"ನನ್ನ 'ಚಾಂಪ್' ಕಳೆದು ಹೋಗಿದ್ದಾನೆ ಹುಡುಕಿ ಕೊಡಿ" ಎಂದ ರಮ್ಯಾ
ಕಳೆದ ಮೂರ್ನಾಲ್ಕು ದಿನಗಳಿಂದ ನಟಿ ರಮ್ಯಾ ರಾಜ್ಯ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಮಂಡ್ಯ, ವರುಣ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಬೇಟೆ ನಡೆಸಿದ್ದಾರೆ. ಇನ್ನು ದಿಢೀರನೆ ತಮ್ಮ ಸಾಕು ನಾಯಿ ಕಳೆದು ಹೋಗಿದೆ ಹುಡುಕಿ ಕೊಡಿ ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ. ಇನ್ಸ್ಟಾಗ್ರಾಂ, ಟ್ವಿಟರ್ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
"ನನ್ನ ಸಾಕು ನಾಯಿ ಕಾಣೆಯಾಗಿದೆ. ಹುಡುಕಲು ಸಹಾಯ ಮಾಡಿಕೊಡಿ. ಕಪ್ಪು ಬಣ್ಣದ ನಾಯಿಗೆ ಕೊಂಚ ಕಣ್ಣು ಸರಿಯಾಗಿ ಕಾಣಿಸಲ್ಲ. ಸುರಕ್ಷಿತವಾಗಿ ಹುಡುಕಿ ಕೊಟ್ಟರೆ ಸೂಕ್ತ ಬಹುಮಾನ ನೀಡಲಾಗುವುದು. ಇಂದಿನಿಂದ(ಮೇ 6) ರೇಶ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ನಿಂದ ಚಾಂಪ್ ಕಾಣೆಯಾಗಿದ್ದಾನೆ" ಎಂದು ರಮ್ಯಾ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಕಾಮೆಂಟ್ ಮಾಡಿ ಯೋಚಿಸಬೇಡಿ ಚಾಂಪ್ ಸಿಗುತ್ತಾನೆ ಎಂದ ಬರೆಯುತ್ತಿದ್ದಾರೆ.

ಪ್ರಾಣಿ ಪ್ರೇಮಿಯಾಗಿರುವ ರಮ್ಯಾ ಬಹಳ ವರ್ಷಗಳಿಂದ ನಾಯಿಗಳನ್ನು ಸಾಕುತ್ತಿದ್ದಾರೆ. ಇತ್ತೀಚೆಗೆ ವೀಕೆಂಡ್ ವಿತ್ ರಮೇಶ್ ಶೋನಲ್ಲೂ ರಮ್ಯಾ ಈ ಬಗ್ಗೆ ಮಾತನಾಡಿದ್ದರು. ನಾಯಿಗಳು ಅಂದ್ರೆ ತುಂನಾ ಇಷ್ಟ. ನನಗೆ ಮಕ್ಕಳು ಇಲ್ಲ. ನಾಯಿಗಳು ನನಗೆ ಮಕ್ಕಳ ಸಮಾನ. ನನ್ನ ಬಳಿ ಈಗ 2 ನಾಯಿಗಳು ಇವೆ. ಒಂದು ನಾಯಿ ಹೆಸರು ಚಾಂಪ್. ಅದಕ್ಕೆ ಈಗ 16 ವರ್ಷ ವಯಸ್ಸು. ಚಾಂಪ್ಗೆ ಹೃದಯ ಸಂಬಂಧಿ ಸಮಸ್ಯೆ ಇದೆ. ಮತ್ತೊಂದು ನಾಯಿ ಹೆಸರು ರಾಣಿ ಎಂದು ಹೇಳಿದ್ದರು.
ಇನ್ನು ಗೋವಾದಲ್ಲಿ ರಾಣಿ ಹೆಸರಿನ ನಾಯಿ ಮೇಲೆ ಯಾರೋ ಗಾಡಿ ಹತ್ತಿಸಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದರು. ಅದಕ್ಕೆ ಚಿಕಿತ್ಸೆ ನೀಡಿ ರಾಣಿ ಎಂದು ಹೆಸರಿಟ್ಟಿದ್ದೀನಿ. ಅದು ಬಂದ ಮೇಲೆ ನನ್ನ ಜೀವನ ಬದಲಾಯಿತು ಎಂದು ಭಾವುಕರಾಗಿದ್ದರು. ಇನ್ನು ಬ್ರ್ಯಾಂಡಿ ಹೆಸರಿನ ಮತ್ತೊಂದು ನಾಯಿಯ ಬಗ್ಗೆಯೂ ಮಾತನಾಡಿದ್ದರು. ಇದರ ಬಗ್ಗೆ ಬಹಳ ಹಿಂದೆಯೂ ಸುದ್ದಿ ಆಗಿತ್ತು. ಯಾಕಂದ್ರೆ ರೆಬೆಲ್ ಸ್ಟಾರ್ ಅಂಬರೀಶ್ ಅದನ್ನು ರಮ್ಯಾಗೆ ಉಡುಗೊರೆಯಾಗಿ ಕೊಟ್ಟಿದ್ದರು.

ಬ್ರ್ಯಾಂಡಿ ತೀರಿಕೊಂಡು ಒಂದು ವರ್ಷ ಆಯ್ತು ಎಂದು ಹೇಳಿದ್ದರು. 'ಲಕ್ಕಿ' ಸಿನಿಮಾದಲ್ಲೂ ರಮ್ಯಾ ನಾಯಿ ಪ್ರೇಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಬಹಳ ವರ್ಷಗಳ ನಂತರ ನಟಿ ರಮ್ಯಾ ಚಿತ್ರರಂಗಕ್ಕೆ ವಾಪಸ್ ಬಂದಿದ್ದಾರೆ. ಆಪಲ್ ಬಾಕ್ಸ್ ಸಂಸ್ಥೆ ಹುಟ್ಟುಹಾಕಿ ಸಿನಿಮಾಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಬ್ಯಾನರ್ನ ಮೊದಲ ಸಿನಿಮಾ 'ಸ್ವಾತಿ ಮುತ್ತಿನ ಮಳೆಹನಿಯೇ' ರಿಲೀಸ್ಗೆ ರೆಡಿಯಾಗಿದೆ. ಇನ್ನು ಧನಂಜಯ ಜೊತೆ 'ಉತ್ತರಕಾಂಡ' ಸಿನಿಮಾದಲ್ಲಿ ರಮ್ಯಾ ಬಣ್ಣ ಹಚ್ಚಿದ್ದಾರೆ.
ಸದ್ಯ ರಾಜ್ಯದಲ್ಲಿ ಚುನಾವಣೆ ಕಣ ರಂಗೇರಿದ್ದು ರಮ್ಯಾ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಸದ್ಯಕ್ಕೆ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡಲ ಎಂದಿದ್ದಾರೆ. ಗೌಡರ ಹುಡುಗನನ್ನು ಹುಡುಕುತ್ತಿದ್ದೇನೆ. ಒಳ್ಳೆ ಹುಡುಗ ಇದ್ದರೆ ಹೇಳಿ ಮದುವೆ ಆಗುತ್ತೇನೆ ಎಂದಿದ್ದರು. ಮಂಡ್ಯದಲ್ಲಿ ಒಮ್ಮೆ ಸಂಸದೆಯಾಗಿ ಗೆದ್ದು ಮತ್ತೊಮ್ಮೆ ಸೋತಿದ್ದ ರಮ್ಯಾ ಆ ನಂತರ ಮಂಡ್ಯದಿಂದ ದೂರಾಗಿದ್ದರು. ದೆಹಲಿ ಸೇರಿಕೊಂಡಿದ್ದರು. ಅಂಬರೀಶ್ ಅಂತ್ಯಕ್ರಿಯೆಗೂ ಬಂದಿರಲಿಲ್ಲ. ಇದು ಅಂಬಿ ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿತ್ತು.
ಅಂಬರೀಶ್ ಅವರ ಅಂತ್ಯಕ್ರಿಯೆಗೆ ಯಾಕೆ ಬರಲಿಲ್ಲ ಎನ್ನುವುದನ್ನು ಇತ್ತೀಚೆಗೆ ಮಂಡ್ಯದಲ್ಲೇ ರಮ್ಯಾ ಹೇಳಿದ್ದರು. ಕಾಲಿಗೆ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದೆ. ಹಾಗಾಗಿ ಬರಲು ಸಾಧ್ಯವಾಗಲಿಲ್ಲ ಎಂದು ವಿವರಿಸಿದ್ದರು.


Click it and Unblock the Notifications











