''ನಿಮಗೆ ಹಾಗೇ ಏನಾದರೂ ಅನಿಸಿದರೆ ನನ್ನನ್ನು ಮುಂದೆ ಪ್ರೋತ್ಸಾಹಿಸಬೇಡಿ'' - ಧ್ರುವ ಸರ್ಜಾ..!
ಧ್ರುವಾ ಸರ್ಜಾ ಎರಡು ಮೂರು ವರ್ಷಕ್ಕೊಂದು ಚಿತ್ರ ಮಾಡುತ್ತಾರೆ ಎನ್ನುವ ಪ್ರೀತಿ ತುಂಬಿದ ತಕರಾರು ಅವರ ಅಭಿಮಾನಿಗಳಲ್ಲಿದೆ. ಈ ಹಿನ್ನೆಲೆ ವರ್ಷಕ್ಕೊಂದು ಚಿತ್ರ ಮಾಡುವ ಭರವಸೆಯನ್ನು ಧ್ರುವ ತಮ್ಮ ಅಭಿಮಾನಿಗಳಿಗೆ ನೀಡುತ್ತಾನೇ ಬಂದಿದ್ದಾರೆ. ಆದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಹೀಗಿರುವಾಗ ಈಗ ಧ್ರುವಾ ಸರ್ಜಾ ಕಳೆದ ಮೂರು ವರ್ಷದಿಂದ ಮಾಡಿರುವ ಮಹಾ ತಪಸ್ಸು ಮಾರ್ಟಿನ್ ನ ಫಲಾಫಲ ಹೇಗಿದೆ ಎನ್ನುವುದಕ್ಕೆ ಉತ್ತರ ಈ ಅಕ್ಟೋಬರ್ ಹನ್ನೊಂದರಂದು ತಿಳಿಯಲಿದೆ. ಬೆಳ್ಳಿ ಪರದೆಯ ಮೇಲೆ ಮಾರ್ಟಿನ್ ಅನಾವರಣವಾಗಲಿದೆ.
ಇನ್ನೂ ಮಾರ್ಟಿನ್ ಕೇವಲ ಕನ್ನಡ ಚಿತ್ರ ಮಾತ್ರ ಅಲ್ಲ. ಪ್ಯಾನ್ ಇಂಡಿಯಾ ಸಿನಿಮಾ ಮಾತ್ರ ಅಲ್ಲ. ಬದಲಿಗೆ ಪ್ಯಾನ್ ವರ್ಲ್ಡ್ ಸಿನಿಮಾ. ಕನ್ನಡದ ಜೊತೆ ಜೊತೆಯಲ್ಲಿ ಹಿಂದಿ, ತೆಲುಗು, ತಮಿಳಿನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ವಿದೇಶಿ ಭಾಷೆಯಲ್ಲಿ ಕೂಡ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಈ ಹಿನ್ನೆಲೆ ಚಿತ್ರದ ಅಂತಿಮ ಹಂತದ ಪ್ರಚಾರದಲ್ಲಿ ತಲ್ಲೀನರಾಗಿರುವ ಧ್ರುವ ಸರ್ಜಾ ಸದ್ಯ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಬೇರೆ ಬೇರೆ ರಾಜ್ಯದಲ್ಲಿ ತಮ್ಮ ಚಿತ್ರದ ಪ್ರಚಾರವನ್ನು ಮಾಡುತ್ತಿದ್ದಾರೆ. ಆ ಪೈಕಿ ಆಂಧ್ರದಲ್ಲಿ ನನ್ನಲ್ಲಿ ಕಲೆ ಇಲ್ಲ ಎಂಬ ಭಾವನೆ ನಿಮಗೇನಾದರೂ ಬಂದರೆ ನನ್ನ ಮುಂದಿನ ಚಿತ್ರಗಳಿಗೆ ನಿಮ್ಮ ಪ್ರೋತ್ಸಾಹವನ್ನು ನೀಡಬೇಡಿಯೆಂದು ಖಂಡತುಂಡವಾಗಿ ಹೇಳಿದ್ದಾರೆ.

ಹೌದು, ತೆಲುಗು ನಾಡಿನಲ್ಲಿ ತಮ್ಮ ಚಿತ್ರದ ಕುರಿತು ಮಾತನಾಡಿರುವ ಧ್ರುವಾ ಚಿತ್ರಕ್ಕೆ ಪಟ್ಟಿರುವ ಕಷ್ಟವನ್ನು ಹೇಳಿದ್ದಾರೆ. ಚಿತ್ರದ ಕುರಿತು ಹಲವಾರು ವಿಚಾರಗಳನ್ನು ಕೂಡ ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ಚಿತ್ರಕ್ಕೆ ಕಥೆಯನ್ನು ಬರೆದ ತಮ್ಮ ಮಾವ ಅರ್ಜುನ್ ಸರ್ಜಾ ಅವರ ಪಕ್ಕ ನಿಂತು, ತೆಲುಗು ಮಾಧ್ಯಮದ ಮೂಲಕ ತೆಲುಗು ಚಿತ್ರಪ್ರೇಮಿಗಳಲ್ಲಿ ಅವತ್ತು ಬಿಡುಗಡೆಯಾಗುತ್ತಿರುವ ಎಲ್ಲ ಚಿತ್ರಗಳನ್ನು ನೋಡಿ, ಆದರೆ ದಯಮಾಡಿ ಸಮಯ ಸಿಕ್ಕರೆ ಬಿಡುವು ಮಾಡಿಕೊಂಡು ನನ್ನ ಚಿತ್ರವನ್ನು ಕೂಡ ನೋಡಿ ಹರಸಿ ಹಾರೈಸಿಯೆಂದು ಮನವಿಯನ್ನೂ ಮಾಡಿದ್ದಾರೆ.
ಮುಂದುವರೆದು ನನ್ನಲ್ಲಿ ಚೂರೇ ಚೂರು ಟ್ಯಾಲೆಂಟ್ ಇಲ್ಲ ಎಂದು ನಿಮಗೇನಾದರೂ ಅನಸಿದರೆ ನನ್ನ ಮುಂಬರುವ ಯಾವ ಚಿತ್ರಕ್ಕೂ ನೀವು ಪ್ರೋತ್ಸಾಹವನ್ನು ನೀಡಬೇಡಿ ಎಂದು ಹೇಳಿರುವ ಧ್ರುವ ಸರ್ಜಾ, ನಿಮಗೆ ನನ್ನಲ್ಲಿ ಟ್ಯಾಲೆಂಟ್ ಇದೆ ಈ ಚಿತ್ರ ಮತ್ತು ಪಾತ್ರಕ್ಕೆ ನಾನು ನ್ಯಾಯ ಸಲ್ಲಿಸಿದ್ದೇನೆ ಎಂದು ಅನಸಿದರೆ ನಿಮ್ಮ ಸ್ನೇಹಿತರನ್ನೆಲ್ಲ ಚಿತ್ರಮಂದಿರಕ್ಕೆ ಕರೆದೊಯ್ಯುವ ಮೂಲಕ ನನಗೆ ಬೆಂಬಲ ನೀಡಿ ಪ್ರೋತ್ಸಾಹಿಸಿ ಎಂದು ಹೇಳಿದ್ದಾರೆ. ಈ ಚಿತ್ರಕ್ಕೆ ತನು-ಮನ ಅರ್ಪಿಸಿ ಎರಡೂವರೆ ವರ್ಷ ಕೆಲಸ ಮಾಡಿರುವುದಾಗಿ ಧ್ರುವ ಸರ್ಜಾ ಹೇಳಿದ್ದಾರೆ.
ಅಂದ್ಹಾಗೇ ಮೈತ್ರಿ ಮೂವಿ ವಿತರಣಾ ಸಂಸ್ಥೆ ಮಾರ್ಟಿನ್ ಚಿತ್ರವನ್ನು ನಿಜಾಮ್ ಪ್ರದೇಶದಲ್ಲಿ ಬಿಡುಗಡೆ ಮಾಡಲಿದೆ. ಇನ್ನೂ ಎಂ.ಎಸ್.ಫಿಲ್ಮ್ಸ್ ಚಿತ್ರವನ್ನು ಆಂಧ್ರದೆಲ್ಲೆಡೆ ಬಿಡುಗಡೆ ಮಾಡುವ ಜವಾಬ್ಧಾರಿಯನ್ನು ವಹಿಸಿಕೊಂಡಿದೆ. ಉಳಿದಂತೆ ಮಾರ್ಟಿನ್ ಚಿತ್ರದ ಪ್ರಚಾರ ಕೆಲಸಗಳಿಂದ ಚಿತ್ರದ ನಿರ್ದೇಶಕ ಎ.ಪಿ.ಅರ್ಜುನ್ ಅವರನ್ನು ದೂರ ಇಟ್ಟಿರುವ ಧ್ರುವ ಸರ್ಜಾ ಮತ್ತು ಉದಯ್ ಮೆಹ್ತಾ ಇಂದು ಹುಬ್ಬಳ್ಳಿಯತ್ತ ಹೊರಟಿದ್ದಾರೆ. ಅಲ್ಲಿನ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ.
ಇನ್ನು, ನಾಳೆ [ಅಕ್ಟೋಬರ್ 6] ಧ್ರುವ ಸರ್ಜಾ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಚಿತ್ರದಲ್ಲಿನ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ನಾಳೆ ಫ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಣಿ ಶರ್ಮಾ ಚಿತ್ರದ ಹಾಡುಗಳಿಗೆ ರಾಗ ಸಂಯೋಜಿಸಿದ್ದರೆ ರವಿ ಬಸ್ರೂರ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸತ್ಯ ಹೆಗಡೆ ಚಿತ್ರವನ್ನು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ. ಅನ್ವೇಷಿ ಜೈನ್, ವೈಭವಿ ಶಾಂಡಿಲ್ಯ ಚಿತ್ರದಲ್ಲಿ ನಾಯಕಿಯರ ಪಾತ್ರವನ್ನು ನಿರ್ವಹಿಸಿದ್ದಾರೆ.


Click it and Unblock the Notifications











