ಧನಂಜಯ್, ನಿಖಿಲ್ ಕುಮಾರ್ ಚಿತ್ರದ ಬಗ್ಗೆ ನಟಿ ರಮ್ಯಾ ಕಮೆಂಟ್!
ನಟಿ ರಮ್ಯಾ ಸದ್ಯ ಸಾಮಾಜಿಕ ಜಾಲತಾಣದ ಮೂಲಕವೇ ಎಲ್ಲರಿಗೂ ಕನೆಕ್ಟ್ ಆಗಿದ್ದಾರೆ. ಏನೇ ವಿಚಾರಗಳನ್ನು ಹಂಚಿಕೊಳ್ಳಬೇಕು ಎನಿಸಿದಾಗ ಮೊದಲು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಾರೆ. ನಿಮಗೂ ರಮ್ಯಾ ಅವರ ಬಗ್ಗೆ ಏನಾದರು ತಿಳಿದುಕೊಳ್ಳಬೇಕು ಅಂದರೆ ಅವರ ಇನ್ಸ್ಟಾಗ್ರಾಮ್ ತೆರೆದು ನೋಡಿದರೆ ಸಾಕು. ಅವರ ಹಲವಾರು ಫೊಟೋ, ವಿಡಿಯೋಗಳನ್ನು ಕಾಣಬಹುದು.
ರಮ್ಯಾ ಹೊಸದನ್ನು ಏನಾದರು ಹಂಚಿಕೊಂಡರೆ ಅದು ಸುದ್ದಿಯ ರೂಪದಲ್ಲಿ ಹಲವರನ್ನು ತಲುಪುತ್ತದೆ. ಅದರಲ್ಲೂ ಚಿತ್ರರಂಗದಿಂದ ಕೆಲ ಸಮಯ ದೂರ ಉಳಿದಿದ್ದ ರಮ್ಯಾ ಈಗ ಮತ್ತೇ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾಗಿ ಅವರ ಪೋಸ್ಟ್ಗಳು ಕುತೂಹಲ ಹುಟ್ಟುವ ಹಾಗೆ ಇರುತ್ತವೆ.
ರಮ್ಯಾ ಅವರು ಕನ್ನಡ ಚಿತ್ರಗಳ ಕುರಿತು ಮಾತನಾಡಿದರೆ ಅಥವಾ ಪೋಸ್ಟ್ ಹಂಚಿಕೊಂಡರೆ ಅದು ಹೆಚ್ಚಿನ ಗಮನ ಸೆಳೆಯುತ್ತದೆ. ಸದ್ಯ ರಮ್ಯಾ ಕನ್ನಡದ ಎರಡು ಚಿತ್ರಗಳ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ನಿಖಿಲ್ ಕುಮಾರ್ 'ರೈಡರ್'ಗೆ ಆಲ್ ದಿ ಬೆಸ್ಟ್ ಹೇಳಿದ ರಮ್ಯಾ!
ನಟ ನಿಖಿಲ್ ಕುಮಾರ್ ಅಭಿನಯದ ರೈಡರ್ ಸಿನಿಮಾ ಇದೇ ವಾರಾಂತ್ಯ(ಡಿಸೆಂಬರ್ 24) ರಂದು ತೆರೆ ಕಾಣುತ್ತಿದೆ. ಈಗಾಗಲೆ ಚಿತ್ರದ ಟ್ರೇಲರ್, ಟೀಸರ್, ಹಾಡುಗಳು ಸಿನಿಮಾದ ಮೇಲೆ ನಿರೀಕ್ಷೆ ಹುಟ್ಟಿಸಿವೆ. ಇನ್ನೇನಿದ್ದರು ರೈಡರ್ ಚಿತ್ರವನ್ನು ತೆರೆಯ ಮೇಲೆ ನೋಡಿ ಸಂಭ್ರಮಿಸುವುದು ಮಾತ್ರ ಬಾಕಿ ಇದೆ. ಈ ಚಿತ್ರಕ್ಕೆ ನಟಿ ಶುಭ ಕೋರಿದ್ದಾರೆ. "ಈ ತಿಂಗಳು ಸಾಕಷ್ಟು ಕನ್ನಡ ಚಿತ್ರಗಳು ರಿಲೀಸ್ ಆಗುತ್ತಿವೆ. ಆಯ್ಕೆಗೆ ಸೀಮಿತ ಆಗಬೇಡಿ, ಎಲ್ಲಾ ಚಿತ್ರಗಳನ್ನು ನೋಡಿ. ಬೆಸ್ಟ್ ವಿಶಸ್ ಟು ನಿಖಿಲ್ ಕುಮಾರ್" ಎಂದು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡು, ಚಿತ್ರದ ಟೀಸರ್ ಹಂಚಿಕೊಂಡಿದ್ದಾರೆ ನಟಿ ರಮ್ಯಾ.

ಬಡವ ರಾಸ್ಕಲ್ ಚಿತ್ರಕ್ಕೆ ರಮ್ಯಾ ಶುಭಾಶಯ!
ರೈಡರ್ ಜೊತೆಗೆ ಕನ್ನಡದ ಮತ್ತೊಂದು ಸಿನಿಮಾ 'ಬಡವ ರಾಸ್ಕಲ್' ತೆರೆಗೆ ಬರ್ತಿದೆ. ಹಾಗಾಗಿ ಈ ಚಿತ್ರಕ್ಕೂ ಕೂಡ ರಮ್ಯಾ ಶುಭ ಕೋರಿದ್ದಾರೆ. "ಗುಡ್ ಲಕ್ ಯು ಗಾಯ್ಸ್, ಒಳ್ಳೆಯ ಸಮಯ ಎನಿಸುತ್ತದೆ" ಎಂದು ಬರೆದು ನಟ ಧನಂಜಯ್, ನಟಿ ಅಮೃತಾ ಅಯ್ಯಂಗಾರ್, ವಾಸುಕಿ ವೈಭವ್, ಕೆಆರ್ಜಿ ಕಾರ್ತಿಕ್, ಮತ್ತು ಯೋಗ್ರಾಜ್ ಭಟ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಈ ಮೂಲಕ ರಮ್ಯಾ ಕನ್ನಡದ ಚಿತ್ರಗಳು ಗೆಲ್ಲಬೇಕು ಎನ್ನುವ ಆಶಯವನ್ನು ಹೊರ ಹಾಕಿದ್ದಾರೆ.

ಧನಂಜಯ್ ಹೇಳಲಿದ್ದಾರೆ ಸಾಮಾನ್ಯನ ಕತೆ 'ಬಡವ ರಾಸ್ಕಲ್'!
ನಟ ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ಅಭಿನಯದ 'ಬಡವ ರಾಸ್ಕಲ್' ಚಿತ್ರ ವಿಭಿನ್ನ ಶೈಲಿಯಲ್ಲಿ ಗಮನ ಸೆಳೆದಿದೆ. ಈ ಚಿತ್ರ ಒಬ್ಬ ಸಾಮಾನ್ಯ ಹುಡುಗನ ಕಹಾನಿ ಎನ್ನುತ್ತೆ ಚಿತ್ರ ತಂಡ. ಇಲ್ಲಿ ತನಕ ರಿಲೀಸ್ ಆಗಿರುವ ಚಿತ್ರದ ಹಾಡುಗಳು, ಟ್ರೇಲರ್ ಅದನ್ನೇ ಹೇಳುತ್ತಿವೆ. ನಟ ಧನಂಜಯ್ ಡಾಲಿ ನೆರಳಿನ ಅಬ್ಬರ ಬಿಟ್ಟು ಈಗ ಮನೆ ಮಗನಾಗಿ, ಪ್ರೇಮಿಯಾಗಿ, ಸ್ನೇಹಿತನಾಗಿ ಈ ಚಿತ್ರದಲ್ಲಿ ನಾನಾ ಶೇಡ್ಗಳಲ್ಲಿ ಕಾಣಿಕೊಳ್ಳುತ್ತಿದ್ದಾರೆ. ಇದೇ ವಾರಾಂತ್ಯಕ್ಕೆ ಬರುತ್ತಿರುವ ಬಡವಾ ರಾಸ್ಕಲ್ ಚಿತ್ರವನ್ನು ಪ್ರೇಕ್ಷಕರು ಚಿತ್ರ ಮಂದಿರದಲ್ಲಿ ಕಣ್ತುಂಬಿ ಕೊಳ್ಳಬಹುದಾಗಿದೆ.

ರಾಮನ ಬಳಿಕ ರೈಡರ್ ರೂಪ ತಾಳಿದ ನಿಖಿಲ್ ಕುಮಾರ್!
ನಿಖಿಲ್ ಕುಮಾರ್ ಕೊನೆ ಸಿನಿಮಾ 'ಸೀತಾ ರಾಮ ಕಲ್ಯಾಣ'. ಎರಡು ವರ್ಷಗಳ ಹಿಂದೆ ಈ ಸಿನಿಮಾ ಬಿಡುಗಡೆಯಾಗಿತ್ತು. ಆ ಬಳಿಕ 'ರೈಡರ್' ಸೆಟ್ಟೇರಿದ್ದರೂ, ಕೊರೊನಾ, ಲಾಕ್ಡೌನ್ ಅಂತ ಚಿತ್ರೀಕರಣ ತಡವಾಗಿತ್ತು. ಈಗ 'ರೈಡರ್' ಸಿನಿಮಾ ಕ್ರಿಸ್ಮಸ್ ಹಬ್ಬಕ್ಕೆ ರಿಲೀಸ್ ಆಗಲು ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ. ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ನಿಖಿಲ್ ಹಾಗೂ ರಚಿತಾರಾಮ್ ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ಬಾರಿ ಕಾಶ್ಮೀರಾ ಪರದೇಶಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











