'17 ವರ್ಷದ ಆ ಬಾಲಕಿ ಮನಸ್ಸಿಗೆ ಎಷ್ಟು ಘಾಸಿಯಾಗಿರಬಹುದು?' ಚಿಕ್ಕಮಗಳೂರು ಘಟನೆ ಖಂಡಿಸಿದ ರಮ್ಯಾ
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ವನ್ಯಜೀವಿ ಅಭಯಾರಣ್ಯದ ಉಳಿವಿಗಾಗಿ ಹೋರಾಟಗಳನ್ನು ನಡುಸುತ್ತಾ ಬಂದಿರುವ ಖ್ಯಾತ ಪರಿಸರವಾದಿ ಡಿವಿ ಗಿರೀಶ್ ಹಾಗೂ ಸ್ನೇಹಿತರ ಮೇಲೆ ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ.
ಸೋಮವಾರ (ಆಗಸ್ಟ್ 30) ಡಿವಿ ಗಿರೀಶ್ ಅವರು ತಮ್ಮ ಜಿಪ್ಸಿಯಲ್ಲಿ ಕೆಮ್ಮಣ್ಣುಗುಂಡಿ ಸಮೀಪದ ಕಟ್ಟೆಹೊಳೆ ಎಸ್ಟೇಟ್ನಿಂದ ಗೆಳೆಯರೊಂದಿಗೆ ಹಿಂತಿರುಗುವ ವೇಳೆ ಸಂತವೇರಿ ತಿರುವಿನ ಸಮೀಪ ನಿಂತಿದ್ದ ಕೆಲವು ಯುವಕರು ವಾಹನದಲ್ಲಿದ್ದ ಬಾಲಕಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾರೆ. ಈ ವೇಳೆ ವಾಹನ ನಿಲ್ಲಿಸಿದ ಡಿವಿ ಗಿರೀಶ್, ಹಾಗೆಲ್ಲ ಮಾತನಾಡಬಾರದು ಎಂದು ಯುವಕರಿಗೆ ಬುದ್ದಿ ಹೇಳುವ ಪ್ರಯತ್ನ ನಡೆಸಿದರು. ಆ ಸ್ಥಳದಲ್ಲಿ ಸುಮನಾದ ಯುವಕರು, ಕೆಲವೊತ್ತಿನ ನಂತರ ಕಂಬಿಹಳ್ಳಿ ಸಮೀತ ಬೈಕ್ಗಳಲ್ಲಿ ಬಂದು ಗಿರೀಶ್ ಅವರ ಜಿಪ್ಸಿಯನ್ನು ಅಡ್ಡಗಟ್ಟಿದ್ದಾರೆ.
ಗಿರೀಶ್ ಹಾಗೂ ಸ್ನೇಹಿತ ಕೀರ್ತಿ ಕುಮಾರ್ ಎಂಬುವವರ ಮೇಲೆ ಆ ಯುವಕರ ತಂಡ ಹಲ್ಲೆ ಮಾಡಿದರು ಎಂಬ ಆರೋಪ ಕೇಳಿ ಬಂದಿದೆ. ಈ ವೇಳೆ ವಾಹನದಲ್ಲಿದ್ದ ಅಪ್ರಾಪ್ತ ಬಾಲಕಿಯನ್ನು ಎಳೆದಾಡಿದರು ಎಂದು ಡಿವಿ ಗಿರೀಶ್ ಪೊಲೀಸರಿಗೆ ದೂರು ನೀಡಿದ್ದರು. ಈ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಪರಿಸರವಾದಿ ಮೇಲೆ ಯುವಕರ ತಂಡ ಹಲ್ಲೆ ಮಾಡಿರುವುದು ಹಾಗೂ ಬಾಲಕಿ ವಿಚಾರದಲ್ಲಿ ತಪ್ಪಾಗಿ ನಡೆದುಕೊಂಡಿರುವವರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕೆಂದು ಒತ್ತಾಯ ಕೇಳಿ ಬಂತು. ಇದೀಗ, ಈ ಘಟನೆ ಬಗ್ಗೆ ನಟಿ ಹಾಗೂ ರಾಜಕಾರಣಿ ರಮ್ಯಾ ಪ್ರತಿಕ್ರಿಯಿಸಿದ್ದು, 'ಆ 17 ವರ್ಷದ ಬಾಲಕಿಯ ಮನಸ್ಸಿಗೆ ಎಷ್ಟು ಘಾಸಿಯಾಗಿರಬಹುದು' ಎಂದು ಪ್ರಶ್ನಿಸಿದ್ದಾರೆ. ಮುಂದೆ ಓದಿ....

ಆಕೆಯ ಮನಸ್ಸಿನ ಎಷ್ಟು ಘಾಸಿಯಾಗಿರಬಹುದು?
''ಚಿಕ್ಕಮಗಳೂರಿನಲ್ಲಿ ಪರಿಸರವಾದಿ ಡಿವಿ ಗಿರೀಶ್ ಮತ್ತು ಆತನ ಸ್ನೇಹಿತರ ಮೇಲೆ ಹಲ್ಲೆ ಆಗಿರುವ ವಿಚಾರ ಓದಿದೆ. ಇಡೀ ಘಟನೆಯನ್ನು ಆ ವಾಹನದಲ್ಲಿದ್ದ 17 ವರ್ಷದ ಬಾಲಕಿ ಅಸಹಾಯಕವಾಗಿ ನೋಡುತ್ತಿದ್ದಳು. ಇದು ಆಕೆಯ ಮನಸ್ಸಿನ ಮೇಲೆ ಎಷ್ಟು ಪ್ರಭಾವ ಬೀರಿರಬಹುದು ಎಂದು ಒಮ್ಮೆ ಊಹಿಸಿಕೊಳ್ಳಿ. ಮಾನಸಿಕವಾಗಿ ಈ ಘಟನೆ ಎಷ್ಟು ಘಾಸಿಗೊಳಿಸಬಹುದು. ಆ ದುಷ್ಟರ ಬಂಧನ ಆಗಬೇಕು. ಒಬ್ಬರ ಮೇಲೆ ಇಷ್ಟು ಸುಲಭವಾಗಿ ಹಲ್ಲೆ ಮಾಡಬಹುದೇ? ಕಾನೂನಿನ ಭಯವಿಲ್ಲದಂತಾಗಿದೆ? ಮನುಷ್ಯರ ಮೇಲೆ ಗೌರವ ಇಲ್ಲವೇ''? ಎಂದು ನಟಿ ರಮ್ಯಾ ಚಿಕ್ಕಮಗಳೂರು ಘಟನೆ ಖಂಡಿಸಿದ್ದಾರೆ.

ಹಲ್ಲೆ ಮಾಡಿದವರನ್ನು ವಶಕ್ಕೆ ಪಡೆದ ಪೊಲೀಸರು
ಪರಿಸರವಾದಿ ಡಿವಿ ಗಿರೀಶ್ ಅವರ ಮೇಲೆ ಹಲ್ಲೆ ಮಾಡಿದ ಯುವಕರ ಗುಂಪನ್ನು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯಲ್ಲಿ ಭಾಗಿಯಾಗಿದ್ದ ಏಳು ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆಗಸ್ಟ್ 30ರಂದು ಈ ಘಟನೆ ನಡೆದಿತ್ತು. ಗಿರೀಶ್ ಮತ್ತು ಯುವಕರ ನಡುವಿನ ವಾಗ್ವಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮೈಸೂರು ಅತ್ಯಾಚಾರ ಖಂಡಿಸಿದ್ದ ರಮ್ಯಾ
ಮೈಸೂರಿನ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಖಂಡಿಸಿದ್ದ ನಟಿ ರಮ್ಯಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಆಕ್ರೋಶ ವ್ಯಕ್ತಪಡಿಸಿದರು. "ನಾವು ಇದನ್ನ ಆಗಾಗ ಕೇಳುತ್ತಿರುತ್ತೇವೆ, ಇದು ನಿಮ್ಮ ತಪ್ಪು, ನೀವು ಹಾಗೆ ಹೇಳಬಾರದಿತ್ತು, ನೀವು ಅದನ್ನು ಮಾಡಬಾರದಿತ್ತು, ನೀವು ಅದನ್ನು ಧರಿಸಬಾರದು, ತುಂಬಾ ಬಿಗಿಯಾಗಿ, ತುಂಬಾ ಚಿಕ್ಕದಾಗಿದೆ, ತುಂಬಾ ಆಕರ್ಷಕವಾಗಿದೆ, ತುಂಬಾ ಉದ್ದವಾಗಿದೆ, ನೀವು ತಡರಾತ್ರಿ ಹೊರಗೆ ಹೋಗಬಾರದಿತ್ತು, ನಾವು ಮೇಕಪ್ ಹಾಕಬಾರದು, ಕೆಂಪು ಲಿಪ್ಸ್ಟಿಕ್ ಏಕೆ ಹಾಕುತ್ತೀರಿ, ನಾವು ಕಣ್ಣು ಮಿಟುಕಿಸಬಾರದಿತ್ತು, ನಿಮಗೆ ಅದಿರಬಾರದು, ಇದಿರಬಾದು..ಯಾಕೆ?. ಯಾಕೆಂದರೆ ಪುರುಷರು ಪುರುಷರಾಗಿ ಇರುತ್ತಾರೆ. ನಾವು ಎಲ್ಲದಕ್ಕೂ ರಾಜಿ ಮಾಡಿಕೊಳ್ಳಬೇಕು. ನಾವು ಬದಲಾಗಬೇಕು, ನಾವು ಹೊಂದಿಕೊಳ್ಳಬೇಕು, ನಾವು ಸಹಿಸಿಕೊಳ್ಳಬೇಕು.. ಈ ರೀತಿಯ ನಾನ್ಸೆಸ್ ಗಳಿಗೆ ಮೊದಲು ಕೊನೆಯಾಗಬೇಕು. ಮಹಿಳೆಯರ ವಿರುದ್ಧದ ಅಪರಾಧಗಳತ್ತಾ ಕಣ್ಣು ಮುಚ್ಚಿಕೂರಬೇಡಿ. ದಯವಿಟ್ಟು ಅದರ ಬಗ್ಗೆ ಮಾತನಾಡಿ" ಎಂದು ಆಗ್ರಹಿಸಿದ್ದಾರೆ.

ಸಿನಿಮಾನೂ ಇಲ್ಲ, ರಾಜಕೀಯದಲ್ಲೂ ಕಾಣ್ತಿಲ್ಲ
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ನಟಿ ರಮ್ಯಾ ರಾಜ್ಯ ರಾಜಕಾರಣದಿಂದ ಅಂತರ ಕಾಯ್ದುಕೊಂಡರು. ರಾಷ್ಟ್ರೀಯ ಕಾಂಗ್ರೆಸ್ನ ಸೋಶಿಯಲ್ ಮೀಡಿಯಾ ತಂಡದ ಸಾರಥ್ಯ ವಹಿಸಿದರೂ ನಿಧಾನವಾಗಿ ಅಲ್ಲಿಂದಲೂ ದೂರವಾದರು. ಈಗ ಸಕ್ರಿಯ ರಾಜಕೀಯದಲ್ಲೂ ರಮ್ಯಾ ಭಾಗಿಯಾಗಿಲ್ಲ. ಈ ಕಡೆ ಸಿನಿಮಾರಂಗದಲ್ಲೂ ಇಲ್ಲದಂತಾಗಿದ್ದಾರೆ.


Click it and Unblock the Notifications











