"ಅನ್ಯಾಯದ ಅನುಮಾನಕ್ಕೆ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ.. ದ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ"-ಉಪೇಂದ್ರ
ಇತ್ತೀಚೆಗೆ ನಟ ಉಪೇಂದ್ರ ಮಾತನಾಡುವ ಭರದಿಂದ ಬಳಸಿದ ಪದವೊಂದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ನಟನ ವಿರುದ್ಧ ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿ ಎಫ್ಐಆರ್ ಸಹ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಆದರೆ ಉಪೇಂದ್ರ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ನಲ್ಲಿ ರಿಲೀಫ್ ಸಿಕ್ಕಿತ್ತು.
ಜಾತಿ ನಿಂದನೆ ಆರೋಪ ಹಿನ್ನೆಲೆ ನಟ ಉಪೇಂದ್ರಗೆ ಸಂಕಷ್ಟ ಎದುರಾಗಿತ್ತು. ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದು ಕೋರಿ ಉಪ್ಪಿ ಹೈಕೋರ್ಟ್ ಮೆಟ್ಟಿಲೇರಿದ್ದರು. ತಾವು ಯಾಕೆ ಆ ಪದ ಬಳಕೆ ಮಾಡಿದ್ದು ಬಳಿಕ ಕ್ಷಮೆ ಕೇಳಿದ್ದ, ವಿಡಿಯೋ ಡಿಲೀಟ್ ಮಾಡಿದ್ದು ಎನ್ನುವನ್ನು ಕೋರ್ಟ್ ಮುಂದೆ ಇಟ್ಟಿದ್ದರು. ಉಪೇಂದ್ರ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಎಫ್ಐಆರ್ಗೆ ಮಧ್ಯಂತರ ತಡೆಕೋರಿ ಆದೇಶ ನೀಡಿತ್ತು. ಈ ಬಗ್ಗೆ ಉಪೇಂದ್ರ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.

"ಅನ್ಯಾಯದ ಅನುಮಾನಕ್ಕೇ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ. ದ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ. ಅನಿರೀಕ್ಷಿತ ಬಿಸಿಲ ತಾಪಕ್ಕೆ ಸಹ್ರದಯಗಳು ಹಿಡಿದ ಪ್ರೀತಿಯ ಕೊಡೆ. ನನ್ನನ್ನು ತಿದ್ದಿ ತೀಡುತ್ತಿರುವ ನಿಮ್ಮೆಲ್ಲರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹ್ರದಯ ನನಗೆ ಕೊಡೆ ತಾಯಿ... ನನಗೆ ಕೊಡೆ. ಧನ್ಯವಾದಗಳು" ಎಂದು ತಮ್ಮ ಬೆಂಬಲಕ್ಕೆ ನಿಂತವರಿಗೆ ಉಪೇಂದ್ರ ಧನ್ಯವಾದ ತಿಳಿಸಿದ್ದಾರೆ.
ಪ್ರಜಾಕೀಯ 6 ವರ್ಷ ಪೂರೈಸಿದ ಸಂದರ್ಭದಲ್ಲಿ ನಟ ಉಪೇಂದ್ರ ಫೇಸ್ಬುಕ್ ಲೈವ್ ಬಂದು ಮಾತನಾಡಿದ್ದರು. ಈ ವೇಳೆ "ಊರು ಎಂದ ಮೇಲೆ ಹೊಲಗೇರಿ ಇರುತ್ತೆ" ಎನ್ನುವ ಗಾದೆ ಮಾತನ್ನು ಹೇಳಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಉಪೇಂದ್ರ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಭಾರೀ ಆಕ್ರೋಶ ವ್ಯಕ್ತವಾಯಿತು. ಕೂಡಲೇ ಉಪೇಂದ್ರ ವಿಡಿಯೋ ಡಿಲೀಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ್ದರು. ಆದರೂ ಆಕ್ರೋಶ ಕಮ್ಮಿ ಆಗಿರಲಿಲ್ಲ. ಬೆಂಗಳೂರು, ರಾಮನಗರದಲ್ಲಿ ಉಪೇಂದ್ರ ಪ್ರತಿಕೃತಿ ದಹಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಉಪೇಂದ್ರ ಆಕ್ಷೇಪಾರ್ಹ ಪದ ಬಳಕೆಯನ್ನು ಖಂಡಿಸಿ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಹಾಗೂ ಹಲಸೂರು ಗೇಟ್ ಪೊಲೀಸ್ ಠಾಣೆಗಳಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿತ್ತು. ಸಚಿವರಾದ ಹೆಚ್. ಸಿ ಮಹದೇವಪ್ಪ ಕೂಡ ಉಪೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆಯಿತು. ಕೆಲವರು ಉಪೇಂದ್ರ ಪದ ನಿಂತರು. ಉಪೇಂದ್ರ ಗೊತ್ತಿಲ್ಲದೇ ಆ ಪದ ಬಳಸಿದ್ದಾರೆ. ಬಳಿಕ ಅದಕ್ಕೆ ಕ್ಷಮೆ ಕೂಡ ಕೇಳಿದ್ದಾರೆ. ಅಲ್ಲಿಗೆ ಮುಗೀತು. ನಾವು ಉಪೇಂದ್ರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದಿದ್ದರು.
ಇನ್ನು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ವಿಚಾರಣೆಗಾ ಹಾಜರಾಗುವಂತೆ ಉಪೇಂದ್ರಗೆ ನೋಟಿಸ್ ನೀಡಲಾಗಿತ್ತು. ಉಪೇಂದ್ರ ಅವರ ಕತ್ರಿಗುಪ್ಪೆ ಹಾಗೂ ಸದಾಶಿವ ನಗರದ ಮನೆಗಳಿಗೆ ನೋಟಿಸ್ ತಲುಪಿತ್ತು. ಉಪ್ಪಿ ಮನೆಯಲ್ಲಿ ಇಲ್ಲ ಎಂದು ತಿಳಿದ ಮೇಲೆ ವಾಟ್ಸಪ್ನಲ್ಲಿ ನೋಟಿಸ್ ರವಾನಿಸಲಾಗಿತ್ತು. ಬಳಿಕ ಉಪೇಂದ್ರ ವಿಡಿಯೋ ಮಾಡಿದ ಸ್ಥಳದ ಮಹಜರು ಕೂಡ ಮಾಡಲಾಯಿತು.
ಬಂಧನ ಭೀತಿ ಹಿನ್ನೆಲೆ ಬೆಳಗ್ಗೆಯಿಂದ ಎಲ್ಲೂ ಕಾಣಿಸಿಕೊಳ್ಳದ ಉಪೇಂದ್ರ ಬಳಿಕ ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನಾನಿ ಜಾತಿ ನಿಂದನೆ ಮಾಡಿಲ್ಲ. ಎಫ್ಐಆರ್ ರದ್ದು ಮಾಡಿ ಎಂದು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಎಫ್ಐಆರ್ಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.


Click it and Unblock the Notifications











