ಒಲಾ ಕ್ಯಾಬ್ಸ್ ವಿರುದ್ಧ ಅಸಮಾಧಾನ ಹೊರಹಾಕಿದ ನಟಿ ಶ್ರದ್ಧಾ
ಕನ್ನಡ ಸಿನಿಮಾ ನಟಿ ಶ್ರದ್ಧಾ ಶ್ರೀನಾಥ್ 'ಯೂ ಟರ್ನ್' ಸಿನಿಮಾ ಮೂಲಕ ಎಂಟ್ರಿ ಕೊಟ್ಟು ನಂತರ ಈಗ ಹಲವು ಭಾಷೆಗಳಲ್ಲಿ ಬ್ಯುಸಿ ತಾರೆಯಾಗಿದ್ದಾರೆ.
ತಮ್ಮ ಪಾಡಿಗೆ ತಾವು ಸಿನಿಮಾಗಳಲ್ಲಿ ನಟಿಸುತ್ತಾ ಸಾಗುತ್ತಿರುವ ಶ್ರದ್ಧಾ ಶ್ರೀನಾಥ್ ಇತ್ತೀಚೆಗೆ ತಮ್ಮೊಂದಿಗೆ ಆದ ಒಂದು ಕಹಿ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಶ್ರದ್ಧಾ ಶ್ರೀನಾಥ್ ಒಲಾ ಕ್ಯಾಬ್ನಲ್ಲಿ ಬರುವಾಗ ಆ ಕಾರಿನ ಡ್ರೈವರ್ ಎಸಿ ಹಾಕಲು ನಿರಾಕರಿಸಿದ್ದಾರೆ. ಇದನ್ನು ಶ್ರದ್ಧಾ ಪ್ರಶ್ನೆ ಮಾಡಿದಾಗ ಆತ ದಯವಿಟ್ಟು ಎಸಿ ಹಾಕಲು ಕೇಳಬೇಡಿ, ಪೆಟ್ರೋಲ್ ದರಗಳು ಗಗನಕ್ಕೆ ಏರಿವೆ ಎಂದು ಮನವಿ ಮಾಡಿದ್ದಾನೆ.

ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಟಿ ಶ್ರದ್ಧಾ ಶ್ರೀನಾಥ್, ''ನನ್ನ ಕ್ಯಾಬ್ ಡ್ರೈವರ್, ಪೆಟ್ರೋಲ್ ಬೆಲೆ ಹೆಚ್ಚಾಗಿರುವ ಕಾರಣ ಎಸಿ ಹಾಕಲು ನಿರಾಕರಿಸಿದ. ಆದರೆ ನಾನು ಆತನನ್ನು ನಿಂದಿಸುತ್ತಿಲ್ಲ. ಓಲಾ ಸಂಸ್ಥೆಯು ಕಾರು ಚಾಲಕರ ಹಕ್ಕಿನ ಲಾಭವನ್ನು ಪೂರ್ಣ ನೀಡದೆ ಅವರ ಆದಾಯವನ್ನು ತಾನು ಹಿಂಡಿಕೊಳ್ಳುತ್ತಿದೆ. ಇದರ ನಡುವೆ ಕಾರಿನಲ್ಲಿ ಕೂತ ನನ್ನ ಕತ್ತಿಗೆ ಸೆಖೆಯಿಂದಾಗಿ ಕೂದಲು ಅಂಟಿಕೊಳ್ಳುತ್ತಿವೆ. ನಿಮ್ಮ ಕಾಳಜಿಗೆ ಧನ್ಯವಾದ'' ಎಂದಿದ್ದಾರೆ.
ಒಲಾ ಕ್ಯಾಬ್ ಚಾಲಕರು ಹಾಗೂ ಪ್ರಯಾಣಿಕರ ನಡುವೆ ಎಸಿ ವಿಚಾರಕ್ಕೆ ಪ್ರತಿನಿತ್ಯವವೂ ಸಮಸ್ಯೆ ಆಗುತ್ತಲೇ ಇರುತ್ತದೆ. ಸೆಲೆಬ್ರಿಟಿಗಳು ಸಹ ಇದಕ್ಕೆ ಹೊರತಲ್ಲ. ಕೆಲ ತಿಂಗಳುಗಳ ಹಿಂದೆ ನಟಿ ಸಂಜನಾ ಗಲ್ರಾನಿಗೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತು.
'ಓಲಾ ಕ್ಯಾಬ್ ಡ್ರೈವರ್ ಏಸಿ ಏರಿಸಲು ನಿರಾಕರಿಸಿದ. ಏಸಿ ಏರಿಸಲು ಹೇಳಿದಾಗ ನಮಗೆ ಬೆದರಿಕೆ ಹಾಕಿದ. ಅರ್ಧ ದಾರಿಯಲ್ಲಿಯೇ ಇಳಿಸಿ ಹೋಗುವುದಾಗಿ ಹೇಳಿದ'' ಎಂದು ಬರೆದುಕೊಂಡಿದ್ದರು. ಸಂಜನಾ, ಕ್ಯಾಬ್ನಲ್ಲಿರುವಾಗಲೇ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ನನ್ನನ್ನು ಕಿಡ್ನ್ಯಾಪ್ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದರು. ಕೂಡಲೇ ಹೊಯ್ಸಳ ಪೊಲೀಸರು ಸ್ಥಳಕ್ಕೆ ತೆರಳಿ ಸಂಜನಾಗೆ ಮರಳಿ ಕರೆ ಮಾಡಿದಾಗ ನಾನು, ತಲುಪಬೇಕಾದ ಸ್ಥಳ ತಲುಪಿದ್ದೇನೆ, ದೂರು ಕ್ಲೋಸ್ ಮಾಡಿ ಎಂದಿದ್ದರು. ಅಂತೆಯೇ ಪೊಲೀಸರು ದೂರು ಕ್ಲೋಸ್ ಮಾಡಿದ್ದರು. ಬಳಿಕ ಆ ಕ್ಯಾಬ್ ಚಾಲಕ ಮಣಿ ಸಹ ಸಂಜನಾ ವಿರುದ್ಧ ಹಲ್ಲೆಗೆ ಯತ್ನ ಹಾಗೂ ನಿಂದನೆ ದೂರು ದಾಖಲಿಸಿದ್ದರು.
ಒಲಾ ಹಾಗೂ ಊಬರ್ಗಳು ಕ್ಯಾಬ್ ಚಾಲಕರಿಗೆ ಹೆಚ್ಚಿನ ಹಣ ಪಾವತಿಸುವುದಿಲ್ಲವಾದ್ದರಿಂದ ಅವರು ಪೆಟ್ರೋಲ್ ಅನ್ನು ಉಳಿಸಿ ಆ ಹಣದಲ್ಲಿ ಲಾಭ ಮಾಡಲು ಯತ್ನಿಸುತ್ತಾರೆ. ಹಾಗಾಗಿ ಬಹುತೇಕ ಕ್ಯಾಬ್ ಚಾಲಕರು ಕಾರಿನಲ್ಲಿ ಎಸಿ ಆನ್ ಮಾಡುವುದಿಲ್ಲ. ಈ ಬಗ್ಗೆ ಹಲವರು ಈಗಾಗಲೇ ಒಲಾ, ಊಬರ್ಗೆ ದೂರು ನೀಡಿದ್ದಾರೆ.


Click it and Unblock the Notifications











