Kerebete Movie: 'ಕಾಂತಾರ' ಬಳಿಕ ಮತ್ತೊಂದು ಅಪ್ಪಟ ಕನ್ನಡ ಸಿನಿಮಾ 'ಕೆರೆಬೇಟೆ'.. ಏನಿದರ ಕಥೆ?
ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರೋ ದೇಶ. ಒಂದೊಂದು ಏರಿಯಾದಲ್ಲೂ ಒಂದೊಂದು ಸಂಸ್ಕೃತಿ ನೋಡುವುದಕ್ಕೆ ಸಿಗುತ್ತೆ. ಪ್ರತಿಯೊಂದು ಆಚಾರ ವಿಚಾರದ ಹಿಂದೆನೂ ಕೇಳರಿಯದ ಇತಿಹಾಸವಿರುತ್ತೆ. ಇಂತಹ ದೇಸಿ ಸಂಸ್ಕೃತಿಯನ್ನು ಕಲ್ಪನೆಯನ್ನು ತೆರೆಮೇಲೆ ತರುವ ಪ್ರಯತ್ನ ಆಗುತ್ತಿದೆ.
'ಕಾಂತಾರ' ಬಳಿಕ ಕರ್ನಾಟಕದ ಸಂಸ್ಕೃತಿ, ಆಚಾರ-ವಿಚಾರ, ಜನರ ಜೀವನ ಶೈಲಿಯನ್ನು ಆಧರಿಸಿ ಸಿನಿಮಾ ಮಾಡುವ ಪ್ರಯತ್ನ ನಡೆಯುತ್ತಿದೆ. ಇಂತಹದ್ದೇ ಒಂದು ಸಿನಿಮಾ 'ಕೆರೆಬೇಟೆ'. ಹಾಗಂತ ಇದು ಕರಾವಳಿಯ ದೈವಕ್ಕೆ ಸಂಬಂಧಿಸಿದ ಸಿನಿಮಾ ಅಲ್ಲ. ಅಪ್ಪಟ ಮಲೆನಾಡು ಭಾಗದ ಒಂದು ಕಥೆ.

'ಕೆರೆಬೇಟೆ' ಟೈಟಲ್ ರಿವೀಲ್ ಆಗುತ್ತಿದ್ದಂತೆ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿತ್ತು. ಹಾಗಂತ ಸಿನಿಮಾದ ಉದ್ದಕ್ಕೂ ಬರೀ ಕೆರೆಬೇಟೆನೇ ಇರುತ್ತೆ ಎಂದಲ್ಲ. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ಆದರೆ, ಈ ಸಿನಿಮಾದಲ್ಲಿ ಮಲೆನಾಡಿನ ಪ್ಲೇವರ್ ಇರುತ್ತೆ. ಇದು ಸಿನಿಪ್ರಿಯರಿಗೆ ವಿಶಿಷ್ಟ ಅನುಭವ ನೀಡುತ್ತೆ ಅನ್ನೋದು ನಾಯಕ ಗೌರಿ ಶಂಕರ್ ಅಭಿಪ್ರಾಯ. ಸದ್ಯ ರಿಲೀಸ್ ಆಗಿರೋ ಸಿನಿಮಾದ ಮೋಷನ್ ಪೋಸ್ಟರ್ ಕೂಡ ಹೊಸ ಕಥೆಯನ್ನೇ ಹೇಳುತ್ತಿದೆ.
ಒಮ್ಮೊಮ್ಮೆ ಸಿನಿಮಾದ ಟೈಟಲ್ ಸಿನಿಪ್ರಿಯರಿಗೆ ಕಿಕ್ ಕೊಡುತ್ತೆ. 'ಕೆರೆಬೇಟೆ' ಅಂತಹದ್ದೇ ಒಂದು ಶೀರ್ಷಿಕೆ. ಈ ಸಿನಿಮಾ ನಾಯಕ ಗೌರಿ ಶಂಕರ್ ಮೂಲತ: ಮಲೆನಾಡಿನವರು. ಹೀಗಾಗಿ ಅಲ್ಲಿನ ಜೀವನ ಶೈಲಿಯ ಮೇಲೆ ಪ್ರಭಾವಿತರಾಗಿದ್ದಾರೆ. ಹೀಗಾಗಿ ಮೋಷನ್ ಪೋಸ್ಟರ್ ಸಿಕ್ಕಾಪಟ್ಟೆ ರಗಡ್ ಆಗಿ ಕಾಣಿಸಿಕೊಳ್ಳುತ್ತಾರೆ. ಕೈಯಲ್ಲಿ ಮೀನಿನ ಕೂಣಿ ಹಿಡಿದು ರೋಷದಿಂದ ಮುನ್ನುತ್ತಿರುವ ಪೋಸ್ಟರ್ ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ.
ಸಿನಿಮಾ ಬಗ್ಗೆ ತಿಳಿಯುವುದಕ್ಕೂ ಮುನ್ನ 'ಕೆರೆಬೇಟೆ' ಅಂದರೆ ಏನು? ಮಲೆನಾಡಿನ ಈ ಸಂಪ್ರದಾಯದ ವೈಶಿಷ್ಟ್ಯತೆ ಏನು? ಅನ್ನೋದನ್ನು ತಿಳಿಯೋದು ಮುಖ್ಯ. ಬೇಸಿಗೆಯಲ್ಲಿ ಊರಿನ ಜನರೆಲ್ಲರೂ ಒಟ್ಟಿಗೆ ಕೂಣಿ, ಬಲೆ ಹಿಡಿದು ಕೆರೆಗೆ ಇಳಿಯುತ್ತಾರೆ. ಕಾಂಪಿಟೇಷನ್ಗೆ ಬಿದ್ದು ಮೀನು ಹಿಡಿಯುತ್ತಾರೆ. ಎಲ್ಲರಿಗಿಂತ ಹೆಚ್ಚು ಮೀನು ಹಿಡಿಯಬೇಕೆಂಬ ಹುರುಷು, ಧಾವಂತ ಎರಡೂ ಪ್ರತಿಯೊಬ್ಬರಲ್ಲೂ ಇರುತ್ತೆ.

ಸಾವಿರಾರು ಜನರು ಕೂಣಿ (ಮೀನು ಹಿಡಿಯುವ ಸಾಧನ) ಹಿಡಿದು ಕೆರೆಗೆ ಇಳಿದರೆ ಮುಗೀತು. ಆ ದೃಶ್ಯಗಳನ್ನು ಕಣ್ತುಂಬಿಕೊಳ್ಳುವುದಕ್ಕೆ ಎರಡು ಕಣ್ಣುಗಳು ಸಾಲದು. ಈ ಸಂದರ್ಭದಲ್ಲಿ ಪೈಪೋಟಿ, ಕೋಪ, ಜಗಳ ಎಲ್ಲವೂ ಇರುತ್ತೆ. ಇಂತಹ ಬ್ಯಾಕ್ಗ್ರೌಂಡ್ನಲ್ಲಿ 'ಕೆರೆಬೇಟೆ' ಸಿನಿಮಾ ಸೆಟ್ಟೇರಿದೆ. ರಾಜಹಂಸ ಬಳಿಕ ಗೌರಿಶಂಕರ್ ಎಸ್ಆರ್ಜಿ ಕನ್ನಡಿಗರಿಗೆ ಈ ಸಿನಿಮಾ ಮೂಲಕ ಹೊಸ ಅನುಭವ ನೀಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
'ಕೆರೆಬೇಟೆ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ರಾಜ್ಗುರು. ನಿರ್ದೇಶಕ ಪವನ್ ಒಡೆಯರ್ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 'ಗೂಗ್ಲಿ', 'ರಣವಿಕ್ರಮ', 'ನಟಸಾರ್ವಭೌಮ', 'ಜೆಸ್ಸಿ', 'ರೆಮೋ' ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವವಿದೆ. ಶಿವಮೊಗ್ಗದ ಸಿಗಂದೂರು ಹಾಗೂ ಸೊರಬ ಭಾಗಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಣ ಮಾಡಲಾಗಿದೆ. ಬಹುತೇಕ ಚಿತ್ರೀಕರಣ ಮುಗಿದಿದ್ದು, ಕೊನೆಯ ಹಂತದ ಶೂಟಿಂಗ್ ಬಾಕಿದೆ. ನವೆಂಬರ್ ತಿಂಗಳಲ್ಲಿ ಸಿನಿಮಾ ಆರಂಭ ಆಗಲಿದ್ದು, ಮುಂದಿನ ವರ್ಷಕ್ಕೆ ಸಿನಿಮಾ ರಿಲೀಸ್ ಆಗಲಿದೆ.
ಗೌರಿಶಂಕರ್ ಜೊತೆ ಸುಮಾರು 30 ರಿಂದ 40 ಮಂದಿ ರಂಗಭೂಮಿ ಅನುಭವವುಳ್ಳ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾ ಮೂಲಕ ಬಿಂದು ಶಿವರಾಜ್ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಇದು ಬಿಂದು ಅವರ ಚೊಚ್ಚಲ ಸಿನಿಮಾ. ಇವರೊಂದಿಗೆ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಅಂತಹ ಅನುಭವಿ ನಟರೂ ಇದ್ದಾರೆ. 'ಜನಮನ ಸಿನಿಮಾಸ್' ಮೂಲಕ ಗೌರಿಶಕಂಕರ್ ಮತ್ತು ಜೈಶಂಕರ್ ಪಟೇಲ್ ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











