ಹೆಸರಾಂತ ನಟಿ ರಮ್ಯ ವಜ್ರದಾಭರಣ ಕಳ್ಳತನ
ದಕ್ಷಿಣ ಭಾರತ ಹೆಸರಾಂತ ನಟಿ ರಮ್ಯ ಅವರ ಮನೆಯಿಂದ ಸುಮಾರು 50 ಸವರನ್ ಚಿನ್ನ ಹಾಗೂ ವಜ್ರದಾಭರಣ ಸೆಟ್ ಕಳ್ಳತನವಾಗಿದೆ.
ಕಾಲಿವುಡ್ ನ ನಟಿ ರಮ್ಯ ಕೃಷ್ಣ ಚೆನ್ನೈನ ಇಂಗಂಬಾಕಂನಲ್ಲಿರುವ ಮನೆಯಲ್ಲಿ ಕಳ್ಳತನ ಸಂಭವಿಸಿದೆ. ಚೆನ್ನೈ ಪೊಲೀಸರು ಅನುಮಾನದ ಮೇಲೆ ಮನೆಗೆಲಸದಾಕೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಇಂಗಂಬಾಕಂನ ಆಲಿವ್ ಬೀಚ್ ಅವಿನ್ಯೂನಲ್ಲಿರುವ ರಮ್ಯ ಕೃಷ್ಣರ ಬಂಗಲೆಯಲ್ಲಿ ರಮ್ಯ ಕೃಷ್ಣ ತನ್ನ ಪೋಷಕರು ಹಾಗೂ ಮಗನೊಂದಿಗೆ ವಾಸವಾಗಿದ್ದಾರೆ.
ಆರೋಪಿಯನ್ನು 25 ವರ್ಷದ ಆಂಧ್ರಪ್ರದೇಶದ ಗುಂಟೂರು ಮೂಲದ ಜ್ಯೋತಿ ಎಂದು ಗುರುತಿಸಲಾಗಿದೆ. ಕಳೆದ 6 ವರ್ಷಗಳಿಂದ ಆಕೆ ರಮ್ಯ ಕೃಷ್ಣ ಮನೆಗೆಲಸ ಮಾಡಿಕೊಂಡಿದ್ದಳು.
ಕಳೆದ ಆಗಸ್ಟ್ ನಲ್ಲಿ ರಮ್ಯ ಮನೆಯಲ್ಲಿ ಒಂದಷ್ಟು ಒಡವೆ ವಸ್ತ್ರ ಕಳ್ಳತನವಾಗಿತ್ತು. ಈ ಬಗ್ಗೆ ನೀಲಕರೈ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಲಾಗಿತ್ತು. ಆದರೆ, ಜ್ಯೋತಿ ಮೇಲೆ ಯಾವುದೇ ಅನುಮಾನ ಪಟ್ಟಿರಲಿಲ್ಲ.
ಇದಾದ ಮೇಲೆ ಇನ್ನು ಕೆಲವು ಆಭರಣಗಳು ನಾಪತ್ತೆಯಾದವು. ಆಗಲೂ ರಮ್ಯ ಅವರಿಗೆ ಜ್ಯೋತಿ ಮೇಲೆ ಅನುಮಾನ ಬರಲೇ ಇಲ್ಲ. ರಮ್ಯ ಕೃಷ್ಣ ಅವರು ಸೀರಿಯಲ್ ಶೂಟಿಂಗ್ ಗಾಗಿ ಬಹುಕಾಲ ಪ್ರವಾಸನಿರತರಾಗಿರುತ್ತಿದ್ದರು.
ರಮ್ಯ ಅವರ ಮಗ ತನ್ನಜ್ಜನ ಜೊತೆ ಟೆನ್ನಿಸ್ ಕ್ಲಾಸ್ ಗೆ ಹೋಗುತ್ತಿದ್ದ. ರಮ್ಯ ತಾಯಿ ಕೂಡಾ ಶಾಪಿಂಗ್ ಗೆ ಹೊರಗೆ ಹೋಗುವುದು ಮಾಮೂಲಿಯಾಗಿತ್ತು. ಮನೆಯಲ್ಲಿ ಯಾರು ಇಲ್ಲದ ವೇಳೆ ಜ್ಯೋತಿ ಈ ಕೃತ್ಯ ಎಸೆಗಿರುವ ಸಂಶಯ ಬಂದಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.
ಕಳೆದ ಸೋಮವಾರ ಜ್ಯೋತಿ ತನ್ನ ಊರಿಗೆ ಹೋಗುತ್ತಾಳೆ. ರಮ್ಯ ಕೃಷ್ಣನ್ ಅವರ ತಾಯಿಗೆ ತಮ್ಮ ಕೆಲವು ಆಭರಣಗಳು ಕಾಣೆಯಾಗಿರುವುದು ಕಂಡು ಬರುತ್ತದೆ. ಗುರುವಾರ ಕೆಲಸಕ್ಕೆ ಹಿಂತಿರುಗಿದ ಜ್ಯೋತಿಯನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. ಜ್ಯೋತಿ ಸಮರ್ಪಕ ಉತ್ತರ ನೀಡದ ಕಾರಣ ಅನುಮಾನಗೊಂಡು ಸಮೀಪದ ಪೊಲೀಸರಿಗೆ ದೂರು ನೀಡಿದ್ದಾರೆ.
ನಂತರ ಜ್ಯೋತಿಯನ್ನು ಬಂಧಿಸಿ, ವಿಚಾರಣೆ ನಡೆಸಿದ ಪೊಲೀಸರಿಗೆ ಸತ್ಯ ಸಿಕ್ಕಿದೆ. ನಟಿ ಮನೆಯಿಂದ ಕಳೆದ ಆರು ತಿಂಗಳಿನಲ್ಲಿ ಸುಮಾರು ಚಿನ್ನಾಭರಣ, ವಜ್ರದ ಆಭರಣಗಳನ್ನು ಕದ್ದು ಊರಿಗೆ ಸಾಗಿಸಿದ್ದೇನೆ ಎಂದು ಜ್ಯೋತಿ ತಪ್ಪೊಪ್ಪಿಗೆ ನೀಡಿದ್ದಾಳೆ.
ಜ್ಯೋತಿಯ ಗುಂಟೂರು ಸಮೀಪದ ಊರಿಗೆ ಚೆನ್ನೈ ಪೊಲೀಸ್ ತಂಡ ತೆರಳಿದ್ದು, ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆಭರಣಗಳ ಮೌಲ್ಯ ಸುಮಾರು 5 ಲಕ್ಷ ರು ಎಂದು ಅಂದಾಜಿಸಲಾಗಿದೆ. ವಜ್ರದಾಭರಣದ ಮೌಲ್ಯಮಾಪನ ಇನ್ನೂ ನಡೆದಿದೆ.
ಆಭರಣಗಳನ್ನು ಕಳೆದುಕೊಂಡ ದುಃಖಕ್ಕಿಂತ ಮನೆಗೆಲದಾಕೆಯ ನಂಬಿಕೆ ದ್ರೋಹದಿಂದ ನಟಿ ರಮ್ಯ ಸಿಟ್ಟಿಗೆದ್ದಿದ್ದಾರಂತೆ. [ಇಂಥದೇ ಮತ್ತೊಂದು ಘಟನೆ]


Click it and Unblock the Notifications












