RCB vs CSK ; ಚೆನ್ನೈ ಸೋತಿದ್ದಕ್ಕೆ ಕೊಹ್ಲಿ ಮೇಲೆ ಕೋಪ, ಚಳಿ ಬಿಡಿಸಿದ ನಟಿ..!
ಐಪಿಎಲ್ ಅಂದರೆ ಸಾಕು ಸಂಭ್ರಮ ಸಡಗರದ ವಾತಾವರಣ ಅನೇಕ ಕಡೆ ನಿರ್ಮಾಣವಾಗುತ್ತೆ. ಆರು ವರ್ಷದ ಹುಡುಗರಿಂದ ಹಿಡಿದು ಅರವತ್ತು ವರ್ಷದ ವೃದ್ಧರವರೆಗೆ ಐಪಿಎಲ್ ಕಿಕ್ ಕೊಡುತ್ತೆ. ನಮ್ ತಂಡ ನಿಮ್ಮ ತಂಡ ಅಂತಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನದ ಮೆರವಣಿಗೆ ಶುರುವಾಗುತ್ತೆ.
ಅದರಲ್ಲಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮ್ಯಾಚ್ ಇದ್ದರಂತೂ ಮುಗೀತು. ಎರಡು ಕಡೆಯ ಅಭಿಮಾನಿ ಬಳಗ ಸೋಶಿಯಲ್ ಮೀಡಿಯಾ ಮೂಲಕ ಸಮರಕ್ಕೆ ಮುಂದಾಗುತ್ತಾವೆ. ಮೊನ್ನೆ ನಡೆದ ಪಂದ್ಯ ಇದಕ್ಕೆ ಮತ್ತೊಂದು ಉದಾಹರಣೆ. 17 ವರ್ಷಗಳ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರದ್ದೇ ನೆಲದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲಿಸಿದೆ. ಚೆಪಾಕ್ ಕ್ರೀಡಾಂಗಣದಲ್ಲಿ ಕುಣಿದು ಕುಪ್ಪಳಿಸಿದೆ.

ಮ್ಯಾಚ್ ಮುಕ್ತಾಯವಾಗಿ ಎರಡು ದಿನವಾದರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಆರ್ಸಿಬಿ ಅಭಿಮಾನಿಗಳ ಸಂಭ್ರಮ ಕಡಿಮೆಯಾಗಿಲ್ಲ. ಹೀಗಾಗಿಯೇ ಉರಿದು ಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ನ ಕೆಲ ಅಭಿಮಾನಿಗಳು ವಿರಾಟ್ ಕೊಹ್ಲಿ ಅವರನ್ನು ತೆಗಳುತ್ತಿದ್ದಾರೆ. ನಿಂದಿಸುತ್ತಿದ್ದಾರೆ. ಎಂಎಸ್ ಧೋನಿಯ ಜೊತೆ ಹೋಲಿಕೆ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಹೀಗೆ ಮಾಡುತ್ತಿರುವವರನ್ನು ನಟಿ ವರ್ಷಾ ಬೊಳ್ಳಮ್ಮ ತರಾಟೆಗೆ ತೆಗೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ.
ಹೌದು ವರ್ಷ ಬೊಳ್ಳಮ್ಮ.. ಬೆಸಿಕಲಿ ನಮ್ಮ ಕೊಡಗಿನ ಕಿನ್ನರಿ. ಹೇಳಿಕೊಳ್ಳಲು ಕನ್ನಡತಿಯಾದರೂ ಈ ಚೆಲುವೆ ಹೆಚ್ಚು ಮಿಂಚಿದ್ದು ಅಕ್ಕ-ಪಕ್ಕದ ರಾಜ್ಯಗಳಲ್ಲಿ. ಅದರಲ್ಲಿಯೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಈ ಬೆಡಗಿಗೆ ಸರಿಸಮಾನವಾದ ಬೇಡಿಕೆ ಇದೆ. ಇಳಯ ದಳಪತಿ ವಿಜಯ್, ಮಕ್ಕಳ ಸೆಲ್ವನ್ ವಿಜಯ್ ಸೇತುಪತಿ ಅವರ ಜೊತೆ ತೆರೆಹಂಚಿಕೊಂಡ ಹೆಗ್ಗಳಿಕೆ ಇವರದ್ದು. ಇನ್ನೂ ಕನ್ನಡದಲ್ಲಿ ಮನೆ ನಂಬರ್ 13 ಎಂಬ ಸಿನಿಮಾವೊಂದು ಬಂದಿತ್ತಲ್ಲಾ..? ಆ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದು ಕೂಡ ಇವರೇ.
ಇಂಥಾ ವರ್ಷಾ ಬೊಳ್ಳಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಾರ್ಡ್ ಕೋರ್ ಅಭಿಮಾನಿ ಕೂಡ ಹೌದು. ಹೀಗಾಗಿಯೇ ಕೆರಳಿ ಕೆಂಡವಾಗಿರುವ ವರ್ಷಾ ಬೊಳ್ಳಮ್ಮ ಒಬ್ಬರನ್ನು ಹೊಗಳುವ ಭರದಲ್ಲಿ ಮತ್ತೊಬ್ಬರಿಗೆ ಅವಮಾನ ಮಾಡಬೇಡಿ ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವರ್ಷಾ ಬೊಳ್ಳಮ್ಮ ಕ್ರೀಡೆ ಅಂದರೆ ಮನರಂಜನೆ. ಅಲ್ಲಿ ನಡೆಯುವ ಸ್ಫರ್ಧೆ ಮಜವಾಗಿರುತ್ತೆ, ಒಮ್ಮೊಮ್ಮೆ ತಮಾಷೆ ಮತ್ತು ತೀವೃ ಪೈಪೋಟಿಯಿಂದ ಕೂಡಿರುತ್ತೆ. ಆದರೆ ಅವರು ನೀಲಿ ಬಣ್ಣದ ಜೆರ್ಸಿ ಧರಿಸಿ ನಮ್ಮ ದೇಶವನ್ನು ಪ್ರತಿನಿಧಿಸುವ ಆಟಗಾರರು ಎನ್ನುವುದನ್ನು ಮರೆಯಬೇಡಿ. ಕೆಂಪು, ಹಳದಿ, ಕಿತ್ತಳೆ ಅಥವಾ ನೇರಳೆ ಜೆರ್ಸಿಯಲ್ಲಿ ಅವರನ್ನು ನೋಡಬೇಡಿ, ಒಬ್ಬರನ್ನು ಹೊಗಳುವ ಭರದಲ್ಲಿ ಮತ್ತೊಬ್ಬರಿಗೆ ಅವಮಾನ ಮಾಡಬೇಡಿ ಎಂದು ಹೇಳಿದ್ದಾರೆ.
ಸಹಜವಾಗಿ ವರ್ಷಾ ಬೊಳ್ಳಮ್ಮ ಅವರ ಟ್ವಿಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಹೃದಯವನ್ನು ಗೆದ್ದಿದೆ. ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳನ್ನು ಇನ್ನೂ ಕೆರಳಿಸಿದೆ. ಆರ್ಸಿಬಿ ಅನೇಕ ಫ್ಯಾನ್ಸ್ ವರ್ಷಾ ಬೊಳ್ಳಮ್ಮ ಅವರ ಮಾತುಗಳಿಗೆ ಸಮ್ಮತಿಯನ್ನು ಸೂಚಿಸುತ್ತಿದ್ದಾರೆ. ಅಭಿಮಾನದ ಅರ್ಥ ಅರಿಯದವರು ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡುತ್ತಿದ್ದಾರೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಚೆನ್ನೈ ತಂಡದ ಸೋಲಿಗೆ ಕೊಹ್ಲಿ ಕಾರಣವಲ್ಲ ಬದಲಿಗೆ ಧೋನಿ ಕಾರಣ, ಹೀಗಾಗಿ ವಿರಾಟ್ ಕೊಹ್ಲಿಯ ಬದಲು ಚೆನ್ನೈ ಅಭಿಮಾನಿಗಳು ಧೋನಿಯನ್ನು ಟ್ರೋಲ್ ಮಾಡಬೇಕಿತ್ತು ಎನ್ನುತ್ತಿದ್ದಾರೆ.


Click it and Unblock the Notifications











