ಹೃದಯ ಒಡೆದಿದೆ: ಬೆಂಗಳೂರಿಗೆ ಬಂದು ಅಪ್ಪು ನೆನೆದ ತ್ರಿಶಾ
ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕನ್ನಡಕ್ಕೆ ಹೊಸಬರೇನಲ್ಲ. ಈ ಹಿಂದೆ ಪುನೀತ್ ರಾಜ್ಕುಮಾರ್ ಜೊತೆಗೆ 'ಪವರ್' ಸಿನಿಮಾದಲ್ಲಿ ನಟಿಸಿದ್ದಾರೆ.
ಇದೀಗ ತ್ರಿಶಾ ಸೇರಿದಂತೆ ಹಲವು ದೊಡ್ಡ ಸ್ಟಾರ್ಗಳು ನಟಿಸಿರುವ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಪ್ರಚಾರ ಕಾರ್ಯವನ್ನು ಚಿತ್ರತಂಡ ಕೈಗೊಂಡಿದೆ. ಇದರ ಭಾಗವಾಗಿಯೇ ನಿನ್ನೆ (ಸೆಪ್ಟೆಂಬರ್ 23) ಇಡೀ ಚಿತ್ರತಂಡ (ಐಶ್ವರ್ಯಾ ರೈ ಹೊರತುಪಡಿಸಿ) ಬೆಂಗಳೂರಿಗೆ ಆಗಮಿಸಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ತ್ರಿಶಾ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಳ್ಳುವುದು ಮರೆಯಲಿಲ್ಲ. ''ನಾನು ಈ ಹಿಂದೆ 'ಪವರ್' ಸಿನಿಮಾದ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ನಾನು ಕೆಲ ದಿನಗಳ ಇಲ್ಲಿ ಚಿತ್ರೀಕರಣ ನಡೆಸಿದ್ದೆ. ನಾನು ಪುನೀತ್ ರಾಜ್ಕುಮಾರ್ ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ'' ಎಂದಿದ್ದಾರೆ.

''ಪುನೀತ್ ರಾಜ್ಕುಮಾರ್ ಹಾಗೂ ನಾನು ಇನ್ನೊಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸಬೇಕಿತ್ತು. ಇಬ್ಬರೂ ಒಟ್ಟಿಗೆ 'ದ್ವಿತ್ವ' ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಆ ವೇಳೆಗೆ ದುರ್ಘಟನೆ ನಡೆಯಿತು. ಅವರೊಟ್ಟಿಗೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ನಾನು ಕಳೆದುಕೊಂಡೆ. ಈಗಲೂ ನಾನು ಪುನೀತ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ಹೃದಯ ಒಡೆದಿದೆ. ಅವರ ನೆನಪು ಸದಾ ನನ್ನೊಂದಿಗೆ ಹಾಗೆಯೇ ಉಳಿಯಲಿದೆ'' ಎಂದಿದ್ದಾರೆ ತ್ರಿಶಾ.
ಬೆಂಗಳೂರಿನ ಬಗ್ಗೆಯೂ ಪ್ರೀತಿಯಿಂದ ಮಾತನಾಡಿದ ನಟಿ ತ್ರಿಶಾ, ''ಇದು ನನಗೆ ಎರಡನೇ ಮನೆ ಇದ್ದಂತೆ. ನಾನು ಸಣ್ಣವಳ್ಳಿದ್ದಾಗ ಸಾಕಷ್ಟು ಸಮಯವನ್ನು ಬೆಂಗಳೂರಿನಲ್ಲಿ ಕಳೆದಿದ್ದೇನೆ. ಇಲ್ಲಿನ ಆಹಾರ ಹಾಗೂ ವಾತಾವರಣ ನನಗೆ ಇಷ್ಟ. ಈಗಲೂ ನನಗೆ ಚೆನ್ನೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುವುದು ಇಷ್ಟವಾಗುವುದಿಲ್ಲ ನನಗೆ ಚೆನ್ನೈ-ಬೆಂಗಳೂರು ಕಾರು ಸವಾರಿಯೇ ಇಷ್ಟ. ಇದು ನನಗೆ ಎರಡನೇ ಮನೆ ಇದ್ದಂತೆ'' ಎಂದಿದ್ದಾರೆ.
ಬಳಿಕ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಬಗ್ಗೆ ಮಾತನಾಡಿದ ತ್ರಿಶಾ, ''ಇಂಥಹಾ ಅದ್ಭುತವಾದ ಸಿನಿಮಾಕ್ಕೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಮಣಿರತ್ನಂ ಅವರಿಗೆ ಧನ್ಯವಾದ. ಇದೇ ಮೊದಲ ಬಾರಿಗೆ ನಾನು ರಾಣಿಯ ಪಾತ್ರದಲ್ಲಿ ನಟಿಸಿದ್ದೇನೆ. ನನ್ನ ಪಾತ್ರದ ಹೆಸರು ಕುಂದವ. ಸಿನಿಮಾ ಚೆನ್ನಾಗಿ ಬಂದಿದೆ ಎಂಬುದು ನಮ್ಮ ನಂಬಿಕೆ. ನಮಗೆಲ್ಲರಿಗೂ ಈ ಸಿನಿಮಾದ ಮೇಲೆ ನಂಬಿಕೆ ಇದೆ. ದಯವಿಟ್ಟು ನೀವುಗಳು ಸಹ ಸಿನಿಮಾವನ್ನು ನೋಡಿ ಆನಂದಿಸಿ'' ಎಂದು ಮನವಿ ಮಾಡಿದರು ತ್ರಿಶಾ.


Click it and Unblock the Notifications











