'ಅಭಿನೇತ್ರಿ' ಪೂಜಾಗಾಂಧಿಯ ಪೂಜಾಫಲ ಫಲಿಸೀತೆ?
ಪೂಜಾಗಾಂಧಿ ಅವರ ಚಿತ್ರಗಳು ತೆರೆಕಂಡು ಬಹಳ ಸಮಯವೇ ಸರಿದುಹೋಗಿದೆ. ಕಳೆದ ವರ್ಷ 'ಕಲ್ಯಾಣಮಸ್ತು' ಎಂಬ ಚಿತ್ರ ಬಂದು ಹೋಗಿದ್ದೇ ಗೊತ್ತಾಗಲಿಲ್ಲ. ಇದೀಗ ಅವರ ಮಹತ್ವಾಕಾಂಕ್ಷೆಯ ಚೊಚ್ಚಲ ನಿರ್ಮಾಣದ ಚಿತ್ರ 'ಅಭಿನೇತ್ರಿ' ತೆರೆಗೆ ಬರಲು ಸಿದ್ಧವಾಗಿದೆ.
ಇದೇ ಜನವರಿ 30ರಂದು 'ಅಭಿನೇತ್ರಿ' ಚಿತ್ರ ರಾಜ್ಯದಾದ್ಯಂತ 150 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ತಮ್ಮ ಪಾತ್ರಕ್ಕಾಗಿ ಪೂಜಾಗಾಂಧಿ ಸಾಕಷ್ಟು ಪೂರ್ವತಯಾರಿ ಮಾಡಿಕೊಂಡು ಇದೀಗ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರದಲ್ಲಿನ ಕೆಲವೊಂದು ಹಾಟ್ ದೃಶ್ಯಗಳು, ಇದು ಮಿನುಗುತಾರೆ ಕಲ್ಪನಾ ಅಥವಾ ಮಂಜುಳಾ ಅವರ ಕಥೆ ಇರಬಹುದೇ ಎಂಬುದೂ ಕುತೂಹಲಕ್ಕೆ ಕಾರಣವಾಗಿದೆ. [ಬೆತ್ತಲೆ ಬೆನ್ನು ತೋರಿದ 'ಅಭಿನೇತ್ರಿ' ಪೂಜಾಗಾಂಧಿ]
ಅರುವತ್ತು, ಎಪ್ಪತ್ತರ ದಶಕದ ತಾರೆಯೊಬ್ಬಳ ಕಥೆ ಇದು ಎಂದಿರುವ ಪೂಜಾಗಾಂಧಿ, ಅಂದಿನ ಚಿತ್ರೋದ್ಯಮ ಹೇಗಿತ್ತು ಎಂಬ ಬಗ್ಗೆಯೂ ಬೆಳಕು ಚೆಲ್ಲುತ್ತಿದ್ದಾರೆ. ಈ ಚಿತ್ರ ಯಾವುದೇ ತಾರೆ ಕುರಿತಾದ ಚಿತ್ರವಲ್ಲ. ಅರುವತ್ತು, ಎಪ್ಪತ್ತರ ದಶಕದಲ್ಲಿ ತಾರೆಯೊಬ್ಬಳ ಕಥೆ. ಈ ಚಿತ್ರ ಎಲ್ಲಾ ಕನ್ನಡ ಚಿತ್ರರಂಗದ ಎವರ್ ಗ್ರೀನ್ ಅಭಿನೇತ್ರಿಯರಿಗೆ ಅರ್ಪಣೆ ಎಂದಿದ್ದಾರೆ.

ಪೂಜಾಗಾಂಧಿಗೆ ಸಾಕಷ್ಟು ಅನುಭವ ಕೊಟ್ಟ ಚಿತ್ರ
ಈ ಚಿತ್ರದ ಬಗ್ಗೆ ಮಾತನಾಡಿರುವ ಪೂಜಾಗಾಂಧಿ, "ಅಭಿನೇತ್ರಿ ಚಿತ್ರ ಸಾಕಷ್ಟು ಅನುಭವಗಳನ್ನು ಕೊಟ್ಟಿದೆ. ಈಗ ಸುಲಭವಾಗಿ ಹಿಮಾಲಯ ಪರ್ವತವನ್ನೂ ಹತ್ತಬಲ್ಲೆ ಎಂಬಷ್ಟು ಅನುಭವವಾಗಿದೆ" ಎನ್ನುತ್ತಾರೆ.

ಯಾಕಿಷ್ಟು ತಡವಾಗಿ ಬರುತ್ತಿದೆ ಅಭಿನೇತ್ರಿ
ಚಿತ್ರ ತಡವಾಗಲು ಕಾರಣಗಳನ್ನೂ ಕೊಟ್ಟಿದ್ದಾರೆ. ಈ ಚಿತ್ರದ ಕಥೆ ಕೃತಿಚೌರ್ಯ ವಿವಾದಕ್ಕೆ ಗುರಿಯಾಗಿ ಕೋರ್ಟ್ ಮೆಟ್ಟಿಲೇರಿದ್ದೂ ಗೊತ್ತೇ ಇದೆ. ಕಡೆಗೆ ನ್ಯಾಯಾಲಯದಿಂದ ಕ್ಲೀನ್ ಚಿಟ್ ಪಡೆದಿದ್ದೂ ಆಯಿತು. ಇದಕ್ಕಾಗಿ ನಾಲ್ಕು ತಿಂಗಳುಗಳ ಕಾಲ ಕೋರ್ಟ್ ಗೆ ಅಲೆಯಬೇಕಾಯಿತು. ಚಿತ್ರ ತಡವಾಗಲು ಇದೂ ಒಂದು ಬಲವಾದ ಕಾರಣ ಎನ್ನುತ್ತಾರೆ.

ಚಿತ್ರದಲ್ಲಿ ತಮ್ಮದು ನಂದಾ ಪಾತ್ರ ಎನ್ನುತ್ತಾರೆ
ಈ ಚಿತ್ರದಲ್ಲಿನ ಪಾತ್ರಕ್ಕಾಗಿ ತಾನು ಅಕ್ಷರಶಃ ಪರಕಾಯಪ್ರವೇಶ ಮಾಡಿದ್ದೇನೆ. ಮಿನುಗುತಾರೆ ಕಲ್ಪನಾ ಅವರ ಪಾತ್ರಗಳಿಂದ ಸಾಕಷ್ಟು ಕಲಿತಿದ್ದೇನೆ. ಕಲ್ಪನಾ ಅವರಿಗೆ ಯಾರೂ ಸಾಟಿಯಿಲ್ಲ. ಚಿತ್ರದಲ್ಲಿ ತಮ್ಮದು ನಂದಾ ಪಾತ್ರ ಎನ್ನುತ್ತಾರೆ.

ತಮ್ಮ ಪಾತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ
ಎಪ್ಪತ್ತರ ದಶಕದ ಖ್ಯಾತನಾಮರಾದ ಎಸ್ ಕೆ ಭಗವಾನ್, ಕೆಎಸ್ ಎಲ್ ಸ್ವಾಮಿ, ಬಿವಿ ರಾಧಾ, ಅಭಿನಯದ ಶಾರದೆ ಡಾ.ಜಯಂತಿ ಸೇರಿದಂತೆ ಹಲವರನ್ನು ಸಂಪರ್ಕಿಸಿ ತಮ್ಮ ಪಾತ್ರಕ್ಕೆ ತಯಾರಿ ಮಾಡಿಕೊಂಡಿದ್ದಾಗಿಯೂ ಪೂಜಾಗಾಂಧಿ ತಿಳಿಸಿದ್ದಾರೆ.

ಸತೀಶ್ ಪ್ರಧಾನ್ ಗೆ ಚೊಚ್ಚಲ ಚಿತ್ರ
ಚಿತ್ರದಲ್ಲಿ ರಮೇಶ್ ಭಟ್, ಶೈಲಜಾ, ಸುಧಾ ಬೆಳವಾಡಿ, ರವಿಶಂಕರ್, ಅತುಲ್ ಕುಲಕರ್ಣಿ ಹಾಗೂ ಮಕರಂದ್ ದೇಶಪಾಂಡೆ ಅವರಂತಹ ಕಲಾವಿದರೆ ಬಳಗವೇ ಇದೆ. ಸತೀಶ್ ಪ್ರಧಾನ್ ಆಕ್ಷನ್ ಕಟ್ ಹೇಳಿರುವ ಚಿತ್ರವಿದು. ಇದು ಅವರ ನಿರ್ದೇಶನದ ಚೊಚ್ಚಲ ಚಿತ್ರವಾದರೂ 25 ಚಿತ್ರಗಳ ಅನುಭವ ಅವರಿಗಾಗಿದೆಯಂತೆ.

ಬೆಳ್ಳಿಪರದೆ ಮೇಲೆ ಎಪ್ಪತ್ತರ ದಶಕದ ಅನಾವರಣ
ಕನ್ನಡ ಚಿತ್ರರಂಗದ ಮಟ್ಟಿಗೆ ಎಪ್ಪತ್ತರ ದಶಕ ಸುವರ್ಣ ಯುಗ. ಆಗ ಚೆನ್ನೈನಲ್ಲಿ ಕನ್ನಡ ಚಿತ್ರಗಳನ್ನು ರಾತ್ರಿ ವೇಳೆ ಚಿತ್ರೀಕರಿಸಲಾಗುತ್ತಿತ್ತು. ಬೆಳಗಿನ ವೇಳೆ ಸ್ಟುಡಿಯೋಗಳ ಅಭಾವ ಇತ್ತು. ಆಗಿನ ಕಾಲದ ಚಿತ್ರ ನಿರ್ಮಾಣದ ಕಷ್ಟನಷ್ಟಗಳು ಹೇಗಿದ್ದವು ಎಂಬುದನ್ನೂ ತಮ್ಮ ಚಿತ್ರದಲ್ಲಿ ಅನಾವರಣಗೊಳ್ಳಲಿದೆ ಎಂದಿದ್ದಾರೆ ಪೂಜಾಗಾಂಧಿ.


Click it and Unblock the Notifications











