ಭಗವದ್ಗೀತೆಯನ್ನು ನಿಮ್ಮಷ್ಟಕ್ಕೆ ತಿರುಚಿ ದ್ವೇಷ ಹರಡಬೇಡಿ; 'ಧುರಂಧರ್-2' ಬಗ್ಗೆ ಮತ್ತೆ ರಮ್ಯಾ ಕಾಮೆಂಟ್
'ಧುರಂಧರ್' ಸಿನಿಮಾ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ನಟಿ ರಮ್ಯಾ ಕೂಡ ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾ ನೋಡಿದ್ರೆ ನಿಮ್ಮ ಹಣ ವ್ಯರ್ಥ, ನಿದ್ದೆ ಬರಿಸುವಂತಿದೆ. ಕೆಲ ಸನ್ನಿವೇಶಗಳ ತಮಾಷೆ ಎನಿಸುತ್ತದೆ ಎಂದು ಕಾಮೆಂಟ್ ಮಾಡಿದ್ದರು. ಆಕೆಯ ರಿವ್ಯೂ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗಿದೆ. ಕೆಲವರು ಆಕೆಯ ರಿವ್ಯೂ ನೋಡಿ ಮೆಚ್ಚಿಕೊಂಡರೆ ಕೆಲವರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಪಾಕಿಸ್ತಾನಕ್ಕೆ ಹೋದರೆ ನರಕಕ್ಕೆ ಹೋದಂತೆ ಎಂದು 2015ರಲ್ಲಿ ಮನೋಹರ್ ಪರಿಕ್ಕರ್ ಹೇಳಿದ್ದರು. ಅದರ ಬೆನ್ನಲ್ಲೇ ರಮ್ಯಾ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಪಾಕಿಸ್ತಾನದ ಜನ ಬಹಳ ಒಳ್ಳೆಯವರು. ಪಾಕ್ ನರಕ ಅಲ್ಲ ಎಂದು ಕೌಂಟರ್ ನೀಡಿದ್ದರು. ಈ ವಿಷಯವನ್ನು ಪ್ರಸ್ತಾಪಿಸಿ ನಟಿ ರಮ್ಯಾ ವಿರುದ್ಧ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಪಾಕಿಸ್ತಾನ ನರಕ ಅಲ್ಲ ಎಂದವರು 'ಧುರಂಧರ್- 2' ಸಿನಿಮಾ ನೋಡಿ ಇದೇ ರೀತಿ ರಿವ್ಯೂ ಮಾಡ್ತಾರೆ ಎಂದು ವ್ಯಂಗ್ಯವಾಡುತ್ತಿದ್ದಾರೆ. ಇದೀಗ ಮತ್ತೆ 'ಧುರಂಧರ್- 2' ಬಗ್ಗೆ ರಮ್ಯಾ ಟ್ವೀಟ್ ಮಾಡಿದ್ದಾರೆ.

'ಧುರಂಧರ್- 2' ಚಿತ್ರದಲ್ಲಿ ಭಗವದ್ಗೀತೆಯನ್ನು ಬಳಸಿಕೊಂಡಿರುವ ಪರಿಯ ಬಗ್ಗೆ ರಮ್ಯಾ ಕಾಮೆಂಟ್ ಮಾಡಿದ್ದಾರೆ. "ಸಿನಿಮಾಗಳು ಭಗವದ್ಗೀತೆಯನ್ನು ಹೇಗೆ ಅರ್ಥೈಸುತ್ತವೆ ಎನ್ನುವುದೇ ನನಗೆ ಬಹಳ ಬೇಸರ ತರಿಸುತ್ತದೆ. ತುಂಬಾ ಆಳವಾದ ತತ್ತ್ವಶಾಸ್ತ್ರವನ್ನು ಹೊರಗಿನ ಸಂಘರ್ಷ ಅಥವಾ ಪ್ರಚಾರಕ್ಕೆ ನ್ಯಾಯ ನೀಡುವ ಮಟ್ಟಕ್ಕೆ ಇಳಿಬಿಡುತ್ತಾರೆ. ಕೃಷ್ಣನು ಯುದ್ಧಭೂಮಿಯ ಬಗ್ಗೆ ಮಾತನಾಡುವಾಗ ಅದು ಕೇವಲ ಭೌತಿಕ ಯುದ್ಧವಲ್ಲ. ಆ ಯುದ್ಧಭೂಮಿ ನಮ್ಮ ಮನಸ್ಸು. ಅದೇ ರೀತಿ ಶತ್ರು ಎಂದರೆ ಇನ್ನೊಬ್ಬ ವ್ಯಕ್ತಿ, ಗುಂಪು, ಜಾತಿ, ವರ್ಗ ಅಲ್ಲ. ಅದು ಅಸ್ಥಿರ ಮನಸ್ಸು, ಅಜ್ಞಾನ, ಅಹಂಕಾರ, ಆಸೆ, ಆಸಕ್ತಿ, ನಕಾರಾತ್ಮಕ ಚಿಂತನೆಗಳು. ಧರ್ಮ ಎಂದರೆ ಇತರರ ವಿರುದ್ಧ ಹೋರಾಟವಲ್ಲ. ಧರ್ಮ ಎಂದರೆ ನಮ್ಮ ನಿಜಸ್ವಭಾವದೊಂದಿಗೆ ಹೊಂದಾಣಿಕೆ.. ಆಲೋಚನೆಗಳನ್ನೂ, ಗುರುತನ್ನೂ ಮೀರಿ, ಜಾಗೃತಿಯತ್ತ ಸಾಗುವ ಮಾರ್ಗ. ನೀವು ಬೇಕಿದ್ರೆ ಸಿನಿಮಾ ಮಾಡಿ, ಆದರೆ ಧಾರ್ಮಿಕ ಗ್ರಂಥಗಳನ್ನು ನಿಮ್ಮ ಕಥೆಗಾಗಿ ಬದಲಿಸಿ ದ್ವೇಷವನ್ನು ಹರಡಬೇಡಿ" ಎಂದು ರಮ್ಯಾ ಬರೆದುಕೊಂಡಿದ್ದಾರೆ.
ಮತ್ತೊಂದು ಟ್ವೀಟ್ ಮಾಡಿ "ರಣ್ವೀರ್ ಸಿಂಗ್ ನನಗೆ ಇಷ್ಟ.. 'ಧುರಂಧರ್-1' ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಆ ಚಿತ್ರದಲ್ಲಿ ಅವರು ತೋರಿಸಿದ ಆ ಮಟ್ಟದ ನಿಯಂತ್ರಣ ಅವರ ನಟನಾ ಸಾಮರ್ಥ್ಯವನ್ನು ಸ್ಪಷ್ಟವಾಗಿ ತೋರಿಸಿತು. ಆದರೆ ಸೀಕ್ವೆಲ್ನಲ್ಲಿ ಕೋಪ ಹಾಗೂ ಹಿಂಸೆ ಹೆಚ್ಚಾಗಿದೆ. ಪ್ರತಿಭೆಯನ್ನು ತೋರಿಸಲು ಹೆಚ್ಚು ಅವಕಾಶ ಇಲ್ಲದಂತಿದೆ. ಇದು ನನ್ನ ಅಭಿಪ್ರಾಯ ಮಾತ್ರ. ನಮ್ಮ ಅಭಿಪ್ರಾಯಗಳು ಬೇರೆಬೇರೆ ಆಗಬಹುದು, ಅದರಲ್ಲಿ ತಪ್ಪೇನಿಲ್ಲ . ಮೊದಲೇ ಹೇಳಿದಂತೆ ರಣ್ವೀರ್ ಇದಕ್ಕಿಂತ ಚೆನ್ನಾಗಿ ನಟಿಸಬಲ್ಲರು. ಅವರ ಮುಂದಿನ ಚಿತ್ರಕ್ಕಾಗಿ ಕಾಯ್ತಿದ್ದೀನಿ" ಎಂದು ಪೋಸ್ಟ್ ಮಾಡಿದ್ದಾರೆ.
ರಮ್ಯಾ ಕಾಮೆಂಟ್ ಸೆಕ್ಷನ್ ಆಫ್ ಮಾಡಿ ಟ್ವೀಟ್ ಮಾಡುತ್ತಿದ್ದಾರೆ. ಹಾಗಾಗಿ ಯಾರೂ ಕೂಡ ಕಾಮೆಂಟ್ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಆಕೆಯ ಟ್ಟೀಟ್ ರೀ-ಟ್ವೀಟ್ ಮಾಡಿ ಸಾಕಷ್ಟು ಜನ ಟೀಕಿಸುತ್ತಿದ್ದಾರೆ. ಒಬ್ಬ ಹೊಸ ಸಿನಿಮಾ ವಿಮರ್ಶಕರು ಸಿಕ್ಕರೂ ಎಂದು ವ್ಯಂಗ್ಯವಾಡುತ್ತಿದ್ದಾರೆ. ಇಷ್ಟು ದಿನ ಯಾವುದೇ ಸಿನಿಮಾ ಬಗ್ಗೆ ಮಾತನಾಡದ ರಮ್ಯಾ ಈಗ ಯಾಕೆ ಟ್ವೀಟ್ ಮೇಲೆ ಟ್ವೀಟ್ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಮತ್ತೊಂದು ಕಡೆ ರಾಮ್ಚರಣ್, ಜ್ಯೂ. ಎನ್ಟಿಆರ್, ಅಲ್ಲು ಅರ್ಜುನ್, ರಾಜಮೌಳಿ ಸೇರಿದಂತೆ ಕೆಲ ತಾರೆಯರು 'ಧುರಂಧರ್-2' ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಅವರ ಪ್ರತಿಕ್ರಿಯೆಗೆ ನಿರ್ದೇಶಕ ಆದಿತ್ಯಧರ್ ಧನ್ಯವಾದ ತಿಳಿಸಿದ್ದಾರೆ.


Click it and Unblock the Notifications











