Hijab verdict: ಹಿಜಾಬ್ ತೀರ್ಪಿನ ಬಗ್ಗೆ ತಾರಾ ಹೇಳಿದ್ದು ಹೀಗೆ...
'ಹಿಜಾಬ್ ವಿವಾದ'ದ ಬಗ್ಗೆ ಇಂದು ಹೊರಬಿದ್ದಿರುವ ಹೈಕೋರ್ಟ್ ತೀರ್ಪನ್ನು ನಟಿ, ರಾಜಕಾರಣಿ ತಾರಾ ಸ್ವಾಗತಿಸಿದ್ದಾರೆ.
ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ನಟಿ ತಾರಾ, ''ಶಾಲೆಗಳಲ್ಲಿ ಮಕ್ಕಳು, ಬಡವ, ಬಲ್ಲಿದ ಇನ್ನಿತರೆ ತಾರತಮ್ಯಗಳು ಇಲ್ಲದೆ ಒಂದೇ ತರಗತಿಯಲ್ಲಿ ಒಟ್ಟಿಗೆ ಕುಳಿತು ಪಾಠಗಳನ್ನು ಕೇಳಲಿ ಎಂದು ನಮ್ಮ ಹಿರಿಯರು ಈ ವ್ಯವಸ್ಥೆ ಮಾಡಿದ್ದಾರೆ'' ಎಂದಿದ್ದಾರೆ ತಾರಾ.
''ಶಾಲೆಗಳಲ್ಲಿ ಧರ್ಮೀಯತೆ ತರುವುದು ಅಥವಾ ಶಿಕ್ಷಣದಲ್ಲಿ ರಾಜಕೀಯ ಬಳಸುವುದು ಆ ಮೂಲಕ ಮಕ್ಕಳಲ್ಲಿ ಬೇಧ ಭಾವಗಳನ್ನು ಹುಟ್ಟುಹಾಕುವಂತಹಾ ಕಾರ್ಯಗಳು ಇತ್ತೀಚೆಗೆ ಆಗಿದ್ದವು. ಇಂಥಹಾ ಸಮಯದಲ್ಲಿ ನ್ಯಾಯಾಲಯ ನೀಡಿರುವ ತೀರ್ಪು ಅತ್ಯಂತ ಸ್ವಾಗತಾರ್ಹ'' ಎಂದಿದ್ದಾರೆ ತಾರಾ.

''ಸಮವಸ್ತ್ರದ ಉದ್ದೇಶವೇ ಎಲ್ಲರೂ ಸಮಾನ ಎಂಬುದಾಗಿದೆ. ಎಲ್ಲ ಮಕ್ಕಳು ಸಮಾನ ಎಂಬ ಕಾರಣಕ್ಕೆ ಶಾಲೆಗಳು ಸಮವಸ್ತ್ರದ ನಿಯಮವನ್ನು ಮಾಡಿಕೊಂಡಿದ್ದವು. ಎಲ್ಲ ಮಕ್ಕಳು ಸಮಾನರು ಎಂದು ತೀರ್ಪಿನ ಮೂಲಕ ಸಾರಿದ್ದಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ'' ಎಂದಿದ್ದಾರೆ ತಾರಾ.
'ಧರ್ಮಗಳನ್ನು ಅವರವರ ಮನೆಗಳಲ್ಲಿ, ದೇವಾಲಯಗಳಲ್ಲಿ ಪಾಲಿಸುವುದು ತಪ್ಪೇನು ಅಲ್ಲ. ಎಲ್ಲರಿಗೂ ಅವರವರ ಧರ್ಮವೇ ಶ್ರೇಷ್ಠ. ಇಡೀಯ ವಿಶ್ವದಲ್ಲಿ ಎಲ್ಲ ಧರ್ಮೀಯರನ್ನು ಸಮಾನವಾಗಿ ಕಾಣುವ, ಎಲ್ಲ ಧರ್ಮೀಯರಿಗೆ ಸಮಾನ ಹಕ್ಕು ಅವಕಾಶ ನೀಡುವ ದೇಶ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ'' ಎಂದರು ತಾರಾ.
ನಟಿ, ಬಿಜೆಪಿ ವಕ್ತಾರೆ ಮಾಲವಿಕ ಅವಿನಾಶ್ ಸಹ ಇಂದಿನ ಹೈಕೋರ್ಟ್ ತೀರ್ಪಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ''ಖೇಲ್ ಕಥಮ್, ನಾಟಕ್ ಬಂದ್. ಸಾಕು ಎಲ್ಲರೂ ಶಾಲೆಗಳಿಗೆ ನಡೆಯಿರಿ, ಹಿಜಾಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆ ಅಲ್ಲ ಎಂದು ಗೌರವಾನ್ವಿತ ನ್ಯಾಯಾಲಯ ಹೇಳಿದೆ'' ಎಂದಿದ್ದಾರೆ.


Click it and Unblock the Notifications











