Don't Miss!
- Lifestyle ಫಳ ಫಳ ಹೊಳೆಯುವ ಕೆಂಪು ನಾಗರ ನೋಡಿದ್ದೀರಾ..? ವೈರಲ್ ಆಗ್ತಿದೆ ವಿಡಿಯೋ..!
- Technology ಬಹುನಿರೀಕ್ಷಿತ ರಿಯಲ್ಮಿ ನಾರ್ಜೋ 70 ಪ್ರೊ 5G ಲಾಂಚ್!..ಇಯರ್ಬಡ್ಸ್ ಉಚಿತ!
- News ಜಗದೀಶ್ ಶೆಟ್ಟರ್ಗೆ ಬೆಳಗಾವಿ ಸ್ಪರ್ಧೆ ಮತ್ತಷ್ಟು ಜಟೀಲ: ಗೋಬ್ಯಾಕ್ ಅಭಿಯಾನ ಯಶಸ್ವಿ ಆಯ್ತಾ?
- Automobiles ನಟ ವಿಜಯ್ ನೋಡಲು ಬಂದ ಜನಸಾಗರ: ಅಭಿಮಾನಿಗಳಿಂದ ನಟನ ಕಾರಿಗೆ ಹಾನಿ!
- Sports IPL ಬಿಡಿ, WPLನಲ್ಲಿ ಆರ್ಸಿಬಿಗೆ ಗೆದ್ದ ಮೊತ್ತಕ್ಕೂ ಸಮವಿಲ್ಲ PSL ವಿಜೇತರಿಗೆ ಸಿಕ್ಕ ಬಹುಮಾನ
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಟಕ ಕಂಪೆನಿಯಲ್ಲಿದ್ದ ನನ್ನನ್ನು ನಾಯಕಿ ಮಾಡಿದ್ದು ಶಿವಣ್ಣ-ಗೀತಕ್ಕ: ಶ್ರುತಿ
ಶಿವರಾಜ್ ಕುಮಾರ್ ನಟನೆಯ 'ಭಜರಂಗಿ 2' ಸಿನಿಮಾ ನಾಳೆ ಬಿಡುಗಡೆ ಆಗಲಿದೆ. ಶಿವರಾಜ್ ಕುಮಾರ್ ಎಂಬುದು ಮಾತ್ರವೇ ಅಲ್ಲದೆ ಹಲವು ಕಾರಣಗಳಿಗೆ ಸಿನಿಮಾ ಕುತೂಹಲ ಕೆರಳಿಸಿದೆ.
'ಭಜರಂಗಿ 2' ಸಿನಿಮಾದ ಟೀಸರ್ ಈಗಾಗಲೇ ಗಮನ ಸೆಳೆದಿದ್ದು, ಭಿನ್ನ-ಭಿನ್ನ ಮಾದರಿಯ ಪಾತ್ರಗಳು ಟೀಸರ್, ಟ್ರೇಲರ್ನಲ್ಲಿ ಗಮನ ಸೆಳೆದಿದ್ದವು ಅವುಗಳಲ್ಲಿ ಪ್ರಮುಖವಾದುದ್ದು ನಟಿ ಶ್ರುತಿ ಪಾತ್ರ.
ಹಿರಿಯ ನಟಿ ಶ್ರುತಿ ಅವರು 'ಭಜರಂಗಿ 2' ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಕಪ್ಪು ತೀಡಿದ ಬಟ್ಟಲು ಕಣ್ಣುಗಳ ಮೂಲಕ ಭೀತಿ ಹುಟ್ಟಿಸುತ್ತಿದ್ದಾರೆ ಶ್ರುತಿ. ಇದೇ ಮೊದಲ ಬಾರಿಗೆ ಇಂಥಹಾ ಒಂದು ಪಾತ್ರದಲ್ಲಿ ಶ್ರುತಿ ಕಾಣಿಸಿಕೊಳ್ಳುತ್ತಿದ್ದಾರೆ.
ಎರಡು ದಿನದ ಹಿಂದಷ್ಟೆ 'ಭಜರಂಗಿ 2' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಆ ಕಾರ್ಯಕ್ರಮದಲ್ಲಿ ನಟಿ ಶ್ರುತಿ 'ಭಜರಂಗಿ 2' ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.
ನನಗೆ ನಂಬಿಕೆಯಿರಲಿಲ್ಲ, ಹರ್ಷಾಗೆ ಇತ್ತು: ಶ್ರುತಿ
''ಇಷ್ಟು ದಿನ ನಾನು ಪಾತ್ರಗಳ ಮೂಲಕ ಅಳಿಸಿದ್ದೆ. ಆದರೆ ಹರ್ಷ ನನಗೆ ಈ ಪಾತ್ರ ನೀಡಿ ಅಳಿಸಿದ್ದಾರೆ. ಅವರು ನನಗೆ ಇಂಥಹಾ ಪಾತ್ರವೊಂದನ್ನು ನೀಡಿದಾಗ ಭಯಕ್ಕೆ ನನಗೆ ಅಳು ಬಂದು ಬಿಟ್ಟಿತು. ಆರಂಭದಲ್ಲಿ ನನಗೆ ಬಹಳ ಭಯ ಇತ್ತು. ಇದೆಲ್ಲ ನನ್ನ ಕೈಯಿಂದ ಸಾಧ್ಯವಿಲ್ಲವೆಂದು. ಆದರೆ ಹರ್ಷಾಗೆ ಬಹಳ ನಂಬಿಕೆ ಇತ್ತು. ನಾನು ಈ ಪಾತ್ರವನ್ನು ಚೆನ್ನಾಗಿ ನಿಭಾಯಿಸಬಲ್ಲೆನೆಂದು'' ಎಂದು ನೆನಪಿಸಿಕೊಂಡರು ಶ್ರುತಿ.
ಅಡ್ವಾನ್ಸ್ ಬದಲು ಚುಟ್ಟಾ ಕಳಿಸಿದ್ದರು: ಶ್ರುತಿ
''ಆರಂಭದಲ್ಲಿ ಪಾತ್ರ ಖಡಕ್ ಆಗಿ ಇರಲಿದೆ ಎಂದಷ್ಟೆ ಹೇಳಿದರು ನಾನೂ ಅದನ್ನು ಕೇಳಿ ಒಪ್ಪಿಕೊಂಡು ಬಿಟ್ಟೆ. ಆದರೆ ಆ ಪಾತ್ರದಲ್ಲಿ ಅಷ್ಟೋಂದು ವೇರಿಯೇಷನ್ಸ್, ವೈಲೆನ್ಸ್ ಇರುತ್ತದೆ ಎಂಬುದು ಗೊತ್ತಿರಲಿಲ್ಲ. ಪಾತ್ರ ಒಪ್ಪಿಕೊಂಡ ಮೇಲೆ ಮನೆಗೆ ಅಡ್ವಾನ್ಸ್ ಕಳಿಸುತ್ತಾರೆ ಎಂದು ಕಾದಿದ್ದೆ. ಆದರೆ ಹರ್ಷ ಒಂದು ಕವರ್ನಲ್ಲಿ ಚುಟ್ಟ ಕಳಿಸಿದ್ದರು. ಚುಟ್ಟಾ ಸೇದುವುದು ಅಭ್ಯಾಸ ಮಾಡಿಕೊಳ್ಳಿ ಪಾತ್ರಕ್ಕೆ ಬೇಕಾಗುತ್ತದೆ ಎಂದರು. ನನಗಂತೂ ಆ ಚುಟ್ಟಾ ಸೇದುತ್ತಾ ಅಭಿನಯಿಸುವುದು ಬಹಳ ಕಷ್ಟವಾಗಿತ್ತು. ಚುಟ್ಟಾ ಇಟ್ಟುಕೊಂಡು ಡೈಲಾಗ್ ಹೇಳುವುದು ಬಹಳ ಕಷ್ಟವಾಗಿತ್ತು, ಶೂಟಿಂಗ್ ಸೆಟ್ನಲ್ಲಿ ಸಾಕಷ್ಟು ಚುಟ್ಟಾ ಖಾಲಿ ಮಾಡಿದ್ದೇನೆ'' ಎಂದರು ಶ್ರುತಿ.
ಶಿವರಾಜ್ ಕುಮಾರ್ ಆತ್ಮವಿಶ್ವಾಸ ತುಂಬಿದರು: ಶ್ರುತಿ
''ಪಾತ್ರಕ್ಕೆ ಮೊದಲ ಬಾರಿಗೆ ಮೇಕಪ್ ಹಾಕಿದಾಗಲಂತೂ ಬಹಳ ಭಯವಾಗಿತ್ತು. ನನ್ನನ್ನು ಈ ಅವತಾರದಲ್ಲಿ ನೋಡಿ ನಕ್ಕು ಬಿಡುತ್ತಾರೆ ಎಂದುಕೊಂಡಿದ್ದೆ. ಹಲವರಿಗೆ ಪದೇ-ಪದೇ ಕೇಳಿದ್ದೆ. ನಗು ಬರ್ತಿಲ್ಲ ತಾನೆ ಎಂದು. ಹೇಗೊ ಧೈರ್ಯ ಮಾಡಿ ಮೇಕಪ್ ಮಾಡಿಕೊಂಡು ಸೆಟ್ಗೆ ಬಂದಾಗ ಅಲ್ಲಿದ್ದ ಶಿವಣ್ಣ ಹತ್ತಿರ ಬಂದು ಅದ್ಭುತವಾಗಿ ಕಾಣುತ್ತಿದ್ದೀರ. ಈ ಮೇಕಪ್ ನಿಮಗೆ ಚೆನ್ನಾಗಿ ಸೂಟ್ ಆಗುತ್ತಿದೆ ಎಂದರು. ಆಗ ನನಗೆ ಧೈರ್ಯ ಬಂತು. ಶಿವಣ್ಣ ಆ ಧೈರ್ಯ ನನಗೆ ತುಂಬದೇ ಇದ್ದಿದ್ದರೆ ಆ ಪಾತ್ರ ನನಗೆ ಮಾಡಲು ಆಗುತ್ತಿರಲಿಲ್ಲ'' ಎಂದರು ನಟಿ ಶ್ರುತಿ.
''ನಾಟಕಗಳಲ್ಲಿ ಅಭಿನಯಿಸುತ್ತಿದ್ದ ನನ್ನನ್ನು ಗುರುತಿಸಿದ್ದು ಶಿವಣ್ಣ-ಗೀತಕ್ಕ''
ಎಲ್ಲೋ ನಾಟಕ ಕಂಪೆನಿಯಲ್ಲಿದ್ದೆ, ಹಳ್ಳಿಗಳಲ್ಲಿ ನಾಟಕ ಮಾಡುತ್ತಿದ್ದೆ. ನನ್ನ ಫೋಟೊ ನೋಡಿ ಈ ಹುಡುಗಿ ನಾಯಕಿ ಆಗಬೇಕು ಎಂದು ನನ್ನನ್ನು ನಟಿಯನ್ನಾಗಿ ಆಯ್ಕೆ ಮಾಡಿದ್ದು ಇಬ್ಬರು ದಂಪತಿ ಅದುವೇ ಶಿವರಾಜ್ ಕುಮಾರ್ ಮತ್ತು ಗೀತಕ್ಕ. ಅವರಿಗೆ ನಾನು ಋಣಿಯಾಗಿದ್ದೇನೆ. ನನ್ನಂಥಹಾ ಹಲವಾರು ನಟಿಯರನ್ನು ಅವರ ಬ್ಯಾನರ್ ಪರಿಚಯಿಸಿದೆ. ಹಲವರಿಗೆ ಜೀವನ ಕೊಟ್ಟಿದೆ. ಈ ಸಿನಿಮಾದಲ್ಲಿಯೂ ಅಷ್ಟೆ ಶಿವರಾಜ್ ಕುಮಾರ್ ನೀಡಿದ ಆಶ್ಮವಿಶ್ವಾಸದಿಂದ ಭಿನ್ನ ಪಾತ್ರ ಮಾಡುವಂತಾಯಿತು. ನಿರ್ದೇಶಕ ಹರ್ಷ ಸಹ, ಮೂವತ್ತು ವರ್ಷ ಹಳೆಯ ನಾಯಕಿ ನಟಿಯನ್ನು ಹೀಗೆ ಭಿನ್ನವಾಗಿ ಸಹ ಪ್ರೆಸೆಂಟ್ ಮಾಡಬಹುದು ಎಂಬ ಅವರ ಯೋಚನೆ, ನಂಬಿಕೆಗೆ ಋಣಿ ಎಂದರು ಶ್ರುತಿ. 'ಭಜರಂಗಿ 2' ಸಿನಿಮಾ ಅಕ್ಟೋಬರ್ 29ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಶ್ರುತಿ ಜೊತೆಗೆ ನಾಯಕಿಯಾಗಿ 'ಟಗರು' ಭಾವನಾ, ಖಳನಟನಾಗಿ ಸೌರವ್ ಲೋಕೇಶ್, ಚೆಲುವರಾಜ್, ಶಿವರಾಜ್ ಕೆ.ಆರ್.ಪೇಟೆ, ರಮೇಶ್ ಪಂಡಿತ್ ಇನ್ನೂ ಹಲವರು ನಟಿಸಿದ್ದಾರೆ