"ರಮ್ಯಾಗೆ ದರ್ಶನ್ ಫ್ಯಾನ್ಸ್ ಕೆಟ್ಟದಾಗಿ ಮೆಸೇಜ್ ಕಳಿಸಿಲ್ಲ"; ಸಂಜನಾ ಗರ್ಲಾನಿ
ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಕೆಂಡಕಾರುತ್ತಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಪೋಸ್ಟ್ ಮಾಡಿದ್ದಕ್ಕೆ ಆಕೆಯ ವಿರುದ್ಧ ಕಿಡಿಗೇಡಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಟ್ರೋಲ್ ಮಾಡುವುದು ಮಾತ್ರವಲ್ಲ ಆಕೆಗೆ ಇನ್ಸ್ಟಾಗ್ರಾಮ್ ಅಶ್ಲೀಲ ಮೆಸೇಜ್ ಕಳುಹಿಸಿದ್ದಾರೆ. ಈ ಬಗ್ಗೆ ನಟಿ ಸಂಜನಾ ಗರ್ಲಾನಿ ವಿಭಿನ್ನ ಹೇಳಿಕೆ ನೀಡಿದ್ದಾರೆ.
ದಿನದಿಂದ ದಿನಕ್ಕೆ ನಟ ದರ್ಶನ್ ಫ್ಯಾನ್ಸ್ ಹಾಗೂ ನಟಿ ರಮ್ಯಾ ನಡುವಿನ ಸಂಘರ್ಷ ತವ್ರ ಸ್ವರೂಪ ಪಡೆದುಕೊಳ್ತಿದೆ. ತಮಗೆ ಕೆಟ್ಟದಾಗಿ ಸಂದೇಶ ಕಳುಹಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಈಗಾಗಲೇ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಸುಮಾರು 43 ಮಂದಿ ದರ್ಶನ್ ಫ್ಯಾನ್ಸ್ ಖಾತೆಗಳ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಳುಹಿಸಿದ ಮೆಸೇಜ್ಗೂ ದರ್ಶನ್ ಫ್ಯಾನ್ಸ್ ನನಗೆ ಕಳುಹಿಸಿರು ಮೆಸೇಜ್ಗ ಯಾವುದೇ ವ್ಯತ್ಯಾಸ ಇಲ್ಲ ಎಂದು ರಮ್ಯಾ ಮತ್ತೊಮ್ಮೆ ಪುನುರುಚ್ಚರಿಸಿದ್ದಾರೆ.

ರಮ್ಯಾ ಹಾಗೂ ದರ್ಶನ್ ಫ್ಯಾನ್ಸ್ ಕಿರಿಕ್ ಬಗ್ಗೆ ಈಗಾಗಲೇ ಸೆಲೆಬ್ರೆಟಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ರಮ್ಯಾ ಪರ ಬಿಗ್ಬಾಸ್ ಖ್ಯಾತಿಯ ಪ್ರಥಮ್ ಹಾಗೂ ನಟ ವಿನಯ್ ರಾಜ್ಕುಮಾರ್ ಮಾತನಾಡಿ ಬೆಂಬಲ ಸೂಚಿಸಿದ್ದಾರೆ. ಮತ್ತೊಂದು ಕಡೆ ದರ್ಶನ್ ಹಾಗೂ ಅವರ ಅಭಿಮಾನಿಗಳ ಬೆಂಬಲಕ್ಕೆ ನಟಿ ಸಂನಾ ಗರ್ಲಾನಿ ನಿಂತಿದ್ದಾರೆ. ಕಳೆದ ವರ್ಷ ದರ್ಶನ್ ಬಂಧನ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಮೊದಲು ಪ್ರತಿಕ್ರಿಯಿಸಿ ದರ್ಶನ್ ಪರ ಪೋಸ್ಟ್ ಮಾಡಿದವರು ಸಂಜನಾ. ಆ ಬಳಿಕ ಕೂಡ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ತಪ್ಪು ಮಾಡಿಲ್ಲ ಎಂದು ಆಕೆ ಹೇಳುತ್ತಾ ಬರ್ತಿದ್ದಾರೆ.
ಸದ್ಯ ರಮ್ಯಾ ಹಾಗೂ ದರ್ಶನ್ ಫ್ಯಾನ್ಸ್ ಸೋಶಿಯಲ್ ಮೀಡಿಯಾ ವಾರ್ ಬಗ್ಗೆ ಸಂಜನಾ ಮಾತನಾಡಿದ್ದಾರೆ. R ಕನ್ನಡ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ. ರಮ್ಯಾಗೆ ದರ್ಶನ್ ಫ್ಯಾನ್ಸ್ ಕೆಟ್ಟದಾಗಿ ಮೆಸೇಜ್ ಕಳುಹಿಸಿಲ್ಲ. ಹೀಗೆ ಮೆಸೇಜ್ ಕಳುಹಿಸಿರುವವರು ದರ್ಶನ್ ಅಭಿಮಾನಿಗಳು ಎನ್ನುವುದಕ್ಕೆ ಆಧಾರ ಏನಿದೆ? ಎಂದು ಪ್ರಶ್ನಿಸಿದ್ದಾರೆ.
"ಯಾವುದೇ ಮಹಿಳೆಗೆ ಅಶ್ಲೀಲವಾಗಿ ಸಂದೇಶ ಕಳುಹಿಸುವುದು ತಪ್ಪು. ಆದರೆ ಹೀಗೆ ಅಶ್ಲೀಲವಾಗಿ ಮೆಸೇಜ್ ಮಾಡಿದವ್ರ ಹೆಸರು ಆ ಸ್ಕ್ರೀನ್ಶಾಟ್ನಲ್ಲಿ ಇದ್ಯಾ? ಪುರಾವೆ ಏನಿದೆ. ರಮ್ಯಾ ಆ ರೀತಿ ಸ್ಕ್ರೀನ್ ಶಾಟ್ ಹಾಕಿರಬಹುದು. ಅವರೆಲ್ಲಾ ದರ್ಶನ್ ಅನ್ ಅಫೀಷಿಯಲ್ ಫ್ಯಾನ್ಸ್ ಇರಬಹುದು. ದರ್ಶನ್ ಅಫೀಷಿಯಲ್ ಫ್ಯಾನ್ಸ್ ಕ್ಲಬ್ನಿಂದಲೇ ಈಗ ಒಂದು ಪೋಸ್ಟ್ ಮಾಡಿದ್ದಾರೆ. ಯಾರು ಕೂಡ ಯಾರ ವಿರುದ್ಧವೂ ಕೆಟ್ಟದಾಗಿ ಮಾತನಾಡಬೇಡಿ" ಅಂತ ಎಂದು ಸಂಜನಾ ಹೇಳಿದ್ದಾರೆ.
ರಮ್ಯಾ ದೂರು ಕೊಡಲಿ ನೋಡೋಣ ಏನು ಎಂದು ಸಂಜನಾ ತಿಳಿಸಿದ್ದಾರೆ. "ಹಾದಿ ಬೀದಿಯಲ್ಲಿ ಓಡಾಡುವವರು ಮೆಸೇಜ್ ಮಾಡ್ತಾರೆ. ದರ್ಶನ್ ಸರ್ ಅಂದ್ರೆ ಸ್ವಲ್ಪ ಇಷ್ಟ ಇರುತ್ತೆ. ಹಾಗಂತ ದರ್ಶನ್ ಫ್ಯಾನ್ಸ್ ಕೆಟ್ಟವರು ಎಂದು ದರ್ಶನ್ ಸರ್ ಹೆಸ್ರು, ಅವರ ಫ್ಯಾನ್ಸ್ ಹೆಸ್ರು ಹಾಳು ಮಾಡುವುದು ಎಷ್ಟು ಸರಿ. ಯಾರೇ ಕೆಟ್ಟ ಮೆಸೇಜ್ ಯಾರಿಗೆ ಕಳುಹಿಸಿದರೂ ತಪ್ಪೇ, ಆದರೆ ರಮ್ಯಾ ಅವರಿಗೆ ದರ್ಶನ್ ಫ್ಯಾನ್ಸ್ ಕೆಟ್ಟ ಮೆಸೇಜ್ ಕಳುಹಿಸಿದರು ಎನ್ನುವುದಕ್ಕೆ ಆಧಾರ ಏನಿದೆ?" ಎಂದು ಪ್ರಶ್ನಿಸಿದ್ದಾರೆ.
ಒಂದೇ ಚಿತ್ರರಂಗದಲ್ಲಿದ್ದು ಹೀಗೆ ಕಿತ್ತಾಟ ನೋಡುವುದಕ್ಕೆ ಬೇಸರವಾಗುತ್ತಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸರ್ ನೊಂದಿದ್ದಾರೆ. ಮತ್ತೆ ಮತ್ತೆ ಅವರಿಗೆ ಮಾನಸಿಕವಾಗಿ ಕಿರುಕುಳ ಕೊಡುವುದು ಬೇಡ. ರೇಣುಕಾಸ್ವಾಮಿ ಕುಟುಂಬ ಕೂಡ ಈ ನೋವಿನಿಂದ ಹೊರಬಂದಿಲ್ಲ. ಇಂತಹ ಸಮಯದಲ್ಲಿ ಇದೆಲ್ಲ ಬೇಡ. ರೇಣುಕಾಸ್ವಾಮಿ ಪ್ರಕರಣದಲ್ಲಿ ಕೂಡ ಸುಖಾಸುಮ್ಮನೆ ದರ್ಶನ್ ಹೆಸರು ಎಳೆದು ತಂದರು. ಈಗ ಅವರ ಅಭಿಮಾನಿಗಳ ಹೆಸರು ಎಳೆದು ತರುತ್ತಿದ್ದಾರೆ ಎಂದು ಸಂಜನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications











