ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಕೈ ಜೋಡಿಸಿದ ಗಿಲ್ಲಿ; ಬಿಗ್ ಅಪ್ಡೇಟ್ ಕೊಟ್ಟ ಮಾತಿನ ಮಲ್ಲ
ಬಿಗ್ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ಬಳಿಕ ಸೈಲೆಂಟ್ ಆಗಿಬಿಟ್ಟಿದ್ದರು. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ದೊಡ್ಮನೆಯಲ್ಲಿ ಸಿಕ್ಕ ಕ್ರೇಜ್ ಬಳಸಿಕೊಂಡು ಗಿಲ್ಲಿ ಏನ್ ಮಾಡ್ತಾರೋ ಎನ್ನುವ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಗಿಲ್ಲಿ ಹೀರೊ ಆಗಿ ನಟಿಸುವ ಸಿನಿಮಾ ಅಪ್ಡೇಟ್ ಸಿಕ್ಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಕೂಡ ಈ ಚಿತ್ರಕ್ಕೆ ಬೆಂಬಲವಾಗಿ ನಿಂತಿರುವುದು ವಿಶೇಷ.
"ಒಂದು ವಿಶೇಷ ಘೋಷಣೆ, 16 ಜೂನ್ 2026, ಸಂಜೆ 6.15ಕ್ಕೆ.. ಇಂತಿ ನಿಮ್ಮ ಪ್ರೀತಿಯ ಗಿಲ್ಲಿ" ಎಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ ಗಿಲ್ಲಿ ಕುತೂಹಲ ಮೂಡಿಸಿದ್ದರು. ಇದೀಗ ಅದು ರಿವೀಲ್ ಆಗಿದೆ. ಚಂದ್ರ ಮೋಹನ್ ನಿರ್ದೇಶನದ ಇನ್ನು ಹೆಸರಿಡದ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಬಿಗ್ಬಾಸ್ ಮನೆಗೆ ಹೋಗುವ ಮುನ್ನವೇ ಗಿಲ್ಲಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಹಾಸ್ಯ ನಟನಾಗಿ ಸೆಕೆಂಡ್ ಹೀರೊ ಆಗಿ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ಕೊಂಚ ದೊಡ್ಡ ಚಿತ್ರದಲ್ಲಿ ಹೀರೊ ಆಗುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ಸ್ಪೆಷಲ್ ಪ್ರೋಮೊ ಸಮೇತ ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.

'ಬಾಂಬೆ ಮಿಠಾಯಿ' (2015), 'ಡಬಲ್ ಎಂಜಿನ್' (2018) ಮತ್ತು 'ಬ್ರಹ್ಮಚಾರಿ' (2019) ರೀತಿಯ ಕಾಮಿಡಿ ಸಿನಿಮಾಗಳನ್ನು ಕಟ್ಟಿಕೊಟ್ಟು ಚಂದ್ರ ಮೋಹನ್ ಗಮನ ಸೆಳೆದಿದ್ದರು. ಅವರು ಗಿಲ್ಲಿ ಜೊತೆ ಕೈ ಜೋಡಿಸಿದ್ದಾರೆ ಎಂದಮೇಲೆ ಇದೊಂದು ಕಾಮಿಡಿ ಸಿನಿಮಾ ಎಂದು ಬಿಡಿಸಿ ಹೇಳಬೇಕಿಲ್ಲ. ರಾಶಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಹರೀಶ್ ಹಾಗೂ ನವೀನ್ ಎಂಬುವವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಕೆವಿಎನ್ ಸಂಸ್ಥೆ ಚಿತ್ರವನ್ನು ಅರ್ಪಿಸುತ್ತಿದೆ. ವಿತರಣೆ ಹಕ್ಕು ಕೊಂಡುಕೊಳ್ಳಲಿದೆ.
ವಾಸುಕಿ ವೈಭವ್ ಸಂಗೀತ, ಚಂದ್ರಶೇಖರನ್ ಛಾಯಾಗ್ರಹಣ, ಕೆ. ಎಂ ಪ್ರಕಾಶ್ ಸಂಕಲನ ಹಾಗೂ ಮೋಹನ್ ಬಿ ಕೆರೆ ಕಲಾ ನಿರ್ದೇಶನ ಚಿತ್ರಕ್ಕೆ ಇರಲಿದೆ. ಜೂನ್ 21ರಂದು ಗಿಲ್ಲಿ ಹುಟ್ಟುಹಬ್ಬದ ದಿನವೇ ಸಿನಿಮಾ ಮುಹೂರ್ತ ನೆರೆವೇರಲಿದೆ. "ನಾನು ಈಗಾಗಲೇ ಸಿನಿಮಾ ಕಥೆ ಕೇಳಿದ್ದೀನಿ, ಚೆನ್ನಾಗಿದೆ. ನಿಮಗೆ ಸೂಕ್ತವಾಗಿದೆ. ಪ್ರತಿಭೆ ಇರುವರರಿಗೆ ಕೆವಿಎನ್ ಸಂಸ್ಥೆ ಬೆಂಬಲ ಸದಾ ಇರುತ್ತೆ. ಅಂದುಕೊಂಡ ಬಜೆಟ್ನಲ್ಲಿ ಅಂದುಕೊಂಡ ಸಮಯಕ್ಕೆ ಸಿನಿಮಾ ಮಾಡಿ" ಎಂದು ನಿರ್ಮಾಪಕ ವೆಂಕಟ್ ಕೊನಂಕಿ ತಂಡಕ್ಕೆ ಸಲಹೆ ನೀಡಿದ್ದಾರೆ. ಅಭಿಮಾನಿಗಳು ಗಿಲ್ಲಿ ಹೊಸ ಪ್ರಯತ್ನಕ್ಕೆ ಶುಭ ಹಾರೈಸುತ್ತಿದ್ದಾರೆ.
'ಜನನಾಯಗನ್' ಹಾಗೂ 'ಟಾಕ್ಸಿಕ್' ರೀತಿಯ ಭಾರೀ ಸಿನಿಮಾಗಳನ್ನು ಕೆವಿಎನ್ ಸಂಸ್ಥೆ ನಿರ್ಮಿಸಿದೆ. ಕಾರಣಾಂತರಗಳಿಂದ ಎರಡೂ ಸಿನಿಮಾ ಬಿಡುಗಡೆ ತಡವಾಗುತ್ತಿದೆ. ಆದರೆ ಯಾವುದಕ್ಕೂ ಹೆದರದೇ ಸಾಲು ಸಾಲು ಸಿನಿಮಾಗಳನ್ನು ಸಂಸ್ಥೆ ನಿರ್ಮಿಸುತ್ತಿದೆ. ಈಗ ಗಿಲ್ಲಿ ಚಿತ್ರಕ್ಕೂ ಸಾಥ್ ಕೊಟ್ಟಿರುವುದು ವಿಶೇಷ. ಬಿಗ್ಬಾಸ್ ಮುಗಿದು 5 ತಿಂಗಳ ಬಳಿಕ ಗಿಲ್ಲಿ ಹೊಸ ಪ್ರಾಜೆಕ್ಟ್ ಶುರುವಾದಂತಾಗ್ತಿದೆ. ಇಷ್ಟು ದಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ ಆಗಿ ಅವರು ಸಂಭ್ರಮಿಸಿದ್ದರು. ಅಭಿಮಾನಿಗಳ ಪ್ರೀತಿಗೆ ಫಿದಾ ಆಗಿದ್ದರು. ಮುಂದೇನು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಕೊಟ್ಟಿದ್ದಾರೆ.
ಮಂಡ್ಯ, ಮೈಸೂರು ಭಾಗದ ಹಳ್ಳಿ ಸೊಗಡಿನ ಕಥೆಯನ್ನು ಈ ಚಿತ್ರದಲ್ಲಿ ಹೇಳುತ್ತಿರುವಂತೆ ಕಾಣ್ತಿದೆ. ಗಿಲ್ಲಿ ಮಂಡ್ಯ ಭಾಷೆ, ಕಾಮಿಡಿ ಟೈಮಿಂಗ್ ಎಲ್ಲದಕ್ಕೂ ಅವಕಾಶ ಇರಲಿದೆ. ಕಾವ್ಯ ಶೈವ ನಾಯಕಿ ಆಗಿಬಿಟ್ಟರೆ ಇನ್ನು ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಸೆಟ್ಟೇರುವ ಮುನ್ನವೇ ಈ ಸಿನಿಮಾ ಕುತೂಹಲ ಮೂಡಿಸುತ್ತಿದೆ. ವರ್ಷಾಂತ್ಯಕ್ಕೆ ಗಿಲ್ಲಿ ನಟ ಹೀರೊ ಆಗಿ ತೆರೆಮೇಲೆ ಬರುವ ನಿರೀಕ್ಷೆಯಿದೆ.


Click it and Unblock the Notifications