ಸಿನಿಮಾ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪ: ಕೇಂದ್ರದ ವಿರುದ್ಧ ನಟಿ ರಮ್ಯಾ ಕಿಡಿ
ಸಿನಿಮಾಟೋಗ್ರಫಿ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಹೊಸ ಕಾಯ್ದೆಯನ್ವಯ ಸರ್ಕಾರವೇ ಪರೋಕ್ಷವಾಗಿ ಸಿನಿಮಾಗಳ ಸೆನ್ಸಾರ್ ನಿರ್ಣಯ ಮಾಡಬಹುದಾದ ಹಕ್ಕು ಪಡೆದುಕೊಳ್ಳಲಿದೆ. ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿಯು ನಿರ್ದೇಶಕನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಿದೆ ಎಂದು ಆರೋಪಿಸಿ ಭಾರತೀಯ ಸಿನಿರಂಗದ ಹಲವು ಪ್ರಮುಖರು ಒಕ್ಕೂರಲಾಗಿ ಕಾಯ್ದೆಯ ವಿರುದ್ಧ ದನಿ ಎತ್ತಿದ್ದಾರೆ.
ಈ ಬಗ್ಗೆ ನಟಿ, ರಾಜಕಾರಣಿ ರಮ್ಯಾ ಕೂಡ ವಿರೋಧ ವ್ಯಕ್ತ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಮ್ಯಾ 'ನಾವು ನೋಡುವ ವಿಚಾರದ ಮೇಲು ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ' ಎಂದು ಕಿಡಿ ಕಾರಿದ್ದಾರೆ.
ಈಗಾಗಲೇ ಸಿನಿಮಾಟೋಗ್ರಫಿ ಕಾಯ್ದೆ ತಿದ್ದುಪಡಿ ವಿರೋಧಿಸಿ ನಟ ಫರ್ಹಾನ್ ಅಖ್ತರ್, ಅನುರಾಗ್ ಕಶ್ಯಪ್, ಶಬಾನಾ ಅಜ್ಮಿ, ಹನ್ಸಲ್ ಮೆಹ್ತಾ, ದಿಬಾಕರ್ ಬ್ಯಾನರ್ಜಿ, ಜೋಯಾ ಅಖ್ತರ್, ಕಮಲ್ ಹಾಸನ್ ಸೇರಿದಂತೆ ಇನ್ನೂ ಹಲವರು ಸಿನಿಮಾಟೊಗ್ರಫಿ ಕಾಯ್ದೆ 2021 ತಿದ್ದುಪಡಿ ವಿರುದ್ಧ ಬಹಿರಂಗ ಪತ್ರ ಬರೆದಿದ್ದಾರೆ.

ಸದ್ಯ ಈ ಬಗ್ಗೆ ನಟಿ ರಮ್ಯಾ ಕೂಡ ಧ್ವನಿ ಎತ್ತಿದ್ದು, "ನಾವು ನೋಡುವ ವಿಚಾರದಲ್ಲಿ ಸರ್ಕಾರ ಯಾಕೆ ಹಸ್ತಕ್ಷೇಪ ಮಾಡಬೇಕು? ಕೇಂದ್ರದವರು ಎಲ್ಲಾ ಕಡೆ ಇದ್ದಾರೆ. ನಮ್ಮ ಎಲ್ಲಾ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್ ಸಿ) ಈಗಾಗಲೇ ಎಲ್ಲವನ್ನು ನಿಯಂತ್ರಣ ಮಾಡುತ್ತಿದೆ" ಎಂದು ಹೇಳಿದ್ದಾರೆ.
ತಿದ್ದುಪಡಿಯು ಅಂಗೀಕೃತಗೊಂಡರೆ ಸಿಬಿಎಫ್ ಸಿ ನೀಡಿದ ಪ್ರಮಾಣಪತ್ರವನ್ನು ಪ್ರಶ್ನಿಸುವ, ಪುನರ್ ಪರಿಶೀಲಿಸುವಂತೆ ಸೂಚಿಸುವ, ಬದಲಾಯಿಸುವಂತೆ ಸೂಚಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ಪಡೆದುಕೊಳ್ಳಲಿದೆ.


Click it and Unblock the Notifications











