ಮತ್ತೆ ವರ್ಕೌಟ್ ಪ್ರಾರಂಭ ಮಾಡಿದ ಕಿಚ್ಚ ಸುದೀಪ್: ಹೇಳಿದ್ದೇನು?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಬಹುನಿರೀಕ್ಷೆಯ ಎರಡು ಸಿನಿಮಾಗಳ ಬಿಡುಗಡೆ ಕಾಯುತ್ತಿದ್ದಾರೆ. ಕೋಟಿಗೊಬ್ಬ-3 ಸಿನಿಮಾದ ಚಿತ್ರೀಕರಣ ಮುಗಿಸಿರುವ ಕಿಚ್ಚ ಇತ್ತೀಚಿಗಷ್ಟೆ ವಿಕ್ರಾಂತ್ ರೋಣ ಚಿತ್ರೀಕರಣವನ್ನು ಮುಗಿಸಿದ್ದಾರೆ. ಎರಡು ಸಿನಿಮಾ ಮುಗಿಸಿ ಸುದೀಪ್ ಬಿಡುಗಡೆ ಎದುರು ನೋಡುತ್ತಿದ್ದಾರೆ. ಕಿಚ್ಚನನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರಿಂದ ಕಾಯುತ್ತಿದ್ದಾರೆ. ಈ ನಡುವೆ ಕಿಚ್ಚ ಹೊಸ ಫೋಟೋ ಶೇರ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಹೌದು, ಕಿಚ್ಚ ಸುದೀಪ್ ಮತ್ತೆ ವರ್ಕೌಟ್ ಪ್ರಾರಂಭ ಮಾಡಿದ್ದಾರೆ. ಮತ್ತೆ ಜಿಮ್ ಗೆ ಹೋಗುತ್ತಿರುವ ಸುದೀಪ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರ. ಸೆಲೆಬ್ರಿಟಿಗಳು ವರ್ಕೌಟ್ ಪ್ರಾರಂಭ ಮಾಡುವುದರಲ್ಲಿ ಏನು ವಿಶೇಷ ಅಂತೀರಾ?. ಸುದೀಪ್ ಅನೇಕ ತಿಂಗಳ ಬಳಿಕ ಜಿಮ್ ಕಡೆ ಮುಖ ಮಾಡಿದ್ದಾರೆ. ಜಿಮ್ನಲ್ಲಿ ಕ್ಲಿಕ್ಕಿಸಿದ ಒಂದು ಫೋಟೋವನ್ನು ಕಿಚ್ಚ ಹಂಚಿಕೊಂಡಿದ್ದು, ಫೋಟೋ ನೋಡಿ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ.
ಅಂದಹಾಗೆ ಸುದೀಪ್ ಇಷ್ಟು ದಿನಗಳ ಕಾಲ ಜಿಮ್ಗೆ ಹೋಗದೆ ಇರಲು ಕಾರಣ ಕೊರೊನಾ. ಹೌದು, ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಬಳಿಕ ಸುದೀಪ್ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ತಿಂಗಳುಗಟ್ಟಲೆ ವಿಶ್ರಾಂತಿ ಪಡೆದರು ಗುಣಮುಖರಾದರು ವರ್ಕೌಟ್ ಮಾಡುವುದು ಅಷ್ಟು ಸುಲಭವಲ್ಲ. ಕೊರೊನಾದಿಂದ ಚೇತರಿಸಿಕೊಂಡ ನಂತರವೂ ಆರೋಗ್ಯದಲ್ಲಿ ಏರುಪೇರು ಆಗುತ್ತಲೇ ಇರುತ್ತದೆ. ಆ ಕಾರಣಕ್ಕೆ ಜಿಮ್ಗೆ ತೆರಳಲು ಸುದೀಪ್ಗೆ ಸಾಧ್ಯವಾಗಿರಲಿಲ್ಲ. ಇದೀಗ ಕೊರೊನಾಗೆ ಸೆಡ್ಡು ಹೊಡೆದು ಅವರು ಜಿಮ್ ಮೆಟ್ಟಿಲು ಹತ್ತಿದ್ದಾರೆ.

ಈ ಬಗ್ಗೆ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜಿಮ್ ನಲ್ಲಿರುವ ಫೋಟೋ ಶೇರ್ ಮಾಡುವ ಜೊತೆಗೆ ಸುದೀಪ್, "ಕೊರೊನಾದಿಂದ ಗುಣಮುಖರಾದ ನಂತರವೂ ತಿಂಗಳುಗಟ್ಟಲೇ ಅದರ ಪ್ರಭಾವ ಇರುತ್ತದೆ. ವರ್ಕೌಟ್ ಮಾಡುವುದನ್ನು ನಾನು ತುಂಬ ಎಂಜಾಯ್ ಮಾಡುತ್ತೇನೆ. ಹಾಗಾಗಿ ಮತ್ತೆ ಜಿಮ್ಗೆ ಬರಬೇಕು ಎಂದು ಪ್ರಯತ್ನಿಸುತ್ತಲೇ ಇದ್ದೆ. ಜಿಮ್ಗೆ ಬಂದು ನನ್ನ ಹಳೇ ದಿನಚರಿಗೆ ಮರಳಲು ಖುಷಿ ಎನಿಸುತ್ತಿದೆ. ಅತಿ ಅವಶ್ಯಕತೆ ಇದ್ದಾಗ ನನಗೆ ಬೆಂಬಲ ನೀಡಿದ ವೈದ್ಯರು, ಕುಟುಂಬದವರು, ಸ್ನೇಹಿತರು ಮತ್ತು ಟ್ರೇನರ್ಗಳಿಗೆ ಧನ್ಯವಾದಗಳು" ಎಂದು ಸುದೀಪ್ ದೀರ್ಘವಾಗಿ ಬರೆದುಕೊಂಡಿದ್ದಾರೆ.
ಅಂದಹಾಗೆ ಸುದೀಪ್ ತನ್ನ ಜೀವನದಲ್ಲಿ ಮೊದಲ ಬಾರಿಗೆ ಜಿಮ್ ಪ್ರಾರಂಭ ಮಾಡಿದ್ದು, ಪೈಲ್ವಾನ್ ಸಿನಿಮಾದ ಸಮಯದಲ್ಲಿ. ಪೈಲ್ವಾನ್ ಚಿತ್ರದಲ್ಲಿ ಕಿಚ್ಚ ದೇಹ ಹುರಿಗೊಳಿಸುವ ಮೂಲಕ ತೆರೆಮೇಲೆ ಮಿಂಚಿದ್ದರು. ಕಟ್ಟುಮಸ್ತಾದ ಕಿಚ್ಚನನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಪೈಲ್ವಾನ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಳಿಕ ವರ್ಕೌಟ್ ಹಾಗೆ ಮುಂದುವರೆಸಿದ್ದ ಸುದೀಪ್ ಕೊರೊನಾ ಕಾರಣದಿಂದ ನಿಲ್ಲಿಸಿದ್ದರು ಮತ್ತೆ ಪ್ರಾರಂಭ ಮಾಡಿದ ಸಂತಸದಲ್ಲಿದ್ದಾರೆ ಸುದೀಪ್.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸುದೀಪ್ ಸದ್ಯ ಎರಡು ಸಿನಿಮಾಗಳ ಬಿಡುಗಡೆ ಕಾಯುತ್ತಿದ್ದಾರೆ. ಈ ಸಿನಿಮಾ ಬಳಿಕ ಮುಂದಿನ ಸಿನಿಮಾ ಇನ್ನು ಬಹಿರಂಗ ಪಡಿಸಿಲ್ಲ. ಇತ್ತೀಚಿಗಷ್ಟೆ ಕಿಚ್ಚ ಹೇಳಿದ ಪ್ರಕಾರ ಮತ್ತೆ ನಿರ್ದೇಶಕ ಅನೂಪ್ ಭಂಡಾರಿ ಜೊತೆ ಸಿನಿಮಾ ಮಾಡುವ ಸುಳಿವು ನೀಡಿದ್ದಾರೆ. ಅಶ್ವತ್ಥಾಮ ಸಿನಿಮಾ ಮಾಡುವುದಾಗಿ ಕಿಚ್ಚ ಹೇಳಿದ್ದಾರೆ. ಸ್ಕ್ರಿಪ್ಟ್ ಕೆಲಸ ಪ್ರಾರಂಭವಾಗಿದೆ ಎನ್ನುವುದನ್ನು ಸುದೀಪ್ ಹೇಳಿದ್ದಾರೆ. ಆದರೆ ಯಾವಾಗ ಪ್ರಾರಂಭವಾಗಲಿದೆ, ಮುಂದಿನ ಸಿನಿಮಾ ಅಶ್ವತ್ಥಾಮನಾ ಎನ್ನುವುದು ಬಹಿರಂಗವಾಗಬೇಕಿದೆ.


Click it and Unblock the Notifications











