ಶ್ರೀದೇವಿ ಅಗಲಿಕೆ : ನೋವಿನಲ್ಲಿ ನಟ ಶಿವರಾಜ್ ಕುಮಾರ್ ಮಾತು
ನಟಿ ಶ್ರೀ ದೇವಿ ನಿಧನಕ್ಕೆ ಗಣ್ಯತಿಗಣ್ಯರು ಕಂಬನಿ ಮಿಡಿದಿದ್ದಾರೆ. ಕನ್ನಡ ಚಿತ್ರರಂಗದ ನಟ, ನಟಿಯರು ಸಹ ಅವರ ಬಗ್ಗೆ ಮಾತನಾಡಿದ್ದಾರೆ. ಸದ್ಯ ನಟ ಶಿವರಾಜ್ ಕುಮಾರ್ ಶ್ರೀದೇವಿ ನಿಧನದ ಬಗ್ಗೆ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಶ್ರೀ ದೇವಿ ಬಗ್ಗೆ ಮಾತನಾಡಿರುವ ಶಿವರಾಜ್ ಕುಮಾರ್ ''ಅವರು ಇಲ್ಲ ಅಂತ ಕೇಳುವುದಕ್ಕೆ ತುಂಬ ನೋವಾಗುತ್ತದೆ. ನನಗಿಂತ ಅವರು ಒಂದು ವರ್ಷ ಚಿಕ್ಕವರು. ಅವರ ಅನೇಕ ಸಿನಿಮಾಗಳನ್ನು ನೋಡಿದ್ದೇನೆ. ಸುಂದರವಾದ ಮತ್ತು ಒಳ್ಳೆಯ ನಟಿ ಅವರು. ನಾವು ಆಗ ಕಮಲ್ ಹಾಸನ್ ಹಾಗೂ ಶ್ರೀದೇವಿ ಜೋಡಿಯ ಸಿನಿಮಾವನ್ನು ಖುಷಿಯಿಂದ ನೋಡುತ್ತಿದ್ದೆವು. ಎಲ್ಲ ಪಾತ್ರಗಳಿಗೂ ಅವರು ಸೂಟ್ ಆಗುತ್ತಿದ್ದರು. ಸೌತ್ ಇಂಡಿಯಾ ದಿಂದ ಹೋಗಿ ಇಂಡಿಯಾದ ನಂಬರ್ 1 ನಟಿ ಆಗಿರುವುದು ನಮ್ಮಗೆಲ್ಲ ಹೆಮ್ಮೆಯ ವಿಷಯ.'' ಎಂದು ಹೇಳಿದ್ದಾರೆ.
ಜೊತೆಗೆ ಈ ಹಿಂದೆ ಶ್ರೀ ದೇವಿ ಅವರನ್ನು ಎರಡು ಬಾರಿ ಶಿವಣ್ಣ ಭೇಟಿ ಆಗಿದ್ದು, ಅವರು ಇಲ್ಲ ಎನ್ನುವ ಸುದ್ದಿಯನ್ನು ಜೀರ್ಣ ಮಾಡಿಕೊಳ್ಳಲು ಆಗುತ್ತಿಲ್ಲ. ಎಂದು ತಮ್ಮ ದುಖಃವನ್ನು ಶಿವರಾಜ್ ಕುಮಾರ್ ಹಂಚಿಕೊಂಡಿದ್ದಾರೆ. ಅಂದಹಾಗೆ, ಕನ್ನಡದ ನಟಿಯರಾದ, ತಾರ, ಶೃತಿ, ಮಾಲಾಶ್ರೀ, ಸುಧಾರಾಣಿ, ಲಕ್ಷ್ಮಿ ಸೇರಿದಂತೆ ಅನೇಕ ನಟಿಯರು ಕೂಡ ಶ್ರೀದೇವಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಅಂದಹಾಗೆ, ಬಾಲಿವುಡ್ ನ ಹಿರಿಯ ನಟಿ ಶ್ರೀದೇವಿ(54) ಹೃದಯಾಘಾತದಿಂದ ದುಬೈನಲ್ಲಿ ಶನಿವಾರ ರಾತ್ರಿ ನಿಧನರಾಗಿದ್ದಾರೆ. ಶ್ರೀದೇವಿ ತಮ್ಮ ಪತಿ ಬೋನಿ ಕಪೂರ್ ಮತ್ತು ಪುತ್ರಿ ಖುಷಿ ಜೊತೆ ದುಬೈಗೆ ಹಾರಿದ್ದರು. ದುಬೈನಲ್ಲಿ ಮೋಹಿತ್ ಮಾರ್ವಾ ವಿವಾಹ ಮಹೋತ್ಸವ ಇದ್ದ ಕಾರಣ ಇಡೀ ಕಪೂರ್ ಫ್ಯಾಮಿಲಿ ಅಲ್ಲಿಗೆ ತೆರಳಿತ್ತು. ಈ ವೇಳೆ ಈ ಘಟನೆ ನಡೆದಿದೆ.


Click it and Unblock the Notifications











