ದುನಿಯಾ ವಿಜಯ್ ಬಳಿಕ ಸೌಜನ್ಯ ಕೇಸ್ ಬಗ್ಗೆ ಮಾತನಾಡಿದ ಮತ್ತೊಬ್ಬ ನಟ; ಉಳಿದವರ ಕಥೆಯೇನು?
ಧರ್ಮಸ್ಥಳದ ಸೌಜನ್ಯ ಅ*ಚಾರ ಹಾಗೂ ಹ* ಪ್ರಕರಣದ ಬಗ್ಗೆ ಮತ್ತೆ ಚರ್ಚೆ ಜೋರಾಗಿದೆ. ಸಮೀರ್ ಎಂಡಿ ವೀಡಿಯೋ ವೈರಲ್ ಬೆನ್ನಲ್ಲೇ ಪ್ರಕರಣದ ಮರುತನಿಖೆ ಆಗಬೇಕು, ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಸಾಕಷ್ಟು ಜನ ಆಗ್ರಹಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸಿನಿಮಾ ತಾರೆಯರು ಈ ಬಗ್ಗೆ ಪ್ರತಿಕ್ರಿಯಿಸಬೇಕು ಎನ್ನುವ ಕೂಗು ಶುರುವಾಗಿದೆ.
13 ವರ್ಷ ಕಳೆದರೂ ಸೌಜನ್ಯ ಅ*ಚಾರ ಹಾಗೂ ಕೊ* ಪ್ರಕರಣ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಈಗಾಗಲೇ ಸಾಕಷ್ಟು ಹೋರಾಟ ನಡೆದಿದೆ. ಆದರೆ ಪ್ರಕರಣದ ಬಗ್ಗೆ ಸಮೀರ್ ಎಂಡಿ ಎಂಬ ಯೂಟ್ಯೂಬರ್ ಮಾಡಿರುವ ವೀಡಿಯೋ ಮತ್ತೆ ಕಿಚ್ಚು ಹಚ್ಚಿದೆ. ಆತನ ಬಗ್ಗೆ ಕೂಡ ಪರ ವಿರೋಧ ಚರ್ಚೆ ನಡೀತಿದೆ. ಅದನ್ನು ಪಕ್ಕಕ್ಕಿಟ್ಟು ಸೌಜನ್ಯ ಪ್ರಕರಣದ ಬಗ್ಗೆ ಮಾತನಾಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎನ್ನುವ ವಾದ ಮುನ್ನಲೆಗೆ ಬಂದಿದೆ.

ದುನಿಯಾ ವಿಜಯ್ ಬಿಟ್ಟರೆ ಈವರೆಗೆ ಸಿನಿಮಾ ತಾರೆಯರು ಈ ಪ್ರಕರಣದ ಬಗ್ಗೆ ಮಾತನಾಡುವ ಗೋಜಿಗೆ ಹೋಗಲಿಲ್ಲ. ಇದೀಗ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಸೌಜನ್ಯ ಅವರ ತಾಯಿ ಜೊತೆಗೂ ಮಾತನಾಡಿರುವುದಾಗಿ ವೀಡಿಯೋ ಮಾಡಿ ಮಾತನಾಡಿದ್ದಾರೆ.
"ಸೌಜನ್ಯ ಪ್ರಕರಣದಲ್ಲಿ ನಾವು ಈಗಾಗಲೇ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದೇವೆ. ಆದರೆ ಕೆಲ ದಿನಗಳಿಂದ ಆರ್ಟಿಕಲ್ 19 ಉಲ್ಲಂಘನೆ ಆಗ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮದ ಸ್ವಾತಂತ್ರ್ಯ ಹಾಗೂ ಪ್ರತಿಭಟನೆ ಸ್ವಾತಂತ್ರ್ಯ ಬಗ್ಗೆ ಇರುವಂತದ್ದು. ಯೂಟ್ಯೂಬರ್ ಸಮೀರ್ ತಮ್ಮ ವೀಡಿಯೋ ಮೂಲಕ ಆರ್ಟಿಕಲ್ 19 ಎತ್ತಿ ಹಿಡಿದಿದ್ದಾರೆ. ಆದರೆ ಬಳ್ಳಾರಿ ಪೊಲೀಸರು ಕೇಸ್ ಹಾಕಿ ಕಿರುಕುಳ ಕೊಟ್ಟಿದ್ದಾರೆ. ಆದರೆ ಹೈಕೋರ್ಟ್ ಅದನ್ನು ರದ್ದು ಮಾಡಿರುವುದು ಒಳ್ಳೆ ಬೆಳವಣಿಗೆ" ಎಂದು ಚೇತನ್ ಹೇಳಿದ್ದಾರೆ.
ಮಾತು ಮುಂದುವರೆಸಿರುವ ಚೇತನ್ "ಪೊಲೀಸರು ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ. ಪ್ರಭಾವಿಗಳನ್ನು ಹೇಗೆ ರಕ್ಷಿಸುತ್ತಿದ್ದಾರೆ ಎನ್ನುವುದು ಎದ್ದು ಕಾಣುತ್ತಿದೆ. ಪೊಲೀಸ್ ಇಲಾಖೆ ಸರಿಯಾಗಿ ಕೆಲಸ ಮಾಡಬೇಕು. ಇತ್ತೀಚೆಗೆ ಬೆಂಗಳೂರಿನಲ್ಲಿ ಹೋರಾಟಗಾರರು ಸೌಜನ್ಯ ಪ್ರಕರಣದ ಚರ್ಚೆ ಮಾಡಬೇಕು ಅಂದಾಗ ಅದಕ್ಕೆ ಅನುಮತಿ ಕೊಟ್ಟಿಲ್ಲ ಎನ್ನುವ ಆರೋಪ ಬಂದಿದೆ. ಸಿಎಂ ಸಿದ್ದರಾಮಯ್ಯ ಅವರೇ ಆರ್ಟಿಕಲ್ 19 ಎತ್ತಿ ಹಿಡಿಯಿರಿ. ನಾವು ಹೋರಾಟಗಾರರು ಜೈಲಿಗೆ ಹೋಗಲು ಸಿದ್ಧ" ಎಂದು ಅವರು ವಿವರಿಸಿದ್ದಾರೆ.
ಮತ್ತೊಂದು ವೀಡಿಯೋದಲ್ಲಿ ಚೇತನ್ ಮಾತನಾಡಿ ಸೌಜನ್ಯ ತಾಯಿ ನನ್ನ ಜೊತೆ ಮಾತನಾಡಿದರು. ತಮಗೆ ನ್ಯಾಯ ಒದಗಿಸುವಂತೆ ಕೇಳಿದರು. ನಾವು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಬಹಳ ಹಿಂದೆಯೇ ನಟ ದುನಿಯಾ ವಿಜಯ್ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. "ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ. ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು - ಬುದ್ಧ" ಎಂದು ವಿಜಯ್ ಬರೆದುಕೊಂಡಿದ್ದರು.
ಕೆಲ ತಾರೆಯರು ಯಾವುದೇ ಪೋಸ್ಟ್ ಮಾಡಿದರೆ ಕಾಮೆಂಟ್ ಬಾಕ್ಸ್ನಲ್ಲಿ ಸೌಜನ್ಯ ಕೇಸ್ ಬಗ್ಗೆ ಮಾತನಾಡುವಂತೆ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಇತ್ತೀಚೆಗೆ ರಕ್ಷಿತ್ ಶೆಟ್ಟಿ ತಮ್ಮ 'ಮಿಥ್ಯ' ಚಿತ್ರದ ಬಗ್ಗೆ ಪೋಸ್ಟ್ ಮಾಡಿದ್ದಾಗ ಕೆಲವರು ಕಾಮೆಂಟ್ ಬಾಕ್ಸ್ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರು.


Click it and Unblock the Notifications











