮುಖ್ಯವಾಗಿ ಸಿನಿಮಾ, ಧಾರಾವಾಹಿ ಚಿತ್ರೀಕರಣ ನಿಂತು ಸಿನಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಇಂತಹ ಸಮಯದಲ್ಲಿ ಸಿನಿಮಾ ತಾರೆಯರು ಕೈಲಾದ ಸಹಾಯ ಮಾಡಿದ್ದರು.

ನಟರಾದ ಯಶ್, ಸುದೀಪ್ ಹಾಗೂ ಪುನೀತ್ ರಾಜ್ಕುಮಾರ್ ಕೋವಿಡ್ ಸಂಕಷ್ಟದ ಸಮಯದಲ್ಲಿ ಕನ್ನಡ ಚಿತ್ರ ಕಾರ್ಮಿಕರಿಗೆ ನೆರವಿನ ಹಸ್ತ ಚಾಚಿದ್ದರು. ಕಿರುತೆರೆ ನಟಿ ಮೀನಾಕ್ಷಿ ಈ ಬಗ್ಗೆ ಮಾತನಾಡಿದ್ದಾರೆ. ಫಸ್ಟ್ ವೀವ್ ಕನ್ನಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ. ಕೋವಿಡ್ ಸಮಯದಲ್ಲಿ ನಾವು ರಸ್ತೆಗೆ ಇಳಿದು ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾಗಿ ನೆನಪಿಸಿಕೊಂಡಿದ್ದಾರೆ.
ಸಾಕಷ್ಟು ರಾಜಕೀಯ ಮುಖಂಡರು, ಸಿನಿಮಾ ತಾರೆಯರು ಆ ಸಮಯದಲ್ಲಿ ಸಹಾಯ ಮಾಡಿದ್ದನ್ನು ನಟಿ ಮೀನಾಕ್ಷಿ ಮೆಲುಕು ಹಾಕಿದ್ದಾರೆ. "ಯಶ್ ಅವ್ರು ತಲಾ 5 ಸಾವಿರ ರೂಪಾಯಿ ನಮ್ಮ ಬ್ಯಾಂಕ್ ಖಾತೆಗೆ ಹಾಕಿದ್ರು. ಒಟ್ಟು 2 ಕೋಟಿ 85 ಲಕ್ಷ ರೂಪಾಯಿ ಹಣವನ್ನು ಯಶ್ ನಮ್ಮ ಕಲಾವಿದರ ಸಂಘಕ್ಕೆ ಕೊಟ್ಟಿದ್ರು. ಎಲ್ಲಾ ಕಾರ್ಮಿಕರಿಗೆ ತಲಾ 5 ಸಾವಿರ ರೂಪಾಯಿ ಸಿಕ್ಕಿತ್ತು. ತಟ್ಟೆ ತೊಳೆಯುವವರಿಂದ ಹಿಡಿದು ದೊಡ್ಡ ತಂತ್ರಜ್ಞರವರೆಗೆ ಹಣ ಸಿಕ್ಕಿತ್ತು" ಎಂದು ಮೀನಾಕ್ಷಿ ತಿಳಿಸಿದ್ದಾರೆ.
ಯಶ್ ಮಾತ್ರವಲ್ಲ ಸುದೀಪ್ ಅಣ್ಣ, ಪುನೀತ್ ಸರ್ ಅವರು ಕೂಡ ಸಹಾಯ ಮಾಡಿದ್ದರು. ಲಾಕ್ಡೌನ್ ಸಮಯದಲ್ಲಿ ಬ್ಯಾಂಕ್ ಖಾತೆಯಲ್ಲಿ ನಯಾಪೈಸೆ ಇಲ್ಲದವರಿಗೆ 5 ಸಾವಿರ ರೂಪಾಯಿ ಬಂದರೆ ದೊಡ್ಡ ಮೊತ್ತ ಅಲ್ಲವೇ? ಯಶ್ ಅವ್ರು 2 ಕೋಟಿ ರೂ.ಗೂ ಅಧಿಕ ಸಹಾಯ ಮಾಡಿದ್ದಾರೆ. ಈಗ ಯಾರು ಮಾಡ್ತಾರೆ. ಒಂದು ರೂಪಾಯಿ ಕೊಡುವವರ ಗತಿಯಿಲ್ಲ. ಅವ್ರು ಅವ್ರ ಕುಟುಂಬ ಚೆನ್ನಾಗಿರಲಿ. ಆಗ ಕಲಾವಿದರು ಒಂದು ತಿಂಗಳು ಜೀವನ ಮಾಡಿದ್ದೀವಿ ಇದನ್ನು ಹೆಮ್ಮೆಯಿಂದ ಹೇಳುತ್ತೇನೆ ಎಂದಿದ್ದಾರೆ.
ಸುದೀಪ್ ಸರ್ ದೊಡ್ಡ ದೊಡ್ಡ ಆಹಾರ ಸಾಮಗ್ರಿ ಕಿಟ್ಗಳನ್ನು ಸಿನಿಕಾರ್ಮಿಕರಿಗೆ ಕಳುಹಿಸಿದ್ರು. ಖಾಲಿ ಡಬ್ಬಿ ಸದ್ದು ಮಾಡುತ್ತೆ. ತುಂಬಿದ ಡಬ್ಬಿ ಸದ್ದು ಮಾಡಲ್ಲ. ಅದೇ ರೀತಿ ಸಹಾಯ ಮಾಡುವವರು ಹೇಳಿಕೊಳ್ಳಲ್ಲ, ಏನು ಮಾಡದೇ ಕೆಲವರು ಬಡಾಯಿ ಕೊಚ್ಚಿಕೊಳ್ಳುತ್ತಾರೆ ಎಂದು ಮೀನಾಕ್ಷಿ ತಿಳಿಸಿದ್ದಾರೆ. 3000 ಸಾವಿರಕ್ಕೂ ಅಧಿಕ ಸಿನಿಕಾರ್ಮಿಕರಿಗೆ ಸಹಾಯ ಮಾಡುತ್ತಿರುವುದಾಗಿ ಆಗ ಯಶ್ ಸೋಶಿಯಲ್ ಮೀಡಿಯಾ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದರು. ಯಶ್ ಸಹಾಯಗುಣಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ಕೆಲ ಸಿನಿಮಾಗಳಲ್ಲಿ ಕೂಡ ನಟಿ ಮೀನಾಕ್ಷಿ ನಟಿಸಿದ್ದಾರೆ. 'ಪುಟ್ಟಗೌರಿ ಮದುವೆ', 'ಜೋಡಿ ಹಕ್ಕಿ' ಸೇರಿ ಒಂದಷ್ಟು ಧಾರಾವಾಹಿಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಸದ್ಯ ಯಶ್ ಬಗ್ಗೆ ಮೀನಾಕ್ಷಿ ಮಾತನಾಡಿರುವ ವೀಡಿಯೋವನ್ನು ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.
ಕೋವಿಡ್ ಸಂಕಷ್ಟದಿಂದ ಯಶ್ ನಟನೆಯ 'KGF'-2 ಸಿನಿಮಾ ಚಿತ್ರೀಕರಣ, ಬಿಡುಗಡೆ ತಡವಾಗಿತ್ತು. ಬಳಿಕ ಸಿನಿಮಾ ತೆರೆಕಂಡು ಭರ್ಜರಿ ಯಶಸ್ಸು ಕಂಡಿತ್ತು. ಸದ್ಯ 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾಗಳನ್ನು ಯಶ್ ನಿರ್ಮಿಸಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾಗಳು ತೆರೆಗೆ ಬರಲಿದೆ.


Click it and Unblock the Notifications











