ಫೋಟೋ ಜೊತೆಗೆ ಭರವಸೆಯ ಮಾತು ಹಂಚಿಕೊಂಡ ನಟಿ ರಾಧಿಕಾ ಪಂಡಿತ್
ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್ ಸಮಾಜಿಕ ಜಾಲತಾಣದಲ್ಲಿ ಭರವಸೆಯ ಮಾತುಗಳನ್ನು ಹಂಚಿಕೊಂಡಿದ್ದಾರೆ. ಕೊರೊನಾ ಹಾವಳಿಯಿಂದ ಸಂಕಷ್ಟದಲ್ಲಿರುವ, ಪ್ರೀತಿ ಪಾತ್ರರನ್ನು ಕಳೆದುಕೊಂಡು ನೋವಿನಲ್ಲಿರೋರಿಗೆ ಧೈರ್ಯದ ಮಾತುಗಳನ್ನು ಆಡಿದ್ದಾರೆ.
ಇತ್ತೀಚಿಗಷ್ಟೆ ರಾಕಿಂಗ್ ಸ್ಟಾರ್ ಯಶ್ ಕೋಟಿಗಟ್ಟಲೇ ಹಣವನ್ನು ಕಷ್ಟದಲ್ಲಿರುವ ಚಿತ್ರರಂಗದ ಕರ್ಮಿಕರಿಗೆ ನೀಡಿದ್ದಾರೆ. 3 ಸಾವಿರ ಸಿನಿ ಕಾರ್ಮಿಕರಿಗೆ ಯಶ್ 5 ಸಾವಿರ ರೂ. ನೀಡುವ ಮೂಲಕ ನೆರವಿಗೆ ನಿಂತಿದ್ದಾರೆ. ಸಾವಿರಾರು ಕುಟುಂಬದ ಹಸಿವನ್ನು ನೀಗಿಸಿದ್ದಾರೆ. ಇದರ ಬೆನ್ನಲ್ಲೇ ಪತ್ನಿ ರಾಧಿಕಾ ಸಂಕಷ್ಟದಲ್ಲಿರೋರಿಗೆ ಭರವಸೆಯ ಮಾತುಗಳನ್ನು ಹೇಳಿದ್ದಾರೆ.
ಸಿನಿಮಾದಿಂದ ದೂರ ಇದ್ದರು ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ. ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿದ್ದಾರೆ. ಆಗಾಗ ಮಕ್ಕಳ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಇಬ್ಬರು ಮಕ್ಕಳ ಜೊತೆ ಬೀಚ್ ನಲ್ಲಿ ಕುಳಿತಿರುವ ಫೋಟೋ ಶೇರ್ ಮಾಡಿ ಧೈರ್ಯದ ಮಾತುಗಳನ್ನು ಹೇಳಿದ್ದಾರೆ.

'ಇದು ತುಂಬ ಕಷ್ಟದ ಸಮಯ. ನಾವೆಲ್ಲರೂ ಪಾತ್ರರನ್ನು ಕಳೆದುಕೊಂಡವರ ನೋವು ಸಂಕಟಕ್ಕೆ ಸಾಕ್ಷಿಯಾಗಿದ್ದೇವೆ. ನಾವು ಭಯದಲ್ಲಿ ಜೀವನ ನಡೆಸುತ್ತಿದ್ದೇವೆ. ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇವೆ. ಮುಂದೆ ಏನು ಎನ್ನುವುದು ತಿಳಿದಿಲ್ಲ.'
'ಆದರೆ ದಯವಿಟ್ಟು ಒಂದು ಮಾತನ್ನು ಪ್ರತಿ ದಿನ ನಿಮಗೆ ನೀವೇ ಹೇಳಿಕೊಳ್ಳಿ. ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ನಾವು ಭರವಸೆ ಇಡುತ್ತೇವೆ, ನಂಬಿಕೆ ಇಡುತ್ತೇವೆ, ಹೋರಾಡುತ್ತೇವೆ, ಎಲ್ಲರೂ ಜೊತೆಯಾಗಿ ನಿಂತು ಈ ಕಷ್ಟದಿಂದ ಹೊರಬರುತ್ತೇವೆ' ಎಂದು ರಾಧಿಕಾ ಪಂಡಿತ್ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.
ರಾಧಿಕಾ ಪಂಡಿತ್ ಸದ್ಯ ಇಬ್ಬರು ಮುದ್ದಾದ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಐರಾ ಮತ್ತು ಯಥರ್ವ್ ಮಕ್ಕಳ ಜತೆ ಸಮಯ ಕಳೆಯುತ್ತಿದ್ದಾರೆ. ಸದ್ಯ ಚಿತ್ರೀಕರಣ ಕೂಡ ಸ್ಥಗಿತವಾಗಿರುವುದರಿಂದ ಯಶ್ ಕೂಡ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಕೆಜಿಎಫ್-2 ಬಿಡುಗಡೆಗೆ ಕಾಯುತ್ತಿರುವ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.


Click it and Unblock the Notifications











