ರಾಯಚೂರಿನಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ ನಟಿ ಪೂಜಾ
ಸಿನಿಮಾದವರು ರಾಜಕೀಯ ಪ್ರವೇಶಿಸುವುದು ಹೊಸತೇನು ಅಲ್ಲ. ರಾಜಕೀಯ ಪ್ರವೇಶಿಸುವ ಉದ್ದೇಶದಿಂದಲೇ ಸಿನಿಮಾ ರಂಗಕ್ಕೆ ಕಾಲಿಟ್ಟು ಜನಪ್ರಿಯಗೊಳ್ಳುವ ಪ್ರಯೋಗಗಳೂ ಕರ್ನಾಟಕದಲ್ಲಿ ನಡೆದಿವೆ.
ಸಿನಿಮಾ ರಂಗದಲ್ಲಿ ಹೆಸರು ಮಾಡಿದ ಹಲವರು ರಾಜಕೀಯದಲ್ಲಿಯೂ ಮಿನುಗಿದ್ದಿದೆ. ಈಗಲೂ ಹಲವು ನಟ-ನಟಿಯರು ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಉತ್ತಮ ಸ್ಥಾನಗಳಲ್ಲಿ ಅಲಂಕೃತಗೊಂಡಿದ್ದಾರೆ.
ಇದೀಗ ನಟಿಯೊಬ್ಬರು ತಾವೂ ಸಹ ರಾಜಕೀಯ ಅಂಗಳಕ್ಕೆ ಧುಮುಕುವುದಾಗಿ ಘೋಷಿಸಿದ್ದಾರೆ. ಕನ್ನಡದ ಕೆಲ ಸಿನಿಮಾ ಹಾಗೂ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಪೂಜಾ ರಮೇಶ್ ತಾವು ಮುಂದಿನ ವಿಧಾನಸಭೆ ಚುನಾವಣೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.

ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಪೂಜಾ ರಮೇಶ್, ತಾವು ರಾಯಚೂರಿನಿಂದ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂಬುದನ್ನು ಮುಂದಿನ ದಿನಗಳಲ್ಲಿ ಘೋಷಿಸುವುದಾಗಿ ಪೂಜಾ ರಮೇಶ್ ಹೇಳಿದ್ದಾರೆ.
ಕರಾವಳಿ ಜಿಲ್ಲೆ ಮೂಲದವರಾದರು ರಾಯಚೂರಿನಿಂದ ಸ್ಪರ್ಧಿಸುತ್ತಿರುವುದಕ್ಕೆ ಕಾರಣ ತಿಳಿಸಿರುವ ಪೂಜಾ ರಮೇಶ್, ''ಇಲ್ಲಿ ಕೆಲ ಸಮಯದಿಂದಲೂ ನಾನು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ. ಈ ಭಾಗದ ಜನರೊಟ್ಟಿಗೆ ನನ್ನ ಬಂಧ ಏರ್ಪಟ್ಟಿದೆ. ಇಲ್ಲಿ ನನ್ನ ಅಭಿಮಾನಿಗಳು, ಹಿತೈಷಿಗಳು, ಗುರುಗಳು ಮಾರ್ಗದರ್ಶಕರೂ ಇದ್ದಾರೆ ಹಾಗಾಗಿ ನಾನು ಈ ಭಾಗದಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದೇನೆ'' ಎಂದಿದ್ದಾರೆ.
''ಮಹಿಳೆಯಾಗಿ ನಮ್ಮ ಪ್ರತಿನಿಧಿತ್ವ ಬೇಕಾಗಿದೆ ಹಾಗಾಗಿ ಘಟಾನುಗಟಿ ರಾಜಕಾರಣಿಗಳಿದ್ದರೂ ಅವರ ಮಧ್ಯೆ ಸ್ಪರ್ಧಿಸಲು ಸಿದ್ಧಳಾಗಿದ್ದೇನೆ. ನಮ್ಮ ಕುಟುಂಬದಲ್ಲಿಯೇ ರಾಜಕೀಯ ಬೆರೆತಿದೆ. ನಮ್ಮ ಅಜ್ಜಿಯೂ ರಾಜಕಾರಣಿಯಾಗಿದ್ದರು'' ಎಂದಿದ್ದಾರೆ ಪೂಜಾ ರಮೇಶ್.
'ಪೇಪರ್ ದೋಣಿ, 'ನಿರುದ್ಯೋಗಿ', 'ಲಹರಿ', 'ತಾಂಡವ', 'ಮಹಾಕಾಳಿ' ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ 'ಕಾಮಧೇನು', 'ಜಾನವಿ', 'ಸಂಭವಾಮಿ ಯುಗೇ ಯುಗೇ', 'ಎಲ್ಲಿ ಜಾರಿತೋ ಮನವು', 'ಗ್ರಹಣ', 'ಎಸ್ಎಸ್ಎಸ್ಎಲ್ಸಿ ನನ್ ಮಕ್ಳು', 'ಪಾರ್ವತಿ', 'ಅಶ್ವಿನಿ ನಕ್ಷತ್ರ', 'ಪರಮೇಶ್ವರ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ.


Click it and Unblock the Notifications











