ಈ ಹಿಂದೆ ಯಾರಿಗೆಲ್ಲಾ ಕರ್ನಾಟಕ ರತ್ನ ಸಿಕ್ಕಿತ್ತು? ಪ್ರಶಸ್ತಿಯಲ್ಲಿ ಏನೆಲ್ಲಾ ಇರುತ್ತೆ?
ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಬಿ. ಸರೋಜಾ ದೇವಿಯವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಆಗಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ದಾದಾ ಕುಟುಂಬಸ್ಥರು ಖುಷಿ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಅಳಿಯ ಅನಿರುದ್ಧ್ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಬೇಕು ಎನ್ನುವುದು ಬಹಳ ದಿನಗಳ ಬೇಡಿಕೆ ಆಗಿತ್ತು. ಇತ್ತೀಚೆಗೆ ಸರ್ಕಾರಕ್ಕೆ ಈ ಬಗ್ಗೆ ಸಾಕಷ್ಟು ಜನ ಮನವಿ ಮಾಡಿದ್ದರು. ಇಂದು(ಸೆಪ್ಟೆಂಬರ್ 11) ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಘೋಷಣೆ ಮಾಡಿದ್ದಾರೆ. ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಸಮಾರಂಭದ ಬಗ್ಗೆ ಮಾಹಿತಿ ಸಿಗಲಿದೆ. ಈ ಹಿಂದೆ ರಾಷ್ಟ್ರಕವಿ ಕುವೆಂಪು, ವರನಟ ಡಾ. ರಾಜ್ಕುಮಾರ್ ಸೇರಿ 10 ಮಂದಿ ಮಹನೀಯರಿಗೆ ಈ ಗೌರವ ಲಭಿಸಿತ್ತು.

ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ 1992ರಲ್ಲಿ ಕುವೆಂಪು ಅವರಿಗೆ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. ಅದೇ ಮೊದಲ ಬಾರಿಗೆ ಪ್ರಶಸ್ತಿಯನ್ನು ಆರಂಭಿಸಲಾಗಿತ್ತು. ಅದೇ ವರ್ಷ ಚಿತ್ರರಂಗದ ಸೇವೆಗಾಗಿ ಡಾ. ರಾಜ್ಕುಮಾರ್ ಅವರಿಗೆ ಪ್ರಶಸ್ತಿ ನೀಡಿದ್ದರು. 1999ರಲ್ಲಿ ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಕರ್ನಾಟಕ ರತ್ನ ಗೌರವಕ್ಕೆ ಪಾತ್ರರಾಗಿದ್ದರು.
ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಪುರಸ್ಕರಿಸಿ 2000 ಇಸವಿಯಲ್ಲಿ ಸಿ. ಎನ್. ಆರ್ ರಾವ್ ಅವರಿಗೆ ಕರ್ನಾಟಕ ರತ್ನ ನೀಡಿದ್ದರು. ಬಳಿಕ ದೇವಿ ಶೆಟ್ಟಿ(2001), ಭೀಮ್ ಸೇನ್ ಜೋಶಿ(2005), ಶಿವಕುಮಾರ ಸ್ವಾಮೀಜಿ(2007), ಜವರೇ ಗೌಡ(2008) ಹಾಗೂ ವೀರೇಂದ್ರ ಹೆಗ್ಗಡೆ(2009) ಕರ್ನಾಟಕ ರತ್ನ ಸ್ವೀಕರಿಸಿದ್ದರು. ಬಳಿಕ 13 ವರ್ಷಗಳ ಕಾಲ ಯಾರಿಗೂ ಪ್ರಶಸ್ತಿ ಪ್ರದಾನ ಮಾಡಿರಲಿಲ್ಲ. 3 ವರ್ಷಗಳ ಹಿಂದೆ ನಟ ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಿದ್ದರು.

ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುನೀತ್ ಪತ್ನಿ ಅಶ್ವಿನಿ ಪ್ರಶಸ್ತಿ ಸ್ವೀಕರಿಸಿದ್ದರು. ರಜನಿಕಾಂತ್ ಹಾಗೂ ಜ್ಯೂ. ಎನ್ಟಿಆರ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇದೀಗ ನಟ ವಿಷ್ಣುವರ್ಧನ್ ಹಾಗೂ ನಟಿ ಬಿ. ಸರೋಜಾ ದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಘೋಷಣೆ ಆಗಿದೆ. ವಿಷ್ಣು ಪರ ಪತ್ನಿ ಭಾರತಿ ಹಾಗೂ ಬಿ. ಸರೋಜಾ ದೇವಿ ಪರ ಅವರ ಮಕ್ಕಳು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಪ್ರಶಸ್ತಿ ಪ್ರದಾನ ಸಮಾರಂಭ ಎಲ್ಲಿ, ಯಾವಾಗ ಎನ್ನುವ ಬಗ್ಗೆ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ತೀರ್ಮಾನಿಸಲಿದೆ ಎಂದು ಸಚಿವ ಹೆಚ್. ಕೆ ಪಾಟೀಲ್ ಹೇಳಿದ್ದಾರೆ.
ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಅವರ 75ನೇ ವರ್ಷದ ಹುಟ್ಟುಹಬ್ಬ ಆಚರಣೆಗೆ ಅಭಿಮಾನಿಗಳು ಸಿದ್ಧರಾಗಿದ್ದಾರೆ. ಅದರ ಹೊಸ್ತಿಲಲ್ಲೇ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಣೆ ಆಗಿರುವುದು ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗಿಸಿದೆ. ಇನ್ನು ಈ ಪ್ರಶಸ್ತಿಯು ಒಂದು ಚಿನ್ನದ ಪದಕ, ನೆನಪಿನ ಕಾಣಿಕೆ ಹಾಗೂ ಶಾಲನ್ನು ಒಳಗೊಂಡಿರುತ್ತದೆ.
ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಇತ್ತೀಚೆಗೆ ಪತ್ನಿ ಭಾರತೀ ಹಾಗೂ ಅಳಿಯ ಅನಿರುದ್ಧ್ ಸಿಎಂ ಭೇಟಿ ಮಾಡಿ ಮನವಿ ಮಾಡಿದ್ದರು. ಕನ್ನಡ ಸಿನಿಮಾ ನಟಿಯರಾದ ಜಯಮಾಲ, ಶ್ರುತಿ ಮತ್ತು ಮಾಳವಿಕ ಅವಿನಾಶ್ ಕೂಡ ಈ ಬಗ್ಗೆ ಸಿಎಂ ಬಳಿ ಚರ್ಚಿಸಿ ವಿನಂತಿಸಿದ್ದರು. ಈ ವಿಚಾರವನ್ನು ಸಿಎಂ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಒಟ್ಟಾರೆ ದಾದಾಗೆ ಕೊನೆಗೂ ಕರ್ನಾಟಕ ರತ್ನ ಗೌರವ ಸಿಕ್ಕಿದ್ದಕ್ಕೆ ಅಭಿಮಾನಿಗಳು ಖುಷಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸುತ್ತಿದ್ದಾರೆ.


Click it and Unblock the Notifications











