ಪತ್ನಿ ಆಸ್ತಿ, ಸ್ವಂತ ಮನೆ ಅಡ ಇಟ್ಟು 'ಮಹಾವತಾರ್ ನರಸಿಂಹ' ನಿರ್ಮಾಣ; ಈಗ ಎಷ್ಟು ಕೋಟಿ ಲಾಭ?
ಆನಿಮೇಷನ್ ಸಿನಿಮಾ 'ಮಹಾವತಾರ್ ನರಸಿಂಹ' ಎಲ್ಲರ ನಿರೀಕ್ಷೆ ಮೀರಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈ ಚಿತ್ರತಂಡದ ಬೆನ್ನಿಗೆ ನಿಂತಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಸದ್ದು ಮಾಡ್ತಿದೆ. ತಮ್ಮ ಆಸ್ತಿ ಎಲ್ಲಾ ಅಡ ಇಟ್ಟು ಸಿನಿಮಾ ಮಾಡಿದ್ದಾಗಿ ನಿರ್ದೇಶಕ ಅಶ್ವಿನ್ ಕುಮಾರ್ ಹೇಳಿದ್ದಾರೆ.
ಹಿರಣ್ಯ ಕಶಪುನನ್ನು ನರಸಿಂಹ ಸ್ವಾಮಿ ಸಂಹಾರ ಮಾಡಿದ ಕತೆಯನ್ನು ಆನಿಮೇಷನ್ನಲ್ಲಿ ಕಟ್ಟಿಕೊಡಲಾಗಿದೆ. ಆನಿಮೇಷನ್ ಅಂದರೆ ಕಾರ್ಟೂನ್ ಸಿನಿಮಾ ಎಂದು ಬಹುತೇಕರು ಭಾವಿಸುತ್ತಾರೆ. ಅದನ್ನೆಲ್ಲಾ ಮೀರಿ ಒಂದು ಅದ್ಭುತ ದೃಶ್ಯಕಾವ್ಯ ಕಟ್ಟಿಕೊಡಲು ಅಶ್ವಿನ್ ಕುಮಾರ್ ಅಂಡ್ ಟೀಂ ತನು ಮನ ಧನ ಅರ್ಪಿಸಿದ್ದರು. ಬರೋಬ್ಬರಿ 5 ವರ್ಷಗಳ ಕಾಲ ಚಿತ್ರಕ್ಕಾಗಿ ಶ್ರಮಪಟ್ಟಿದ್ದರು. ಅವರ ಶ್ರಮಕ್ಕೆ ಈಗ ಪ್ರತಿಫಲ ಸಿಕ್ಕಿದೆ. ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ. 100 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ.

ಸಿನಿಮಾ ಬಿಡುಗಡೆ ಆಗಿ ಎರಡು ವಾರ ಕಳೆಯುತ್ತಾ ಬಂದರೂ ಬಹುತೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. 5 ಭಾಷೆಗಳಲ್ಲಿ ಟುಡಿ ಹಾಗೂ ತ್ರಿಡಿ ಫಾರ್ಮೆಟ್ಗಳಲ್ಲಿ ಸಿನಿಮಾ ಸದ್ದು ಮಾಡ್ತಿದೆ. ತೆಲುಗು ಫಿಲ್ಮ್ ನಗರ್ ಯೂಟ್ಯೂಬ್ ಸಂದರ್ಶನದಲ್ಲಿ ಚಿತ್ರಕ್ಕಾಗಿ ತಾವು ಪಟ್ಟ ಕಷ್ಟದ ಬಗ್ಗೆ ನಿರ್ದೇಶಕ, ನಿರ್ಮಾಪಕ ಅಶ್ವಿನ್ ಕುಮಾರ್ ಮಾತನಾಡಿದ್ದಾರೆ. ತಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ದೇವರು ನಮ್ಮ ಕೈಬಿಡಲಿಲ್ಲ, ನಮ್ಮ ನಂಬಿಕೆ ಸುಳ್ಳಾಗಲಿಲ್ಲ ಎಂದು ಹೇಳಿದ್ದಾರೆ.
"ನನ್ನ ಜೀವನದಲ್ಲಿ ಸಂಪಾದಿಸಿದ್ದನ್ನೆಲ್ಲಾ ಈ ಚಿತ್ರಕ್ಕಾಗಿ ಖರ್ಚು ಮಾಡಿದ್ದೆ. ನಮ್ಮ ಪೋಷಕರು ಹಾಗೂ ತಮ್ಮ ಪತ್ನಿ ಪೋಷಕರ ಆಸ್ತಿಯನ್ನು ಕೂಡ ಅಡ ಇಟ್ಟು, ಲೀಸ್ಗೆ ಹಾಕಿ ಹಣ ಹೊಂದಿಸಿದ್ದೆ. ಕೊನೆಗೆ ನನ್ನ ಸ್ವಂತ ಮನೆಯನ್ನು ಕೂಡ ಅಡ ಇಟ್ಟು ಸಿನಿಮಾ ಮಾಡುವಂತಾಯಿತು. ಕೋವಿಡ್ ಸಮಯದಲ್ಲಿ ಬಹಳ ಕಷ್ಟಪಡುವಂತಾಯಿತು. 5 ವರ್ಷದ ಜರ್ನಿಗೆ ಹೆಚ್ಚು ಹಣ ಬೇಕಾಯಿತು. ಕೆಲವರು ದೇವರ ಆನಿಮೇಷನ್ ಸಿನಿಮಾ ಮಾಡ್ತಿದ್ದೀಯಾ ಎನ್ನುತ್ತಿದ್ದರು, ಯಾರು ಬಂದು ದೇವರ ಸಿನಿಮಾ ಚಿತ್ರಮಂದಿರದಲ್ಲಿ ನೋಡ್ತಾರೆ ಎನ್ನುತ್ತಿದ್ದರು. ಅದನ್ನೆಲ್ಲಾ ಮೀರಿ ಹಣ ಹೊಂದಿಸುವುದು ಕಷ್ಟವಾಯಿತು" ಎಂದು ಅಶ್ವಿನ್ ಹೇಳಿದ್ದಾರೆ.

ದೇವರೇ ನಮ್ಮ ಬೆಂಬಲಕ್ಕೆ ನಿಂತಿದ್ರು ಅನ್ನಿಸುತ್ತದೆ. ನಮ್ಮ ನಂಬಿಕೆ ಸುಳ್ಳಾಗಲಿಲ್ಲ. ಸಿನಿಮಾ ಮೇಲೆ ನಂಬಿಕೆ ಇಲ್ಲದೇ ನಮ್ಮ ತಂಡದ ಕೆಲವರು ನಡುವೆ ಕೆಲಸ ಬಿಟ್ಟು ಹೋದರು. ಕೆಲವರು ಹೊಸದಾಗಿ ಬಂದು ಸೇರಿದ್ರು, ನಂಬಿ ನನ್ನ ಜೊತೆ ನಿಂತ್ರು. ಕೆಲವರು ಈ ಕ್ಷಣಕ್ಕೂ ಕೆಲಸ ಮಾಡ್ತಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಕ್ಲೀಮ್ ಪ್ರೊಡಕ್ಷನ್ಸ್ ಸಂಸ್ಥೆ 'ಮಹಾವೀರ್ ನರಸಿಂಹ' ಚಿತ್ರಕ್ಕಾಗಿ ಕೆಲಸ ಮಾಡಿದೆ. ಸ್ಯಾಮ್ ಸಿಎಸ್ ಸಂಗೀತ ಚಿತ್ರದ ಹೈಲೆಟ್. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ಅರ್ಪಿಸಿ ವಿತರಣೆ ಮಾಡಿದೆ. ಕೊನೆಯ 20 ನಿಮಿಯ ತೆರೆಮೇಲೆ ಅ್ಭುತ ನೋಡಿ ಪ್ರೇಕ್ಷಕರು ಮಂತ್ರಮುಗ್ಧರಾಗಿದ್ದಾರೆ. ಒಂದೇ ವಾರದಲ್ಲಿ ಸಿನಿಮಾ 105 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಹೊಂಬಾಳೆ ಸಂಸ್ಥೆಯೇ ಘೋಷಣೆ ಮಾಡಿದೆ. ಎಲ್ಲಾ ಕಳೆದು ಈಗಾಗಲೇ 50 ಕೋಟಿ ರೂ.ವರೆಗೂ ನಿರ್ಮಾಪಕರಿಗೆ ಶೇರ್ ಸಿಕ್ಕಿದೆ.
ಇದೇ ತಂಡ ಈಗಾಗಲೇ 8 ಆನಿಮೇಷನ್ ಸಿನಿಮಾಗಳನ್ನು ಘೋಷಣೆ ಮಾಡಿದೆ. ಹೊಂಬಾಳೆ ಸಂಸ್ಥೆ ಬೆನ್ನಿಗೆ ನಿಂತಿದೆ. ದಶಾವತಾರದ ಕಥೆಗಳನ್ನು ಮುಂದಿನ ದಿನಗಳಲ್ಲಿ ಒಂದೊಂದಾಗಿ ತೆರೆಗೆ ತರುವ ಪ್ರಯತ್ನ ಮಾಡಲಾಗ್ತಿದೆ. ಭಾರತೀಯ ಚಿತ್ರರಂಗದಲ್ಲಿ ಆನಿಮೇಷನ್ ಸಿನಿಮಾ ವಿಭಾಗದಲ್ಲಿ 'ಮಹಾವತಾರ್ ನರಸಿಂಹ' ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.


Click it and Unblock the Notifications











