ರೋಮ್ಯಾಂಟಿಕ್ ಮೂಡ್ ನಲ್ಲಿ 'ದಿಯಾ' ಸಿನಿಮಾದ ಹೀರೋ ಆದಿ
ಸ್ಯಾಂಡಲ್ ವುಡ್ ನಲ್ಲಿ ಸದ್ಯ 'ದಿಯಾ' ಸಿನಿಮಾದ್ದೆ ಮಾತುಕತೆ. ಚಿತ್ರಮಂದಿರಗಳು ಬಂದ್ ಆಗಿ ಸಿನಿಮಾ ಪ್ರದರ್ಶನವಿಲ್ಲವಾದರು ದಿಯಾ ಸಿನಿಮಾ ಮಾತ್ರ ಸದ್ದು ಮಾಡುತ್ತಿದೆ. ರೋಮ್ಯಾಂಟಿಕ್ ದಿಯಾ ಸಿನಿಮಾವನ್ನು ನೋಡಲು ಜನ ಆನ್ ಲೈನ್ ಮುಗಿಬಿದ್ದಿದ್ದಾರೆ. ಸಿನಿಮಾ ನೋಡಿ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.
Recommended Video
ಮತ್ತೆ ಸಿನಿಮಾವನ್ನು ರಿ-ರಿಲೀಸ್ ಮಾಡುವಂತೆ ಅಭಿಮಾನಿಗಳು ಸಿನಿಮಾತಂಡವನ್ನು ಕೇಳಿಕೊಳ್ಳುತ್ತಿದ್ದಾರೆ. ಸಿನಿಮಾದ ಪ್ರತಿಯೊಂದು ಪಾತ್ರಗಳು ಪ್ರೇಕ್ಷಕರನ್ನು ಕಾಡುತ್ತಿವೆ. ಅಂದ್ಹಾಗೆ ಸಿನಿಮಾ ರಿಲೀಸ್ ಆಗಿ ತಿಂಗಳಾಗಿದೆ. ಸಿನಿಮಾಗೆ ಪ್ರೇಕ್ಷಕರಿಂದ ಮೆಚ್ಚುಗೆಯ ಮಹಾಪೂರವೆ ಸಿಕ್ಕಿದೆ. ಈ ಸಕ್ಸಸ್ ನ ಖುಷಿಯಲ್ಲಿಯೆ ನಟ ಪೃಥ್ವಿ ಅಂಬರ್ ಮುಂದಿನ ಸಿನಿಮಾದ ತಯಾರಿಯಲ್ಲಿದ್ದಾರೆ.

ರೋಮ್ಯಾಂಟಿಕ್ ಮೂಡ್ ನಲ್ಲಿ ಪೃಥ್ವಿ
ಸಿನಿಮಾದಲ್ಲಿ ಬಯಸಿದ ಪ್ರೀತಿ ಸಿಗದೆ ಕೊನೆಯುಸಿರೆಳೆಯುವ ಆದಿ ಮತ್ತೆ ರೋಮ್ಯಾಂಟಿಕ್ ಮೂಡಿಗೆ ಮರಳಿದ್ದಾರೆ. ಅಂದರೆ ಪೃಥ್ವಿ ಈಗ ಮುಂದಿನ ಸಿನಿಮಾಗೆ ಕಥೆ ಬರೆಯುತ್ತಿದ್ದಾರೆ. ಅದೂ ರೋಮ್ಯಾಂಟಿಕ್ ಕಥೆಯಂತೆ. ದಿಯಾ ಸಿನಿಮಾ ಯಶಸ್ಸಿನ ಬೆನ್ನಲೆ ಪೃಥ್ವಿ ಮುಂದಿನ ಸಿನಿಮಾಗೆ ಕಥೆ ಬರೆಯುತ್ತಿದ್ದಾರೆ. ನಾಯಕನಾಗಿ ಮಿಂಚುತ್ತಿದ್ದ ಪೃಥ್ವಿ ಈಗ ಅವರೆ ಕಥೆಗಾರರಾಗಿದ್ದಾರೆ.

ಎರಡು ಪ್ರಾಜೆಕ್ಟ್ ನಲ್ಲಿ ಪೃಥ್ವಿ ಬ್ಯುಸಿ
ಪೃಥ್ವಿ ಸದ್ಯ ಎರಡು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಕನ್ನಡ ಸಿನಿಮಾವಾದರೆ ಮತ್ತೊಂದು ತುಳು ಸಿನಿಮಾ. ಸದ್ಯ ಪೃಥ್ವಿ ಕಥೆ ಬರೆಯುತ್ತಿರುವುದು ಕನ್ನಡ ಸಿನಿಮಾಗೆ. ಪೃಥ್ವಿ ಬರೆಯುತ್ತಿರುವ ಕಥೆಗೆ ಅವರೆ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಂದ್ಹಾಗೆ ಈ ಸಿನಿಮಾ ಜುಲೈ ಅಥವಾ ಆಗಸ್ಟ್ ನಲ್ಲಿ ಸೆಟ್ಟೇರಲಿದೆಯಂತೆ.

ಮೀನುಗಾರನ ಪಾತ್ರದಲ್ಲಿ ಪೃಥ್ವಿ
ದಿಯಾ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಪೃಥ್ವಿ ಈಗ ಮುಂದಿನ ಸಿನಿಮಾದಲ್ಲಿ ಮೀನುಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕರಾವಳಿಯ ಯುವ ಮೀನುಗಾರನಾಗಿ ಮಿಂಚಲು ಪೃಥ್ವಿ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಪ್ರೇಮಕಥೆಯೆ ಹೈಲೆಟ್ ಅಂತೆ. ಜೊತೆಗೆ ಥ್ರಿಲ್ಲಿಂಗ್ ಅಂಶ ಕೂಡ ಇರಲಿದೆಯಂತೆ. ಮಾನ್ಸೂನ್ ಬ್ಯಾಗ್ರೌಂಡ್ ಬೇಕಾಗಿರುವುದರಿಂದ ಮಳೆಗಾಲದಲ್ಲಿ ಚಿತ್ರೀಕರಣ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಸಿನಿಮಾಗಳ ಆಯ್ಕೆಯಲ್ಲಿ ಕಟ್ಟುನಿಟ್ಟಾಗಲಿದ್ದಾರೆ ಪೃಥ್ವಿ
ಸದ್ಯ ದಿಯಾ ಸಿನಿಮಾ ಸೂಪರ್ ಹಿಟ್ ಆಗಿರುವ ಕಾರಣ ಮುಂದಿನ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿರುತ್ತೆ. ಹಾಗಾಗಿ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಜವಾಬ್ದಾರಿ ನಾಯಕನ ಮೇಲಿರುತ್ತೆ. ಈ ಹಿಂದೆ ಪೃಥ್ವಿ ಅಭಿನಯದ ಸಾಲು ಸಾಲು ಸಿನಿಮಾಗಳು ತುಳುವಿನಲ್ಲಿ ರಿಲೀಸ್ ಆಗಿವೆ. ಆದರೆ ಹೇಳುವಷ್ಟು ಯಶಸ್ಸು ಸಿಕ್ಕಿರಲಿಲ್ಲ. ಆದರೀಗ ದಿಯಾ ಹಿಟ್ ಆಗಿದೆ. ಹಾಗಾಗಿ ಮುಂದೆ ಸಿನಿಮಾಗಳನ್ನು ಯೋಚಿಸಿ ಆಯ್ಕೆ ಮಾಡಿಕೊಳ್ಳುತ್ತಾರಂತೆ.

ತುಳು ಚಿತ್ರರಂಗಕ್ಕೆ ಋಣಿಯಾಗಿದ್ದೀನಿ
ತುಳು ಸಿನಿಮಾರಂಗದಿಂದ ಬಣ್ಣದ ಲೋಕದ ಪಯಣ ಪ್ರಾರಂಭಿಸಿರುವ ಪೃಥ್ವಿ ಸದ್ಯ ಸ್ಯಾಂಡಲ್ ವುಡ್ ನಲ್ಲಿಯೂ ಸಕ್ರೀಯರಾಗಿದ್ದಾರೆ. ಸಿನಿಮಾದ ಜೊತೆಗೆ ಧಾರಾವಾಹಿಯಲ್ಲಿಯೂ ಅಭಿನಯಿಸುತ್ತಿದ್ದಾರೆ. ತುಳು ಸಿನಿಮಾರಂಗಕ್ಕೆ
ಯಾವಾಗಲು ಋಣಿಯಾಗಿರುತ್ತೇನೆ ಎನ್ನುವ ಪೃಥ್ವಿ, ಕನ್ನಡದಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡುವ ಆಸೆಯನ್ನು ಇಟ್ಟಿಕೊಂಡಿದ್ದಾರೆ. ಹೆಚ್ಚು ಫರ್ಫಾಮೆನ್ಸ್ ಓರಿಯೆಂಟೆಡ್ ಸಿನಿಮಾಗಳನ್ನು ಮಾಡಬೇಕು ಎನ್ನುವುದು ಪೃಥ್ವಿಯ ಕನಸಂತೆ.


Click it and Unblock the Notifications











