ಕಾಮುಕರನ್ನು ಶಿಕ್ಷಿಸುವ ಕಾನೂನು ಗಟ್ಟಿಯಾಗಬೇಕು- ಶ್ರುತಿ ಆಕ್ರೋಶ
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಯುವತಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ರಾಜ್ಯದ ಜನರಲ್ಲಿ ಆತಂಕ ಮೂಡಿಸಿದೆ. ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ಮುಂದುವರಿಸಿದ್ದಾರೆ. ಈ ಕಡೆಗೆ ಘಟನೆ ಬಗ್ಗೆ ಅನೇಕರು ಆಕ್ರೋಶ ಹೊರಹಾಕಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಗ್ಯಾಂಗ್ರೇಪ್ ಬಗ್ಗೆ ಹಿರಿಯ ನಟಿ ಶ್ರುತಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು, ''ಕಾಮುಕರನ್ನು ಬಂಧಿಸುವ, ಅವರನ್ನು ಶಿಕ್ಷಿಸುವ ಕಾನೂನು ಮತ್ತಷ್ಟು ಗಟ್ಟಿ ಆಗಬೇಕು'' ಎಂದಿದ್ದಾರೆ.
''ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡಿಯುತ್ತಿರುವ ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ. ಇಂತ ಪುರುಷರ ಮನಸ್ಥಿತಿ ಬದಲಾಗುವುದೆಂದು? ಇಂತಹ ಅನಿಷ್ಟ ಕಾಮುಕರನ್ನು ಬಂಧಿಸುವ, ಅವರನ್ನು ಶಿಕ್ಷಿಸುವ ಕಾನೂನು ಮತ್ತಷ್ಟು ಗಟ್ಟಿ ಆಗಬೇಕು ಎನ್ನುವುದು ಎಷ್ಟು ಸತ್ಯವೋ, ಇಂಥಹ ಪುರುಷರು ಬೆಳೆಯುವ ಮನೆಯ ವಾತಾವರಣ, ಸಂಸ್ಕಾರ, ಪೋಷಕರ ಜವಾಬ್ದಾರಿ ಅಲ್ಲಿಯೂ ಕೂಡ ಮತ್ತಷ್ಟು ಗಟ್ಟಿಯಾಗಬೇಕು ಎನ್ನುವುದು ನನ್ನ ಅಭಿಪ್ರಾಯ ಹೌದಲ್ಲವೇ?'' ಎಂದು ಹಿರಿಯ ನಟಿ ಶ್ರುತಿ ಆಕ್ರೋಶ ಹೊರಹಾಕಿದ್ದಾರೆ.
ಮಾತು ಮುಂದುವರಿಸಿ, ''ಹುಟ್ಟಿನಿಂದ ಸಾವಿನವರೆಗೆ ಹೆಣ್ಣು ಮಕ್ಕಳು ಅನುಭವಿಸುವ ಕಷ್ಟ ನೂರಾರು ಆದರೂ ಹಲವಾರು ಮಹಿಳೆಯರು ಅದನ್ನು ಹಿಮ್ಮೆಟ್ಟಿ ಇಡೀ ಭಾರತವೇ ಮೆಚ್ಚುವಂತ ಸಾಧನೆಯನ್ನು ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರದ ಘಟನೆಗಳು ಮಹಿಳೆಯ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಹಾಗಾಗದಿರಲಿ.'' ಎಂದು ಎಚ್ಚರಿಸಿದ್ದಾರೆ. ಮುಂದೆ ಓದಿ....

ಮೋಹಕ ತಾರೆ ರಮ್ಯಾ ಖಂಡನೆ
ಮೈಸೂರಿನ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಖಂಡಿಸಿರುವ ನಟಿ ರಮ್ಯಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಾವು ಇದನ್ನ ಆಗಾಗ ಕೇಳುತ್ತಿರುತ್ತೇವೆ, ಇದು ನಿಮ್ಮ ತಪ್ಪು, ನೀವು ಹಾಗೆ ಹೇಳಬಾರದಿತ್ತು, ನೀವು ಅದನ್ನು ಮಾಡಬಾರದಿತ್ತು, ನೀವು ಅದನ್ನು ಧರಿಸಬಾರದು, ತುಂಬಾ ಬಿಗಿಯಾಗಿ, ತುಂಬಾ ಚಿಕ್ಕದಾಗಿದೆ, ತುಂಬಾ ಆಕರ್ಷಕವಾಗಿದೆ, ತುಂಬಾ ಉದ್ದವಾಗಿದೆ, ನೀವು ತಡರಾತ್ರಿ ಹೊರಗೆ ಹೋಗಬಾರದಿತ್ತು, ನಾವು ಮೇಕಪ್ ಹಾಕಬಾರದು, ಕೆಂಪು ಲಿಪ್ಸ್ಟಿಕ್ ಏಕೆ ಹಾಕುತ್ತೀರಿ, ನಾವು ಕಣ್ಣು ಮಿಟುಕಿಸಬಾರದಿತ್ತು, ನಿಮಗೆ ಅದಿರಬಾರದು, ಇದಿರಬಾದು..ಯಾಕೆ?'' ಎಂದು ಪೋಸ್ಟ್ ಹಾಕಿದ್ದಾರೆ.

ಸುಮ್ಮನೆ ಕೂರಬೇಡಿ, ಮಾತಾಡಿ
''ಯಾಕೆಂದರೆ ಪುರುಷರು ಪುರುಷರಾಗಿ ಇರುತ್ತಾರೆ. ನಾವು ಎಲ್ಲದಕ್ಕೂ ರಾಜಿ ಮಾಡಿಕೊಳ್ಳಬೇಕು. ನಾವು ಬದಲಾಗಬೇಕು, ನಾವು ಹೊಂದಿಕೊಳ್ಳಬೇಕು, ನಾವು ಸಹಿಸಿಕೊಳ್ಳಬೇಕು.. ಈ ರೀತಿಯ ನಾನ್ಸೆಸ್ ಗಳಿಗೆ ಮೊದಲು ಕೊನೆಯಾಗಬೇಕು. ಮಹಿಳೆಯರ ವಿರುದ್ಧದ ಅಪರಾಧಗಳತ್ತಾ ಕಣ್ಣು ಮುಚ್ಚಿಕೂರಬೇಡಿ. ದಯವಿಟ್ಟು ಅದರ ಬಗ್ಗೆ ಮಾತನಾಡಿ" ಎಂದು ಆಗ್ರಹಿಸಿದ್ದಾರೆ.

ಕ್ರೂರಿಗಳು ಗಲ್ಲು ಶಿಕ್ಷೆಗೆ ಅರ್ಹರು
''ಎಂಥ ಕ್ರೂರಿಗಳು...
ತಾಯಿ ಹೆಣ್ಣಲ್ಲವೆ?
ಅಕ್ಕತಂಗಿ ಹೆಣ್ಣಲ್ಲವೆ?
ಮಡದಿ ಹೆಣ್ಣಲ್ಲವೆ?
ಹೆಣ್ಣು ಗೌರವಿಸದವರು ರಕ್ಕಸರು!
ಈ ಕೃತ್ಯ ಎಸಗಿದ ಕ್ರೂರಿಗಳು ಗಲ್ಲು ಶಿಕ್ಷೆಗೆ ಅರ್ಹರು!
ಈ ಕ್ರೂರ ಕೃತ್ಯಕ್ಕೆ ಖಂಡನೆ....'' ಎಂದು ಹಿರಿಯ ನಟ-ರಾಜಕಾರಣಿ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದರು.
ಇನ್ನು ನಟಿ ಅದಿತಿ ಪ್ರಭುದೇವ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಮಹಿಳೆಯರಿಗೆ ಹಲವು ಬಗೆಯಲ್ಲಿ ಕಿರುಕುಳ ನೀಡುವುದು ನಡಿಯುತ್ತಲೇ ಇದೆ. ಎಲ್ಲ ಹೆಣ್ಮಕ್ಕಳು ಸ್ಟ್ರಾಂಗ್ ಆಗಬೇಕು. ಅಸಹಾಯಕ ಸ್ಥತಿಗೆ ತಲುಪಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಪ್ರತಿಭಟನೆ
ಮೈಸೂರಿನ ಸಾಮೂಹಿಕ ಅತ್ಯಾಚಾರ ಖಂಡಿಸಿ, ಮೈಸೂರಿನ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಇನ್ನು ಈ ಘಟನೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ''ಇದೊಂದು ಆಘಾತಕಾರಿ ಘಟನೆ, ಸರ್ಕಾರ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸುತ್ತೇವೆ'' ಎಂದು ಹೇಳಿದ್ದಾರೆ.


Click it and Unblock the Notifications











