ತರುಣ್ ಸುಧೀರ್ ಜೊತೆ ಮದುವೆ, ನನ್ನ ಬದುಕಿನ ನಿರ್ದೇಶಕ ಸಿಕ್ಕಾಯ್ತು ಎಂದ ಸೋನಲ್..!
ಪ್ರೀತಿಗೆ ಭಾಷೆಗಳ, ಜಾತಿ ಮತಗಳ ಹಂಗಿಲ್ಲ. ಅದು ಮೊದಲ ಮಳೆಯಲ್ಲಿ ಆಗ ತಾನೇ ಮೊಳಕೆಯೊಡೆದು ಹುಟ್ಟಿದ ಪುಟ್ಟ ಗಿಡದಂತೆ ಬೆಳೆಯುತ್ತಾ ಬೆಳೆಯುತ್ತಾ ರೂಪಾಂತರ ಹೊಂದುತ್ತದೆ. ಇಂಥ ಪ್ರೀತಿ ಅನ್ನೋದು ಹೇಗೆ ಎಲ್ಲಿ ಯಾವಾಗ ಹುಟ್ಟುತ್ತೆ ಅನ್ನೋದು ಯಾರಿಗೂ ಗೊತ್ತಿರಲ್ಲ. ಇದಕ್ಕೆ ತರುಣ್ ಸುಧೀರ್ ಮತ್ತು ಸೋನಾಲ್ ಮಂಥೆರೊ ಅತ್ಯುತ್ತಮ ಉದಾಹರಣೆ.
ಹೌದು, ಕಳೆದ ಕೆಲ ದಿನಗಳಿಂದ ತರುಣ್ ಸುಧೀರ್ ಮತ್ತು ಸೋನಾಲ್ ಮಂಥೆರೊ ಮದ್ವೆ ವಿಚಾರ ಚರ್ಚೆಯಾಗುತ್ತಿದೆ. ರಾಬರ್ಟ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅರಳಿದ ಪ್ರೀತಿ ಈಗ ಮದುವೆಯ ಹಂತಕ್ಕೆ ಬಂದಿದೆ ಎಂಬ ಮಾತು ಕೇಳಿ ಬರುತ್ತಿದೆ. ಆಗಸ್ಟ್ ನಲ್ಲಿ ಈ ಜೋಡಿ ಹಸೆಮಣೆ ಏರಲು ಸಿದ್ಧವಾಗಿದೆ ಅನ್ನುವ ಸುದ್ದಿಯೂ ಇದೆ. ಆಗಸ್ಟ್ನಲ್ಲಿ ಮದುವೆ ನಡೆಯುವುದು ಖಚಿತ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.

ಆದರೆ..ಇಷ್ಟೆಲ್ಲ ಮಾತು ಅಂತೆ-ಕಂತೆಯ ಸಂತೆಯಲ್ಲಿ ಕೇಳಿ ಬಂದಿದ್ದರೂ, ತರುಣ್ ಜೊತೆ ಮದುವೆ ಸುದ್ದಿ ಗುಲ್ಲಾಗಿದ್ದರೂ ಸೋನಲ್ ಮಾತ್ರ ಮೌನವಾಗಿದ್ದರು. ಸುದ್ದಿಯನ್ನ ಒಪ್ಪಿಯೂ ಇರಲಿಲ್ಲ. ತಳ್ಳಿಯೂ ಹಾಕಿರಲಿಲ್ಲ. ಆದರೆ ಈಗ ಸೋನಲ್ ಮೌನ ಮುರಿದಿದ್ದಾರೆ. ವಿಶೇಷ ಪ್ರಕಟಣೆಯೊಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೊರಡಿಸಿದ್ದಾರೆ.
ಹೌದು. ''ಕಡೆಗೂ ನಟಿಗೆ ತನ್ನ ಬದುಕಿನ ನಿರ್ದೇಶಕ ಸಿಕ್ಕಾಯ್ತು'' ಎಂಬ ಶೀರ್ಷಿಕೆಯಡಿ ಸೋನಲ್ ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ನೂ.. ಹೀರೋಯಿನ್ ಮತ್ತು ಡೈರೆಕ್ಟರ್ ಎಂಬ ಕುರ್ಚಿ ಅಕ್ಕ-ಪಕ್ಕ ಇರುವ ಇದೇ ಫೋಟೋವನ್ನು ತರುಣ್ ಸುಧೀರ್ ಕೂಡ ಹಂಚಿಕೊಂಡಿದ್ದು, ''ಕಡೆಗೂ ನಿರ್ದೇಶಕನಿಗೆ ತನ್ನ ಜೀವನದ ನಟಿ ಸಿಕ್ಕಳು'' ಎಂದು ಬರೆದುಕೊಂಡಿದ್ದಾರೆ.
ಅಂದ್ಹಾಗೇ ಸೋನಲ್ ಮತ್ತು ತರುಣ್ ನಾಳೆ ಬೆಳಗ್ಗೆ 11.08ಕ್ಕೆ ತಮ್ಮ ಮದುವೆಯ ಸುದ್ದಿಯನ್ನೂ ಅಧಿಕೃತವಾಗಿ ಹೇಳಬಹುದು. ಗೊತ್ತ್ ಇಲ್ಲ ತಮ್ಮ ಮದುವೆಯ ಕುರಿತು ವಿಶೇಷವಾದ ವಿಡಿಯೋ ಹಂಚಿಕೊಂಡರು ಹಂಚಿಕೊಳ್ಳಬಹುದು. ಇಬ್ಬರು ಜೊತೆಯಿರುವ ಫೋಟೋವನ್ನೂ ಕೂಡ ತಮ್ಮ ಅಭಿಮಾನಿಗಳಿಗಾಗಿ, ಹಿತೈಷಿಗಳಿಗಾಗಿ ಹಂಚಿಕೊಳ್ಳಬಹುದು. ಇನ್ನೂ ತಮ್ಮ ಮದುವೆಯ ದಿನಾಂಕದ ಬಗ್ಗೆಯೂ ಇಬ್ಬರು ಮಾಹಿತಿ ನೀಡುತ್ತಾರೆ ಎಂಬ ನಿರೀಕ್ಷೆ ಕೂಡ ಅನೇಕರಲ್ಲಿದೆ.
ಉಳಿದಂತೆ ರಾಬರ್ಟ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಅನ್ನುವ ಸುದ್ದಿ ಇದೆ. ಇದೀಗ ಇಬ್ಬರೂ ಪೋಷಕರ ಒಪ್ಪಿಗೆ ಪಡೆದು ಮದುವೆಗೆ ಮುಂದಾಗಿದ್ದಾರೆ. 'ರಾಬರ್ಟ್' ಬಳಿಕ 'ಶಂಭೋ ಶಿವ ಶಂಕರ', 'ಗರಡಿ', 'ಶುಗರ್ ಫ್ಯಾಕ್ಟರಿ' ಸಿನಿಮಾಗಳಲ್ಲಿ ಸೋನಲ್ ನಟಿಸಿದ್ದಾರೆ. 'ಬುದ್ಧಿವಂತ-2' ಹಾಗೂ 'ಮಾರ್ಗರೆಟ್ ಲವರ್ ಆಫ್ ರಾಮಾಚಾರಿ' ಸಿನಿಮಾಗಳಲ್ಲಿ ನಟಿಸಿದ್ದು ಇನ್ನಷ್ಟೇ ಈ ಸಿನಿಮಾಗಳು ತೆರೆಗೆ ಬರಬೇಕಿದೆ. ಸಿನಿಮಾಗಳ ಜೊತೆ ಜೊತೆಗೆ ಬ್ಯೂಟಿ ಕಾಂಟೆಸ್ಟ್ ತೀರ್ಪುಗಾರರಾಗಿ ಸೋನಲ್ ಗುರುತಿಸಿಕೊಂಡಿದ್ದು ಎಬಿಸಿಡಿ ಫ್ಯಾಶನ್ ಈವೆಂಟ್ & ಸೆಲೆಬ್ರಿಟಿ ಮ್ಯಾನೇಜ್ಮೆಂಟ್ ಕಂಪನಿಯ ಡೈರೆಕ್ಟರ್ ಕೂಡ ಆಗಿದ್ದಾರೆ.
ಇನ್ನೂ ಇದೆಲ್ಲದರ ನಡುವೆ ತರುಣ್ ಸುಧೀರ್ ಮತ್ತು ಸೋನಲ್ ಮದುವೆಗೆ ದರ್ಶನ್ ಬರ್ತಾರಾ, ಆ ಸಮಯಕ್ಕೆ ದರ್ಶನ್ ಜೈಲಿಂದ ಬಿಡುಗಡೆಯಾಗ್ತಾರಾ ಅನ್ನುವ ಪ್ರಶ್ನೆ ಕೂಡ ಅನೇಕರಲ್ಲಿದೆ. ಯಾಕೆಂದರೆ ಈ ಇಬ್ಬರ ನಡುವೆ ಪ್ರೇಮಾಂಕುರಕ್ಕೆ ಕಾರಣವಾಗಿದ್ದೇ ದರ್ಶನ್. ಎಲ್ಲಕ್ಕಿಂತ ಹೆಚ್ಚಾಗಿ ತರುಣ್ ಪಾಲಿಗೆ ದರ್ಶನ್ ಅಣ್ಣನಿದ್ದಂತೆ. ಏನೇ ಇರಲಿ ಈ ನವಜೋಡಿಗೆ ನಿಮ್ಮ ಶುಭ ಹಾರೈಕೆ ಇರಲಿ.


Click it and Unblock the Notifications











