ಛೇ.. ನಾನು ಅವಳೊಟ್ಟಿಗೆ ಮಾತು ಬಿಡಬಾರದಿತ್ತು.. ಆತ್ಮಹತ್ಯೆಗೆ ಶರಣಾದ ಸ್ನೇಹಿತೆ ನೆನೆದು ರಕ್ಷಿತಾ ಭಾವುಕ
ಮಾನಸಿಕ ಖಿನ್ನತೆ ಎನ್ನುವುದು ಕೆಲವೊಮ್ಮೆ ಆತ್ಮಹತ್ಯೆವರೆಗೆ ಕರೆದುಕೊಂಡು ಹೋಗಿಬಿಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬೇರೆ ಸಮಸ್ಯೆಗಳಿಂದ ದುಡುಕಿನ ನಿರ್ಧಾರ ಕೈಗೊಳ್ಳುವವರಿಗಿಂತ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ತಮ್ಮ ಸ್ನೇಹಿತೆ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ನಟಿ ರಕ್ಷಿತಾ ಪ್ರೇಮ್ ಭಾವುಕ ಪೋಸ್ಟ್ ಮಾಡಿದ್ದಾರೆ.
ನಟಿ ರಕ್ಷಿತಾ ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕಿರುತೆರೆ ಕಾರ್ಯಕ್ರಮ ತೀರ್ಪುಗಾರ್ತಿಯಾಗಿ ಗುರ್ತಿಸಿಕೊಂಡಿದ್ದಾರೆ. ಸಿನಿಮಾ ನಿರ್ಮಾಣದಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಆಗಿದ್ದು ಆಗಾಗ್ಗೆ ಪೋಸ್ಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಕೊಲ್ಲೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ತಮ್ಮ ಸ್ನೇಹಿತೆ ವಸುಧಾ ಬಗ್ಗೆ ರಕ್ಷಿತಾ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.

"ನೀವು ಪ್ರೀತಿಸುವವರೊಂದಿಗೆ ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸುವ ಜನರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಏನೇ ಜಗಳ ಇದ್ದರೂ ನಿಮ್ಮ ಈಗೋ ಎಲ್ಲಾ ಬಿಟ್ಟು ಅವರನ್ನು ತಬ್ಬಿಕೊಳ್ಳಿ. ಅವರನ್ನು ಕ್ಷಮಿಸಿ. ಅವರೊಟ್ಟಿಗೆ ನಗು ನಗುತ್ತಾ ಇರಿ. ಏಕೆಂದರೆ ಜೀವನ ಬಹಳ ಅನಿರೀಕ್ಷಿತ ಮತ್ತು ಚಿಕ್ಕದು" ಎಂದು ರಕ್ಷಿತಾ ಇನ್ಸ್ಟಾ ಸ್ಟೋರಿ ಬರೆಯಲು ಆರಂಭಿಸಿದ್ದಾರೆ.
ಬಳಿಕ ರಕ್ಷಿತಾ ತಮ್ಮ ಸ್ನೇಹಿತೆ ವಸುಧಾ ಬಗ್ಗೆ ನೋವಿನ ಸಂಗತಿ ಬಿಚ್ಚಿಟ್ಟಿದ್ದಾರೆ. "ನಾನು ವಸು ಜೊತೆ 5 ವರ್ಷಗಳಿಗೂ ಹೆಚ್ಚು ಕಾಲ ಟಚ್ನಲ್ಲಿ ಇರಲಿಲ್ಲ. ಆದೆ ನಾನು ಟಚ್ನಲ್ಲಿ ಇರಬೇಕಿತ್ತು ಅನಿಸುತ್ತದೆ. ಅವಳಿಗೆ ಮಾತನಾಡಲು ಯಾರಾದರೂ ಬೇಕಾದ ಸಮಯದಲ್ಲಿ ನಾನು ಅವಳೊಂದಿಗೆ ಇರಬೇಕಿತ್ತು ಅನ್ನಿಸುತ್ತೆ. ನನ್ನ ಸ್ನೇಹಿತೆ ಆಗಸ್ಟ್ 27 ರಂದು ಕೊಲ್ಲೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಳು. ಅವನು ಇನ್ನಿಲ್ಲ. ಈಗ ಅವಳಿಗೆ ಶಾಂತಿ ಸಿಕ್ಕಿರಬಹುದು. ಆದರೆ ಯಾರಿಗೂ ಹೀಗೆ ಆಗಲು ಬಿಡಬೇಡಿ. ಏನೇ ಭಿನ್ನಾಭಿಪ್ರಾಯ ಇದ್ದರೂ ಮರೆಯು ಚೆನ್ನಾಗಿರಿ. ಮಿಸ್ ಯು ವಸು" ಎಂದು ನೋವು ತೋಡಿಕೊಂಡಿದ್ದಾರೆ.

ಖಿನ್ನತೆ ಅನ್ನೋದು ನಿಜ. ಇದಕ್ಕೆ ಥೆರಪಿ ಪಡೆಯಿರಿ. ಸ್ನೇಹಿತರೊಂದಿಗೆ ಮಾತನಾಡಿ, ದಯವಿಟ್ಟು ಒಂಟಿಯಾಗಿರಬೇಡಿ ಎಂದು ಮತ್ತೊಂದು ಪೋಸ್ಟ್ನಲ್ಲಿ ರಕ್ಷಿತಾ ಬರೆದುಕೊಂಡಿದ್ದಾರೆ. ಸ್ನೇಹಿತೆ ವಸುಧಾ ಜೊತೆಗಿನ ಫೋಟೊ ಹಂಚಿಕೊಂಡು ರಕ್ಷಿತಾ ಭಾವಕರಾಗಿದ್ದಾರೆ.
ಬೆಂಗಳೂರಿನ ತ್ಯಾಗರಾಜ ನಗರದ ಗೋವಿಂದರಾಜು ಎಂಬುವವರ ಮಗಳು ವಸುಧಾ ಚಕ್ರವರ್ತಿ ಆಗಸ್ಟ್ 27ರಂದು ಕೊಲ್ಲೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಇದೇ ಬೇಸರದಲ್ಲಿ ಸೌಪರ್ಣಿಕಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಎರಡು ದಿನಗಳ ಬಳಿಕ ಇಂದು(ಆಗಸ್ಟ್ 30) ಆಕೆ ನದಿಗೆ ಹಾರಿದ ಸ್ಥಳದಿಂದ 3 ಕಿಲೋ ಮೀಟರ್ ದೂರದಲ್ಲಿ ಮೃತದೇಹ ಪತ್ತೆ ಆಗಿದೆ.
ವಸುಧಾ ಅವರಿಗೆ 45 ವರ್ಷ ವಯಸ್ಸಾಗಿತ್ತು. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು ಮುಳುಗು ತಜ್ಞರು, ಅಗ್ನಿಶಾಮಕ ಸಿಬ್ಬಂದಿ ವಸುಧಾ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದರು. ಮಾವಿನಕಾರು ಬಳಿ ಮೃತದೇಹ ಪತ್ತೆಯಾಗಿದೆ.


Click it and Unblock the Notifications











