'ಟಾಕ್ಸಿಕ್' ಬಿಡುಗಡೆ ಮುಂದಕ್ಕೆ.. ಅಭಿಮಾನಿಗಳಿಗೆ ಬೇಸರ; ಕನ್ನಡದಲ್ಲೇ ಬಹಿರಂಗ ಪತ್ರ ಬರೆದ ಪೂಜಾ ಗಾಂಧಿ
ಮಾರ್ಚ್ 19ಕ್ಕೆ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗ್ತಿಲ್ಲ. ಇದು ಸಹಜವಾಗಿಯೇ ಅಭಿಮಾನಿಗಳಿಗೆ ಬೇಸರ ತಂದಿದೆ. ಚಿತ್ರತಂಡ ಏನೇ ಕಾರಣ ಕೊಟ್ಟರೂ 4 ವರ್ಷಗಳಿಂದ ಯಶ್ ನಟನೆಯ ಚಿತ್ರಕ್ಕಾಗಿ ಕಾಯುತ್ತಿರುವವರಿಗೆ ಕೊಂಚ ನಿರಾಸೆ ಆಗಿರುವುದು ಸುಳ್ಳಲ್ಲ. ತೆರೆಮೇಲೆ ರಾಯಾ ಹಾಗೂ ಟಿಕೆಟ್ ಆರ್ಭಟ ನೋಡಲು ಇವತ್ತಿಗೆ ಸರಿಯಾಗಿ ಇನ್ನು 90 ದಿನ ಕಾಯಬೇಕಿದೆ.
'ಟಾಕ್ಸಿಕ್' ಸಿನಿಮಾ ರಿಲೀಸ್ ಡೇಟ್ ಬದಲಾಗುತ್ತಿರುವುದು ಇದೇ ಮೊದಲೇನಲ್ಲ. ಸಿನಿಮಾ ಘೋಷಣೆ ಮಾಡಿದಾಗ 2025, ಏಪ್ರಿಲ್ 10ರಂದು ಸಿನಿಮಾ ತೆರೆಗೆ ಬರುತ್ತದೆ ಎಂದಿದ್ದರು. ಆದರೆ ಸಿನಿಮಾ ತಡವಾಗಿ ಸೆಟ್ಟೇರಿತ್ತು. ಹಾಗಾಗಿ ಆ ದಿನ ಸಿನಿಮಾ ಬರುವುದು ಅನುಮಾನ ಎಂದು ಅಭಿಮಾನಿಗಳು ಊಹಿಸಿದ್ದರು. ಬಳಿಕ ಒಂದು ವರ್ಷ ತಡವಾಗಿ ಅಂದರೆ 2026, ಮಾರ್ಚ್ 19ರಂದು ಸಿನಿಮಾ ರಿಲೀಸ್ ಎಂದು ಚಿತ್ರತಂಡ ಹೇಳಿತ್ತು. ಈಗ ಮತ್ತೆ 3 ತಿಂಗಳು ತಡವಾಗುತ್ತಿದೆ. ಈ ಬಗ್ಗೆ ನಟಿ ಪೂಜಾ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

ಮೂಲತಃ ಉತ್ತರ ಪ್ರದೇಶದ ಮೀರತ್ನವರಾದ ಪೂಜಾ ಗಾಂಧಿ ಈಗ ಕನ್ನಡದವರೇ ಆಗಿಬಿಟ್ಟಿದ್ದಾರೆ. ಇಲ್ಲೇ ಮದುವೆ ಆಗಿ ಸೆಟ್ಲ್ ಆಗಿದ್ದಾರೆ. ಬೆಂಗಳೂರು ಮೂಲದ ಉದ್ಯಮಿ ವಿಜಯ್ ಘೋರ್ಪಡೆ ಎಂಬುವವರ ಜೊತೆ 2 ವರ್ಷಗಳ ಹಿಂದೆ ಮಳೆ ಹುಡುಗಿ ಮದುವೆ ನಡೆದಿತ್ತು. 15 ವರ್ಷಗಳಿಂದ ಕರ್ನಾಟಕದಲ್ಲಿ ಇರುವ ಪೂಜಾ ಕನ್ನಡದಲ್ಲಿ ಚೆನ್ನಾಗಿ ಮಾತನಾಡುತ್ತಾರೆ. ಕನ್ನಡ ಓದಲು ಬರೆಯಲು ಕಲಿತ್ತಿದ್ದಾರೆ. ಇದೀಗ 'ಟಾಕ್ಸಿಕ್' ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆ ಕನ್ನಡದಲ್ಲೇ ಪತ್ರ ಬರೆದಿದ್ದಾರೆ.
"ಯಶಸ್ಸಿಗಿಂತ ಸಂಕಲ್ಪವೇ ಮುಖ್ಯ" ಎನ್ನುವಾಗ, ಅದನ್ನ "ಯಶ್ " ಎಂದು ಕರೆಯಬಹುದು ಎಂದು ಪೂಜಾ ಗಾಂಧಿ ಬರೆಯಲು ಆರಂಭಿಸಿದ್ದಾರೆ. "ಸ್ಯಾಂಡಲ್ವುಡ್ನ ಕನಸು ಕಾಣುತ್ತಾ ಮೈಸೂರಿನಿಂದ ಬೆಂಗಳೂರಿಗೆ ಬಂದ ಯಶ್, ಕನಸು ನನಸಾದರೂ ವಿರಮಿಸಲಿಲ್ಲ. ಅವರ ಪರಿಶ್ರಮದ ಹಿಂದೆ ಇರುವ ಅಸಾಧಾರಣ ಉತ್ಸಾಹ, ಮತ್ತು ನಿರ್ಭಯ ಸಾಹಸವೇ ಇಂದು ನಮ್ಮೆಲ್ಲರ ನೆಚ್ಚಿನ "ಯಶ್ "ಎಂಬ ಯಶೋಗಾಥೆ. ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಶಂಕರ್ ನಾಗ್, ಅನಂತ್ ನಾಗ್, ರವಿಚಂದ್ರನ್, ಉಪೇಂದ್ರ, ಸುದೀಪ್, ದರ್ಶನ್ ಅವರಂತಹ ಮಹಾನ್ ಕಲಾವಿದರ ಪರಂಪರೆಯನ್ನು ಮುಂದುವರಿಸುತ್ತಾ ಇಂದು ಕನ್ನಡ ಸಿನಿಮಾದ ಧ್ವಜವನ್ನು ಯಶ್ ಅಂತಾರಾಷ್ಟ್ರೀಯ ಎತ್ತರಕ್ಕೆ ಹೊತ್ತೊಯ್ಯುತ್ತಿದ್ದಾರೆ" ಎಂದು ಮೆಚ್ಚುಗೆ ಸೂಚಿಸಿದ್ದಾರೆ.
'ಟಾಕ್ಸಿಕ್' ಚಿತ್ರದ ಬಿಡುಗಡೆ ಜೂನ್ 4ಕ್ಕೆ ಮುಂದೂಡಲ್ಪಟ್ಟಿದೆ. "ಪರವಾಗಿಲ್ಲ ..... ಈ ನಿರೀಕ್ಷೆಯೇ ಅದನ್ನು ಇನ್ನಷ್ಟು ಮಹತ್ತರವಾಗಿಸುತ್ತದೆ. ಅಲ್ಲಿಯ ವರೆಗೆ ಕಾತುರದಿಂದ ಕಾಯುತ್ತೇವೆ" ಎಂದು ಪೂಜಾ ಗಾಂಧಿ ಬರೆದುಕೊಂಡಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ನಯನತಾರಾ, ಕಿಯಾರಾ ಅದ್ವಾನಿ, ರುಕ್ಮಿಣಿ ವಸಂತ್, ಹುಮಾ ಖುರೇಶಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಸಿನಿಮಾ ಬಿಡುಗಡೆಗೆ ಎಲ್ಲಾ ತಯಾರಿ ನಡೆದಿತ್ತು. ಎಲ್ಲಾ ಏರಿಯಾಗಳ ಡಿಸ್ಟ್ರಿಬ್ಯೂಷನ್ ರೈಟ್ಸ್ ಸೇಲ್ ಆಗಿತ್ತು. ಟೀಸರ್ ಬಳಿಕ ಒಂದೊಂದೇ ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿತ್ತು. ಆದರೆ ಸಿನಿಮಾ ಮೇಲೆ ಇರಾನ್, ಇಸ್ರೇಲ್ ಯುದ್ಧ ಪರಿಣಾಮ ಬೀರುವ ಕಾರಣದಿಂದ ರಿಲೀಸ್ ಡೇಟ್ ಮುಂದೂಡಲಾಗಿದೆ. ಲೇಟ್ ಆದರೂ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂದು ಅಭಿಮಾನಿಗಳು ಭರವಸೆಯ ಮಾತುಗಳನ್ನಾಡುತ್ತಿದ್ದಾರೆ.
ಗೀತು ಮೋಹನ್ ದಾಸ್ ಜೊತೆ ಸೇರಿ ಯಶ್ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಇಂಗ್ಲೀಷ್ ಭಾಷೆಯಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ವಿದೇಶದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ತೆರೆಗೆ ತರಲಾಗುತ್ತಿದೆ. ಹಾಗಾಗಿ ಗಲ್ಫ್ ರಾಷ್ಟ್ರಗಳು ಸೇರಿದಂತೆ ಕೆಲ ಭಾಗಗಳಲ್ಲಿ ಚಿತ್ರಕ್ಕೆ ಹಿನ್ನಡೆ ಆಗಬೇಕು ಎನ್ನುವ ಕಾರಣಕ್ಕೆ 3 ತಿಂಗಳು ತಡವಾಗಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.


Click it and Unblock the Notifications











