ಪೊಲೀಸರ ತನಿಖೆ ಮೇಲೆ ಅಹೋರಾತ್ರ ಅನುಮಾನ: ಸುದೀಪ್ ಬಂಧಿಸಲು ಆಗ್ರಹ
ನಟ ಸುದೀಪ್ ಅಭಿಮಾನಿಗಳು ನಿನ್ನೆ (ಮಾರ್ಚ್ 20) ರಂದು ಲೇಖಕ ಅಹೋರಾತ್ರ ಮನೆಗೆ ನುಗ್ಗಿ ಗಲಾಟೆ ಮಾಡಿದ್ದು ಈ ಬಗ್ಗೆ ಈಗಾಗಲೆ ಚೆನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆದರೆ ಪ್ರಕರಣಕ್ಕೆ ಸಂಭಂಧಿಸಿದಂತೆ ಅಹೋರಾತ್ರ ಅವರು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ಬೆಳಿಗ್ಗೆ ಫೇಸ್ಬುಕ್ ಲೈವ್ ಮಾಡಿರುವ ಅಹೋರಾತ್ರ, ನಿನ್ನೆ ರಾತ್ರಿ ನಡೆದ ಘಟನೆ ಬಗ್ಗೆ ಮಾತನಾಡಿದ್ದು, "ಯಾರು ದೌರ್ಜನ್ಯ ಮಾಡಲು ಬಂದಿದ್ದರೊ, ಯಾರು ನನ್ನನ್ನು ಕೊಲ್ಲಲು ಬಂದಿದ್ದರೋ ಅವರ ಧ್ವನಿಯೇ ಗಟ್ಟಿಯಾಗುತ್ತಿರುವಂತಿದೆ' ಎಂದು ಪರೋಕ್ಷವಾಗಿ ಪೊಲೀಸರು ಪಕ್ಷಪಾತಿಗಳಂತೆ ವರ್ತಿಸಿದ್ದಾರೆ ಎಂದು ಹೇಳಿದ್ದಾರೆ.
"ಘಟನೆ ನಂತರ ನನ್ನ ಮಗಳ ಅತ್ತೆ ಶೋಭಾ ಮುಕುಂದ್ ಮತ್ತಿಬ್ಬರು ಸಾಕ್ಷಿಗಳನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು, ಅಲ್ಲಿ ದೂರು ದಾರರನ್ನು ಸಾಕ್ಷಿಗಳಿಂದ ಪೊಲೀಸರು ಬೇರೆ ಮಾಡಿದರು. ನಂತರ ಆ ಇಬ್ಬರು ಹುಡುಗರೊಂದಿಗೆ ಸಹ ಪೊಲೀಸರು ಗೌರವದಿಂದ ವರ್ತಿಸಲಿಲ್ಲ. ಅಷ್ಟೇ ಅಲ್ಲದೆ ಹೀಗೆಯೇ ದೂರು ನೀಡುವಂತೆ ಪೊಲೀಸರೇ ನಮ್ಮ ದೂರು ದಾರರಿಗೆ ತಾಕೀತು ಮಾಡಿದರು' ಎಂದಿದ್ದಾರೆ ಅಹೋರಾತ್ರ.
"ನನಗೆ ಅಭದ್ರತೆ ಕಾಡುತ್ತಿದೆ. ನಿನ್ನೆ ಘಟನೆ ನಡೆಯಬೇಕಾದರೂ ಸಹ ಇಬ್ಬರು ಪೊಲೀಸರು ಇಲ್ಲಿಯೇ ಇದ್ದರು. ಘಟನೆ ನಡೆಯಲು ಹೇಗೆ ಬಿಟ್ಟಿರಿ ಎಂದು ಕೇಳಿದರೆ, ಅವರು ಅಷ್ಟೊಂದು ಜನರಿದ್ದಾರೆ ನಾವಿಬ್ಬರೇ ಏನು ಮಾಡುವುದು ಎಂಬ ಜವಾಬ್ದಾರಿ ಹೀನ ಉತ್ತರ ಬಂದಿತು' ಎಂದಿದ್ದಾರೆ ಅಹೋರಾತ್ರ.

ಬಂಧಿಸಿದ್ದವರನ್ನು ಏಕೆ ಬಿಟ್ಟಿರಿ: ಅಹೋರಾತ್ರ ಪ್ರಶ್ನೆ
ಸುದೀಪ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ನವೀನ್ ಗೌಡ ಹಾಗೂ ಪುಂಡ ಪೋಕರಿಗಳಾದ ಸಂತೋಶ್ ರೆಡ್ಡಿ ಇನ್ನೂ ಕೆಲವರು ಕುಡುಕರನ್ನು ಕರೆದು ಕೊಂಡು ಬಂದು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಯಿತು. ನಿನ್ನೆ ರಾತ್ರಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದರು ಆದರೆ ಅವರನ್ನು ಹಾಗೆಯೇ ಬಿಟ್ಟುಬಿಟ್ಟಿದ್ದಾರೆ. ಏಕೆ ಬಿಟ್ಟಿರೆಂದು ಪ್ರಶ್ನೆ ಮಾಡಿದರೆ, "ಸಂಘದವರು ಠಾಣೆ ಎದುರು ಬಂದು ಪ್ರತಿಭಟನೆ ಮಾಡಿದರೆ ಏನು ಮಾಡುವುದು ಎಂದು ಪೊಲೀಸರು ಉತ್ತರಿಸಿದ್ದಾರೆ' ಎಂದಿದ್ದಾರೆ ಆಹೋರಾತ್ರ.

ಪೊಲೀಸರ ಸಂಪರ್ಕ ಸಂಖ್ಯೆಯನ್ನು ಫೇಸ್ಬುಕ್ನಲ್ಲಿ ನೀಡಿದ ಅಹೋರಾತ್ರ
ಚೆನ್ನಮ್ಮ ಅಚ್ಚುಕಟ್ಟು ಪೊಲೀಸ್ ಠಾಣೆಯ ಲ್ಯಾಂಡ್ ಲೈನ್ ಸಂಖ್ಯೆ ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರುಗಳ ಮೊಬೈಲ್ ಸಂಖ್ಯೆಯನ್ನು ಲೈವ್ನಲ್ಲಿ ನೀಡಿದ ಅಹೋರಾತ್ರ. ರಾಜ್ಯದಾದ್ಯಂತ ಎಲ್ಲರೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರಿಗೆ ಕರೆ ಮಾಡಿ ಅಹೋರಾತ್ರನನ್ನು ಕೊಲ್ಲಲು ಬಂದಿದ್ದರಲ್ಲ ಅವರನ್ನು ಬಂಧಿಸಿದಿರಾ ಎಂದು ಪ್ರಶ್ನೆ ಮಾಡಿ ಎಂದು ಕರೆ ಕೊಟ್ಟಿದ್ದಾರೆ ಅಹೋರಾತ್ರ.

ಸುದೀಪ್ ಬಗ್ಗೆ ಮಾತನಾಡಿದ್ದಕ್ಕೆ ಅಭಿಮಾನಿಗಳ ಆಕ್ರೋಶ
ಸುದೀಪ್ ಅವರು ರಮ್ಮಿ ಆಟದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ಅಹೋರಾತ್ರ ಸಾಮಾಜಿಕ ಜಾಲತಾಣದಲ್ಲಿ ವಿರೋಧಿಸುತ್ತಾ ಬಂದಿದ್ದರು. ಆಗಾಗ್ಗೆ ಸುದೀಪ್ ಬಗ್ಗೆ ವ್ಯಂಗ್ಯದ ಪೋಸ್ಟ್ ಗಳನ್ನು ಮಾಡುತ್ತಿದ್ದರು. ಇತ್ತೀಚೆಗೆ ವಿಡಿಯೋ ಒಂದರಲ್ಲಿ ಸುದೀಪ್ ಬಗ್ಗೆ ಮಾತನಾಡಿದ್ದರು, ಹಾಗಾಗಿ ಸುದೀಪ್ ಅಭಿಮಾನಿಗಳು ಅಹೋರಾತ್ರ ಅವರ ಮನೆಗೆ ನುಗ್ಗಿ ಗಲಾಟೆ ಮಾಡಿದರು.
Recommended Video

ಸುದೀಪ್ ಬಂಧಿಸಬೇಕು; ಅಹೋರಾತ್ರ
ಈ ಪ್ರಕರಣದಲ್ಲಿ ಮೊದಲ ಆರೋಪಿ ಕಿಚ್ಚ ಸುದೀಪ್ ಆಗಬೇಕು, ಏಕೆಂದರೆ ಸುದೀಪ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ನವೀನ್ ಗೌಡ ಸುದೀಪ್ ಅವರ ಆಜ್ಞೆ ಇಲ್ಲದೆ ಯಾವ ಹೆಜ್ಜೆಯನ್ನೂ ಇಡುವುದಿಲ್ಲ. ಹಾಗಾಗಿ ಸುದೀಪ್ ಅನ್ನು ಎ1 ಆರೋಪಿ ಮಾಡಬೇಕು ಎಂದರು ಅಹೊರಾತ್ರ. ಕಿಚ್ಚ ಸುದೀಪ್ ಅನ್ನು ಮೊದಲು ಬಂಧಿಸಬೇಕು ಎಂದರು ಅಹೋರಾತ್ರ.


Click it and Unblock the Notifications











