'ನೊಂದಿರುವ ಹೃದಯಕ್ಕೆ ಸಪೋರ್ಟ್ ಮಾಡುವುದು ನಮಗೆ ಗೊತ್ತಿಲ್ಲ': ನೀತು ಶೆಟ್ಟಿ
ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆಕೊಂಡಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ನಟಿ ಕಳೆದ ರಾತ್ರಿ ಪುನರ್ವಸತಿ ಕೇಂದ್ರದಲ್ಲಿ ಸಾವಿಗೆ ಶರಣಾಗಿದ್ದಾರೆ.
ಜಯಶ್ರೀ ಅವರ ಅನಿರೀಕ್ಷಿತ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ವೈಯಕ್ತಿಕ ಜೀವನದಲ್ಲಿ ಬಹಳ ನೋವಿನಲ್ಲಿದ್ದ ನಟಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕಿತ್ತು. ಅವರಿಗೆ ಧೈರ್ಯ ತುಂಬುವ ಪ್ರಯತ್ನ ಆಗಬೇಕಿತ್ತು. ಅವರ ಸಮಸ್ಯೆ ತಿಳಿದು ಅದನ್ನು ಬಗೆಹರಿಸುವ ಕೆಲಸ ಆಗಬೇಕಿತ್ತು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.
ಜಯಶ್ರೀ ಅವರ ಆತ್ಮಹತ್ಯೆ ಕುರಿತು ನಟಿ ನೀತು ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ನೀತು ''ಬದುಕಿನ ವೇಗಕ್ಕೆ ನಮ್ಮೊಳಗಿರುವ ಸೂಕ್ಷ್ಮತೆಗೆ ಒಂದು ಜಾಗ ಹಾಗೂ ಸಮಯ ಇಲ್ಲದಾಗಿದೆ'' ಎಂದು ಮರುಗಿದ್ದಾರೆ.

''ಪ್ರಪಂಚದಲ್ಲಿರುವ ಎಲ್ಲಾ ವಿಷಯಗಳೂ ನಮಗೆ ಅರ್ಥ ಆಗುತ್ತೆ.. ಪೊಲಿಟಿಕ್ಸ್, ಶೇರ್ ಮಾರ್ಕೆಟ್, ದುಡ್ಡು ಇತ್ಯಾದಿ... ಆದರೆ ನೊಂದಿರುವ ಹೃದಯಕ್ಕೆ ಸಪೋರ್ಟ್ ಮಾಡುವುದು ಹೇಗೆ ಅನ್ನೋದು ಮಾತ್ರ ಗೊತ್ತಾಗಲ್ಲ... ಯಾರನ್ನು ನಾನು ಜರೀತಾ ಇಲ್ಲ..ಆದರೆ ಬದುಕಿನ ವೇಗಕ್ಕೆ ನಮ್ಮೊಳಗಿರುವ ಸೂಕ್ಷ್ಮತೆಗೆ ಒಂದು ಜಾಗ ಹಾಗೂ ಸಮಯ ಇಲ್ಲದಾಗಿದೆ.. ನಮ್ಮ ಚಿತ್ರ ಇನ್ನೂ ಸ್ಕ್ರಿಪ್ಟ್ ಹಂತದಲ್ಲಿ ಇದ್ದಾಗ, ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತೀಯಾ ಎಂದು ನಾನು ತಂಡದ ಪರವಾಗಿ ಜಯಶ್ರೀಯನ್ನು ಕೇಳಿದ್ದೆ.. ಸದ್ಯಕ್ಕೆ ಯಾವುದೇ ಸಿನಿಮಾದಲ್ಲಿ ಅಭಿನಯಿಸುವ ಬಗ್ಗೆ ಯೋಚಿಸಿಲ್ಲ ಅಂದಿದ್ಲು.. ಇವತ್ತಿನ ಈ ಸುದ್ದಿ ಕೇಳಿ , ತುಂಬಾನೇ ದುಃಖ ಆಗ್ತಿದೆ.'' ಎಂದು ನಟಿ ನೀತು ಶೆಟ್ಟಿ ಪೋಸ್ಟ್ ಹಾಕಿದ್ದಾರೆ.
ನಿರ್ದೇಶಕಿ ರೇಖಾರಾಣಿ ಸಹ ಜಯಶ್ರೀ ಅವರ ಸಾವಿನ ಬಗ್ಗೆ ಕಾಮೆಂಟ್ ಮಾಡಿದ್ದಾರೆ. 'ಹೋಗಿದ್ದೀಯ. ಮತ್ತೆಂದೂ ಬರಬೇಡ ಮಗಳೆ. ಜಯಶ್ರೀ ರಾಮಯ್ಯ. ಸಣ್ಣ ವಯಸ್ಸಿನಲ್ಲಿ ನೊಂದು ಬೆಂದು, ಎಲ್ಲರಿಗೂ ಮಸಾಲೆಯಾಗಿ ಹುರಿದುರಿದು, ಉರಿದುರಿದು ಸತ್ತ ಸಣ್ಣ ತರುಣಿಯೆಂಬ ಮಗು. ನನ್ನ ಕರೆಗೆ ಓಗೊಟ್ಟು ಮನೆಗೆ ಬರಲಾರಂಭಿಸಿದ ಈ ಹುಡುಗಿಯ ದೇಹ ಮತ್ತು ಮನಸ್ಸುಗಳ ಮೇಲಾಗಿರುವ ಅತ್ಯಾಚಾರಗಳ ಬಗ್ಗೆ ತಿಳಿದಾಗ ಈ ಮನುಷ್ಯನೆಂಬ ಪ್ರಾಣಿಯ ಬಗ್ಗೆ ಅಸಹ್ಯ ಹುಟ್ಟುತ್ತದೆ' ಎಂದು ಬೇಸರ ಹಂಚಿಕೊಂಡಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777


Click it and Unblock the Notifications











