ಅರ್ಜುನ್ 'ಅದ್ದೂರಿ' ಚಿತ್ರದ ಬಿಡುಗಡೆಗೆ ಕ್ಷಣಗಣನೆ
ಶಂಕರ್ ರೆಡ್ಡಿ ಹಾಗೂ ಕೀರ್ತಿ ಸ್ವಾಮಿ ನಿರ್ಮಾಣದ 'ಅದ್ದೂರಿ' ಚಿತ್ರ ನಾಳೆ (ಜೂನ್ 15, 2012) ಬೆಂಗಳೂರಿನ ಸಾಗರ್ ಹಾಗೂ ರಾಜ್ಯಾದ್ಯಂತ ಒಟ್ಟೂ 108 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಂಬಾರಿ ಖ್ಯಾತಿಯ ಎ ಪಿ ಅರ್ಜುನ್ ನಿರ್ದೇಶನದ 'ಅದ್ದೂರಿ' ಚಿತ್ರಕ್ಕೆ ಸರ್ಜಾ ಕುಟುಂಬದ ಕುಡಿ ಧ್ರುವ ಸರ್ಜಾ ನಾಯಕ. ನಾಯಕಿ ರಾಧಿಕಾ ಪಂಡಿತ್.
ವಿ ಹರಿಕೃಷ್ಣ ಸಂಗೀತ ನೀಡಿರುವ ಅ ಅಂದ್ರೆ ಅಮ್ಮಾಟೆ... ಎಂಬ ಹಾಡು ಈಗಾಗಲೇ ಜನರ ಬಾಯಲ್ಲಿ ನಲಿದಾಡುತ್ತಿದೆ. ಎ ಪಿ ಅರ್ಜುನ್ ಈ ಮೊದಲು ನಿರ್ದೇಶಿಸಿದ್ದ 'ಅಂಬಾರಿ' ಚಿತ್ರ ಸೂಪರ್ ಹಿಟ್ ಎನಿಸಿತ್ತು. ಅಂಬಾರಿ ಚಿತ್ರದ ಗೆಲುವಿನ ನಂತರದ ಈ ಚಿತ್ರಕ್ಕೆ ಸಹಜವಾಗಿಯೇ ಬಹುನಿರೀಕ್ಷೆ ವ್ಯಕ್ತವಾಗಿದೆ.
ಅದ್ದೂರಿ ನಾಯಕ ಧ್ರುವ ಸರ್ಜಾ. ಅರ್ಜುನ್ ಸರ್ಜಾರ ಅಕ್ಕನ ಮಗನಾಗಿರುವ ಧ್ರುವರ ಹಿರಿಯ ಸಹೋದರ ಚಿರಂಜೀವಿ ಸರ್ಜಾ. ಕಿರಿಯ ಸಹೋದರ ಸದ್ಯಕ್ಕೆ ಚಿತ್ರೀಕರಣ ಹಂತದಲ್ಲಿರುವ 'ಪುಲಿಕೇಶಿ' ನಾಯಕ ಭರತ್ ಸರ್ಜಾ. ಸರ್ಜಾ ಕುಟುಂಬದ ಎಲ್ಲಾ ಕುಡಿಗಳೂ ಕನ್ನಡ ಚಿತ್ರಗಳ ಮೂಲಕವೇ ಪರಿಚಯವಾಗುತ್ತಿರುವುದು ವಿಶೇಷ.
ಈ ಚಿತ್ರ ಸುಮಾರು ಎರಡು ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು. ಆದರೆ ಚಿತ್ರವನ್ನು ವಿಶೇಷವಾಗಿ ಮಾಡುವ ಉತ್ಸಾಹದಲ್ಲಿದ್ದ ನಿರ್ದೇಶಕ ಅರ್ಜುನ್, ಅದ್ದೂರಿ ಚಿತ್ರಕ್ಕಾಗಿ ಬಹಳಷ್ಟು ವೇಳೆ ವ್ಯಯಿಸಿದ್ದಾರೆ. ಹೊಸ ನಟ ಧ್ರುವರಿಗೆ ಸಾಕಷ್ಟು ತರಬೇತಿ ನೀಡಿಯೇ ಕ್ಯಾಮರಾ ಮುಂದೆ ತಂದು ನಿಲ್ಲಿಸಿದ್ದಾರೆ.
ಅನುಭವಿ, ಹ್ಯಾಟ್ರಿಕ್ ನಟಿ ರಾಧಿಕಾ ಪಂಡಿತ್ ಕೂಡ ಈ ಚಿತ್ರದ ಕಥೆ ಹಾಗೂ ಮೇಕಿಂಗ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ವಿ ಹರಿಕೃಷ್ಣ ಸಂಗೀತದ ಹಾಡುಗಳು ಈಗಾಗಲೇ ಜನರ ಮೆಚ್ಚುಗೆ ಗಳಿಸಿವೆ. ಒಟ್ಟಿನಲ್ಲಿ ನವನಟ ಧ್ರುವ ಸರ್ಜಾ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾದಿರುವ ವಿದ್ಯಾರ್ಥಿಯಂತಾಗಿದ್ದಾರೆ. ನಿರ್ದೇಶಕ ಅರ್ಜುನ್ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











