"KGF ಸಾಂಗ್ ಎಲ್ಲರೂ ಬಳಸುತ್ತಿದ್ದಾರೆ, ಲಹರಿ ವೇಲು ಬಿಜೆಪಿ ಟಿಕೆಟ್ಗಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ": ರಮ್ಯಾ
ರಾಹುಲ್ ಗಾಂಧಿಯವರು ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳಿಗೆ 'KGF- 2' ಚಿತ್ರದ 'ಸುಲ್ತಾನ್' ಹಾಡನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಕಾಪಿರೈಟ್ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಂಸದೆ, ನಟಿ ರಮ್ಯಾ ಬಿಜೆಪಿ ಟಿಕೆಟ್ಗಾಗಿ ಲಹರಿ ವೇಲು ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಯಾತ್ರೆಯಲ್ಲಿ ಸ್ಲೋ ಮೋಷನ್ನಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋಗೆ ಹಿನ್ನೆಲೆಯಲ್ಲಿ 'ಸುಲ್ತಾನ್' ಹಾಡನ್ನು ಬಳಸಿ ಬಿಲ್ಡಪ್ ಕೊಡಲಾಗಿತ್ತು. ವಿಡಿಯೋದಲ್ಲಿ 'ಭಾರತ್ ಜೋಡೋ ಯಾತ್ರ' ಎಂದು ಬರೆಯಲಾಗಿದೆ. ಇದೇ ವಿಡಿಯೋವನ್ನು ಕಾಂಗ್ರೆಸ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ. ಬೆಂಗಳೂರು ಮೂಲದ ಎಂಆರ್ಟಿ ಸಂಸ್ಥೆಯು 'ಕೆಜಿಎಫ್ 2' ಸಿನಿಮಾದ ಹಿಂದಿ ಆಡಿಯೋ ರೈಟ್ಸ್ ಖರೀದಿಸಿದೆ. ಹಿಂದಿ ಹಾಡನ್ನು 'ಭಾರತ್ ಜೋಡೋ ಯಾತ್ರೆ'ಯ ವಿಡಿಯೋಗೆ ಬಳಸಿರುವ ಕಾರಣ ಇದೀಗ ಆ ಸಂಸ್ಥೆ ಕಾನೂನು ಹೋರಾಟಕ್ಕೆ ಮುಂದಾಗಿದೆ.

ಅನುಮತಿ ಇಲ್ಲದೇ ಹಾಡನ್ನು ಬಳಿಸಿಕೊಂಡಿರುವುದಕ್ಕೆ ಯಶವಂತಪುರ ಪೊಲೀಸರು ಕಾಂಗ್ರೆಸ್ ಪಕ್ಷ ಸೇರಿದಂತೆ ಪಕ್ಷದ ಪ್ರಮುಖರಾದ ಜೈ ರಾಮ್ರಮೇಶ್, ಸುಪ್ರಿಯಾ ಶ್ರೀನಾಥ್ ಹಾಗೂ ರಾಹುಲ್ ಗಾಂಧಿ ಅವರುಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಇನ್ನು ಕೋರ್ಟ್ ಕಾಂಗ್ರೆಸ್ ಪಕ್ಷದ ಟ್ವಿಟ್ಟರ್ ಅಕೌಂಟ್ ಬ್ಲಾಕ್ ಮಾಡುವಂತೆ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಮ್ಯಾ "ಲಹರಿ ವೇಲು ಬಿಜೆಪಿ ಟಿಕೆಟ್ಗಾಗಿ ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಅವರು ಈ ರೀತಿ ಮಾಡುತ್ತಿರುವುದು ಬೇಸರವಾಗುತ್ತಿದೆ. KGF ಚಿತ್ರದ ಹಾಡುಗಳನ್ನು ಎಲ್ಲರೂ ಬಳಸಿಕೊಳ್ಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಬಳಸಿದರೆ ಮಾತ್ರ ಲಹರಿ ವೇಲು ಅವರಿಗೆ ಸಮಸ್ಯೆ ಆಗುತ್ತದೆ" ಎಂದು ರಮ್ಯಾ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಒಮ್ಮೆ ಮಂಡ್ಯ ಸಂಸದೆಯಾಗಿ ಆಯ್ಕೆ ಆಗಿದ್ದ ನಟಿ ರಮ್ಯಾ, ಮತ್ತೊಮ್ಮೆ ಸೋಲುಂಡಿದ್ದರು. ನಂತರ ದೆಹಲಿಗೆ ಹೋಗಿದ್ದ ರಮ್ಯಾ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆಯಾಗಿಯೂ ಸೇವೆ ಸಲ್ಲಿಸಿದ್ದರು. ನಂತರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಬಂದಿದ್ದರು. ಸದ್ಯ ರಮ್ಯಾ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ತಮ್ಮದೇ ಸ್ವತಃ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದಾರೆ. ಇನ್ನು ಡಾಲಿ ಧನಂಜಯ ಜೋಡಿಯಾಗಿ 'ಉತ್ತರಕಾಂಡ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿದೆ.

ಇತ್ತೀಚೆಗೆ ನಟಿ ರಮ್ಯಾ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ರಮ್ಯಾ ಕೂಡ ಹೆಜ್ಜೆ ಹಾಕಿದ್ದರು. ರಾಯಚೂರಿನಲ್ಲಿ ನಡೆದ ಭಾರತ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರೊಂದಿಗೆ ಹೆಜ್ಜೆ ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ರಾಹುಲ್ ಅವರೊಂದಿಗೆ ಉಭಯ ಕುಶಲೋಪರಿ ನಡೆಸಿದ್ದು ಕೂಡ ಗಮನ ಸೆಳೆದಿತ್ತು. ಆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜ್ಯ ಮತ್ತು ರಾಷ್ಟ್ರ ನಾಯಕರು ಜೊತೆಗಿದ್ದರು.


Click it and Unblock the Notifications











