ಕ್ಯಾಂಪ್ ಬದಲಿಸಿದ್ರಾ ಸೂರಪ್ಪ, ಸಂದೇಶ್ ನಾಗರಾಜ್?: ಗಾಂಧಿನಗರದಲ್ಲಿ ಬಿಸಿಬಿಸಿ ಚರ್ಚೆ
ಚಿತ್ರರಂಗದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ ಎನ್ನುವ ಮಾತಿದೆ. ಹಣದ ವ್ಯವಹಾರ ನಡೆಯುವ ಜಾಗದಲ್ಲಿ ಕಾಲ ಕಾಲಕ್ಕೆ ಬದಲಾವಣೆ ಆಗುತ್ತಿರುತ್ತದೆ. ಒಂದ್ಕಾದಲ್ಲಿ ನಟ ದರ್ಶನ್ ಹಾಗೂ ನಟ ಸುದೀಪ್ ಆತ್ಮೀಯ ಸ್ನೇಹಿತರಾಗಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾದರು. ಇಂದಿಗೂ ಅವರಿಬ್ಬರು ನಾನೊಂದು ತೀರ ನೀನೊಂದು ತೀರ ಎನ್ನುವಂತಿದ್ದಾರೆ.
ಇಬ್ಬರಿಗೂ ಬೇರೆ ಬೇರೆ ನಿರ್ಮಾಪಕರ ಜೊತೆ ಒಡನಾಟವಿತ್ತು. ತಂತ್ರಜ್ಞರು ಮಾತ್ರ ಇಬ್ಬರ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇಷ್ಟು ದಿನ ದರ್ಶನ್ಗೆ ಆಪ್ತರಾಗಿದ್ದ ಸಂದೇಶ್ ನಾಗರಾಜ್ ಇದೀಗ ಸುದೀಪ್ ಜೊತೆ ಸಿನಿಮಾ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಇನ್ನು ಈ ಹಿಂದೆಯೇ ಸುದೀಪ್ ಆಪ್ತವರ್ಗದಲ್ಲಿ ಗುರ್ತಿಸಿಕೊಂಡಿದ್ದ ಸೂರಪ್ಪ ಬಾಬು 'ಕೋಟಿಗೊಬ್ಬ-3' ಬಳಿಕ ದೂರಾಗಿದ್ದರು.

ಸೂರಪ್ಪ ಬಾಬು ಕೂಡ ನಟ ದರ್ಶನ್ ಜೊತೆ ಸಿನಿಮಾ ಮಾಡುವ ಉತ್ಸಾಹದಲ್ಲಿದ್ದಾರೆ. ಆದರೆ ಯಾವಾಗ ಎನ್ನುವುದು ಸದ್ಯಕ್ಕೆ ಗೊತ್ತಿಲ್ಲ. ಸುದೀಪ್ ಹೀರೊ ಆಗಿ ಹೇಮಂತ್ ರಾವ್ ನಿರ್ದೇಶನದಲ್ಲಿ ಸಂದೇಶ್ ನಾಗರಾಜ್ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರ ಜತೆಗೆ ಸಂದೇಶ್ ನಾಗರಾಜ್ ಮತ್ತು ಎನ್. ಸಂದೇಶ್ ಅವರು ಒಟ್ಟಿಗೆ ಇರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು.
ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ನಾಯಕರಾಗಿ ನಟಿಸುತ್ತಿರುವ ಚಿತ್ರ ಶುರುವಾಗಲಿದೆ ಎನ್ನುವ ಚರ್ಚೆ ಶುರುವಾಗಿತ್ತು. ಇದೀಗ ಆ ಊಹೆ ನಿಜವಾಗಿದೆ. ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಕಿಚ್ಚ ಸುದೀಪ್ ಸಿನಿಮಾ ಸೆಟ್ಟೇರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸುದೀಪ್ ಜೊತೆ ಸಂದೇಶ್ ಪ್ರೊಡಕ್ಷನ್ಸ್ ಸಿನಿಮಾ ಘೋಷಿಸಿರುವುದು ಅಚ್ಚರಿಯ ಬೆಳವಣಿಗೆಯೇ ಸರಿ.

ಗಾಂಧೀನಗರದಲ್ಲಿ ಈ ಬೆಳವಣಿಗೆ ಬಗ್ಗೆ ತರಹೇವಾರಿ ಚರ್ಚೆ ನಡೆಯುತ್ತಿದೆ. 'ಕೋಟಿಗೊಬ್ಬ-3' ಚಿತ್ರದಿಂದ ನಷ್ಟವಾಗಿ ಸೂರಪ್ಪ, ಸುದೀಪ್ ಕ್ಯಾಂಪ್ನಿಂದ ಹೊರಬಂದರು. 'ಒಡೆಯ' ಚಿತ್ರದಿಂದ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆಗೂ ಹಿನ್ನಡೆಯಾಗಿತ್ತು. ಜೊತೆಗೆ ಮೈಸೂರಿನ ಸಂದೇಶ್ ಹೋಟೆಲ್ ಗಲಾಟೆ ವಿಚಾರವೂ ದರ್ಶನ್ ಅವರಿಂದ ದೂರಾಗಲು ಕಾರಣ ಎನ್ನುವ ಚರ್ಚೆ ಗಾಂಧೀನಗರದಲ್ಲಿದೆ. ಸೋಶಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಚರ್ಚೆ ಶುರುವಾಗಿದೆ. ಇದನ್ನೆಲ್ಲಾ ಪಕ್ಕಕ್ಕಿಟ್ಟರೆ ಯಾರು ಯಾರೊಟ್ಟಿಗೆ ಬೇಕಾದರೂ ಸಿನಿಮಾ ಮಾಡಬಹುದು ಎನ್ನುವ ವಾದವೂ ಇದೆ.
ಕನ್ನಡ ಚಿತ್ರರಂಗದಲ್ಲಿ ಈ ರೀತಿ ಒಬ್ಬ ನಟನೊಟ್ಟಿಗೆ ಗುರ್ತಿಸಿಕೊಂಡಿದ್ದ ನಿರ್ಮಾಪಕರು ಮತ್ತೊಬ್ಬರ ನಟನೊಟ್ಟಿಗೆ ಸಿನಿಮಾ ಮಾಡಿದ ಸಾಕಷ್ಟು ಉದಾಹರಣೆಗಳಿವೆ. ಅಷ್ಟಕ್ಕೂ ಸುದೀಪ್ ಜೊತೆ ಸಂದೇಶ್ ನಾಗರಾಜ್ ಯಾಕೆ ಸಿನಿಮಾ ಮಾಡಬಾರದು? ಎನ್ನುವ ಪ್ರಶ್ನೆಯನ್ನು ಕೇಳುವವರಿದ್ದಾರೆ. ಅಂತಿಮವಾಗಿ ನಿರ್ಮಾಪಕರ ದುಡ್ಡು. ಅವರು ಯಾರೊಟ್ಟಿಗೆ ಬೇಕಾದರೂ ಸಿನಿಮಾ ಮಾಡಬಹುದು.
ದರ್ಶನ್ ಕಾಂಬಿನೇಷನ್ನಲ್ಲಿ ಸಂದೇಶ್ ನಾಗರಾಜ್ 'ಮಿ. ಐರಾವತ' ಹಾಗೂ 'ಪ್ರಿನ್ಸ್' ಸಿನಿಮಾಗಳನ್ನು ಕೂಡ ನಿರ್ಮಿಸಿದ್ದರು. ನಟ ದರ್ಶನ್ ಈಗಾಗಲೇ ಏಳೆಂಟು ಸಿನಿಮಾಗಳಿಗೆ ಕಮಿಟ್ ಆಗಿದ್ದಾರೆ. ಚಿತ್ರವೊಂದಕ್ಕೆ ವರ್ಷ ಎಂದರೂ ಸದ್ಯಕ್ಕೆ ಅವರ ಕಾಲ್ಶೀಟ್ ಸಿಗುವುದು ಕಷ್ಟವಿದೆ. ಅದೇ ಕಾರಣಕ್ಕೆ ಸಂದೇಶ್ ನಾಗರಾಜ್ ಇದೀಗ ಸುದೀಪ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅದು ಬಿಟ್ಟು ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ.
ಸುದೀಪ್ 'ಮ್ಯಾಕ್ಸ್' ಚಿತ್ರೀಕರಣ ಮುಗಿಸಿದ್ದಾರೆ. ಮುಂದೆ ತಮಿಳು ನಿರ್ದೇಶಕ ಚೇರನ್ ನಿರ್ದೇಶನದಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ. ಆ ಬಳಿಕ ಯಾವ ಸಿನಿಮಾ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ತಮ್ಮದೇ ನಿರ್ದೇಶನದಲ್ಲಿ ಒಂದು ಸಿನಿಮಾ ಮಾಡಬೇಕಿದೆ. ಆ ಗ್ಯಾಪ್ನಲ್ಲಿ ಸಂದೇಶ್ ಪ್ರೊಡಕ್ಷನ್ಸ್ ಹಾಗೂ ಹೇಮಂತ್ ರಾವ್ ಚಿತ್ರಕ್ಕೆ ಸೈ ಎಂದೂ ಅಚ್ಚರಿಪಡಬೇಕಿಲ್ಲ.


Click it and Unblock the Notifications











