ಐಂದ್ರಿತಾ ಸಿಡಿಸಿದ ಬಾಂಬ್.! ಜಗ್ಗೇಶ್ ಕಡೆಯಿಂದ ಕಾಮೆಂಟ್.!
ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ನಾಯಕಿಯರಿಗೆ ಸಮನಾದ ಸ್ಥಾನಮಾನ-ಗೌರವ ಸಿಗುತ್ತಿಲ್ಲ. ಹಾಗೂ ಚಿತ್ರರಂಗದಲ್ಲಿ ನಾಯಕಿಯರಿಗೆ ಹೋಲಿಸಿದರೆ ನಾಯಕರಿಗೆ ಹೆಚ್ಚು ಸಂಭಾವನೆ ಕೊಡುತ್ತಾರೆ ಅಂತ 'ಮೆರವಣಿಗೆ' ನಟಿ ಐಂದ್ರಿತಾ ರೇ ಅವರು ಮಾಧ್ಯಮಗಳ ಮುಂದೆ ಅಲವತ್ತುಕೊಂಡಿದ್ದರು.
ಇವರು ಈ ರೀತಿ ಹೇಳಿಕೆ ಕೊಡುತ್ತಿದ್ದಂತೆ ಎಲ್ಲಾ ಕಡೆಯಿಂದ ಸಾಕಷ್ಟು ಪರ-ವಿರೋಧದ ಮಾತುಗಳು ಕೇಳಿಬಂದಿದ್ದು, ಕನ್ನಡ ಚಿತ್ರರಂಗದ ನಿರ್ಮಾಪಕರು-ನಿರ್ದೇಶಕರು ಮತ್ತು ನಾಯಕ ನಟ-ನಟಿಯರು ತಮ್ಮ ಮನದಾಳವನ್ನು ಸಾಮಾಜಿಕ ಜಾತಾಣಗಳಲ್ಲಿ ಹಂಚಿಕೊಂಡಿದ್ದರು.[ಸ್ಯಾಂಡಲ್ ವುಡ್ ಕಹಿಸತ್ಯಗಳನ್ನು ಬಿಚ್ಚಿಟ್ಟ ಐಂದ್ರಿತಾ ರೇ]
ನಿರ್ದೇಶಕಿ ರೂಪಾ ಅಯ್ಯರ್, ನಿರ್ಮಾಪಕ-ನಿರ್ದೇಶಕ ಎಸ್ ನಾರಾಯಣ್, ನಿರ್ದೇಶಕ ಶಶಾಂಕ್ ಸೇರಿದಂತೆ ಹಲವರು ನಟಿ ಐಂದ್ರಿತಾ ಅವರ ಆರೋಪಗಳಿಗೆ ಸರಿಯಾದ ಉತ್ತರ ಕೊಟ್ಟಿದ್ದರು. ಇದೀಗ ಇವರೆಲ್ಲರ ಸಾಲಿಗೆ ಹೊಸ ಸೇರ್ಪಡೆ ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ ಅವರು.[ನಟಿ ಐಂದ್ರಿತಾ ರೇ ಕೊಟ್ಟ ಏಟಿಗೆ ಕನ್ನಡ ಚಿತ್ರರಂಗದವರ ತಿರುಗೇಟು.!]
ಹೌದು ನಟ ಜಗ್ಗೇಶ್ ಅವರು ಐಂದ್ರಿತಾ ಅವರ ಹೇಳಿಕೆ ಬಗ್ಗೆ ತಮ್ಮ ಅಭಿಪ್ರಾಯವನ್ನು ಫೇಸ್ ಬುಕ್ಕಿನಲ್ಲಿ ಉದ್ದವಾದ ಸ್ಟೇಟಸ್ ಹಾಕುವ ಮೂಲಕ ಹಂಚಿಕೊಂಡಿದ್ದಾರೆ ಅದೇನೆಂಬುದನ್ನು ವಿವರವಾಗಿ ನೋಡೋಣ ಕೆಳಗಿನ ಸ್ಲೈಡುಗಳಲ್ಲಿ....

ನಟ ಜಗ್ಗೇಶ್ ಅಭಿಪ್ರಾಯ
"ಇಂದು ಟಿವಿಯಲ್ಲಿ ನಾಯಕಿಯರಿಗೆ, ನಾಯಕರಿಗಿಂತ ಸಂಭಾವನೆ ಕಮ್ಮಿ ಅನ್ನೋ ಕಾರ್ಯಕ್ರಮ ನೋಡಿ 35 ವರ್ಷ ಈ ರಂಗಕಂಡವನಾಗಿ ಏನಾದರೂ ಹೇಳಲೇಬೇಕು ಅನ್ನಿಸಿತು. ಇದು ವೈಯಕ್ತಿಕ ಅಭಿಪ್ರಾಯ, ಎಲ್ಲರಿಗೂ ಮಾತಾಡಲು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ, ಅದು ಮನುಷ್ಯನ ಹಕ್ಕು ಕೂಡ"- ಜಗ್ಗೇಶ್[ಐಂದ್ರಿತಾಗೂ ಮೊದಲೇ ಸ್ಯಾಂಡಲ್ ವುಡ್ ಬಗ್ಗೆ ಉರಿದುಬಿದ್ದಿದ್ದ ರಮ್ಯಾ.!]

ಎಲ್ಲರ ಜೀವನ ಹರಿಯುವ ನೀರಿದ್ದಂತೆ
"ಪ್ರತಿಯೊಬ್ಬರ ಜೀವನ ಹರಿಯುವ ನೀರಿದ್ದಂತೆ, ಆರಂಭದಂತೆ ಅಂತ್ಯ ಇರಲ್ಲ, ಆದರೆ ಆರಂಭ ಅಂತ್ಯದ ನಡುವೆ ಸ್ವಲ್ಪ ಜಾಣ್ಮೆ ಇದ್ದರೆ, ನಡೆಯುವಾಗ ಕೂಡಿಟ್ಟು, ನಡೆಯದಿದ್ದಾಗ ಬಳಸುವುದು ಜಾಣ್ಮೆ. ಅದು ಬಿಟ್ಟು, ಬಂದಾಗ ಕೂಡಿಡದೆ ನಂತರ ಪರಿತಪಿಸಿದರೆ ಯಾರು ಸಹಾಯ ಮಾಡಲ್ಲ. ಬದಲಾಗಿ ಬರೀ ಒಂದು ದಿನದ ಪ್ರಚಾರ ವಸ್ತುವಾಗಿ ಬಿಡುತ್ತೇವೆ ಅಷ್ಟೆ".- ಜಗ್ಗೇಶ್

ದೊಡ್ಡ ದೊಡ್ಡ ಕಲಾವಿದರ ಸಹಾಯ
"ಅಂದು ಸಿನಿಮಾದ ಬಗ್ಗೆ ಅಧ್ಯಯನ ಮಾಡಿ ಅದರ ಒಳನೋಟ ಸಂಪೂರ್ಣ ಅರ್ಥಮಾಡಿಕೊಂಡ ಮಂದಿ ನಿರ್ಮಾಪಕರಾಗಿ ಸೂಕ್ತಕಥೆ, ತಾಂತ್ರಿಕವರ್ಗ, ಕಲಾವಿದರ ಬಳಗ ಬಳಸಿ ಬಿಡುಗಡೆ ಆದಮೇಲೆ ಇಷ್ಟೇ ವ್ಯಾಪಾರ ಆಗುತ್ತೆ ಆಗುತ್ತೆ ಅನ್ನೋ ಒಂದು ತಂಡ ಇತ್ತು. ಅವರಲ್ಲಿ ಡಾ.ರಾಜ್ ಸಂಸ್ಥೆ, ಈಶ್ವರಿ, ಭಾವಾಮೂವೀಸ್, ವಿಜಯಫಿಲಂಸ್, ತನುಚಿತ್ರ, ಸುಷ್ಮಾ ಫಿಲಂಸ್, ದ್ವಾರಕೀಶ್ ಚಿತ್ರ, ಮಾಣಿಕ್ ಚಂದ್, ಚಂದುಲಾಲ್ ಈ ಎಲ್ಲಾ ಮಹನೀಯ ಸಂಸ್ಥೆ ನಮಗೆಲ್ಲಾ ಇಷ್ಟು ದೊಡ್ಡದಾಗಿ ಬೆಳೆದು ನಿಲ್ಲಲು ಸಹಾಯ ಮಾಡಿದ್ದಾರೆ".-ಜಗ್ಗೇಶ್.

ಬರೀ ಕಮಿಷನ್ ಕಡೆ ಒಲವು
"ಇಂದಿಗೂ ನಾವು ಊಟ ಮಾಡುವಾಗ ನಾವು ಬೆಳೆಯಲು ಸಹಾಯ ಮಾಡಿದ ಹಾಗೂ ಅನ್ನಕೊಟ್ಟ ಮಹನೀಯರನ್ನು ನೆನೆಯುತ್ತೇವೆ. ಆದರೆ ಈಗ ಕಾಲ ಬದಲಾಗಿದೆ ಮೇಲಿನ ಎಲ್ಲಾ ಸಂಸ್ಥೆಗಳು ಕಾರ್ಯನಿಲ್ಲಿಸಿವೆ. ಇದೀಗ 5 ವರ್ಷದಿಂದ ಕ್ಯಾಚ್ ಹಾಕಿ ಕರೆತಂದ ನಿರ್ಮಾಪಕರ ಸಂಖ್ಯೆ ಜಾಸ್ತಿ ಆಗಿದೆ. ಯಾರಿಗೂ ಉತ್ತಮ ಕಥೆ ಮಾಡಿ ನೆನಪಲ್ಲಿ ಉಳಿಯುವ ಸಿನಿಮಾ ಮಾಡುವುದಕ್ಕಿಂತ ಒಂದು ಸಿನಿಮಾದಲ್ಲಿ ಎಷ್ಟು ಕಮಿಷನ್ ಮಾಡಬಹುದು ಅಂತ ಚಿಂತಿಸೋ ಬಳಗವೆ ಜಾಸ್ತಿ"-ಜಗ್ಗೇಶ್.

ಬೈಸಿಕೊಂಡವರು ಇದ್ದಾರೆ
"ಅಣ್ಣಾ ಒಳ್ಳೆ ಪಾರ್ಟಿ ಕರೆ ತರುವೆ ದಯಮಾಡಿ ನಮಗೆ ಇಷ್ಟು ಕೊಡಿ ಅಂತ ಕೇಳಿದ ಅನೇಕ ಮಹನೀಯರು ನನ್ನ ಬಳಿ ಬೈಸಿಕೊಂಡು ಹೋದ ಉದಾಹರಣೆ ಡಜನ್ ಗಟ್ಟಲೇ ಇದೆ. ಇಂದಿನ ಕಾಲದ ನಿರ್ಮಾಪಕ ಸಿನಿಮಾ ನಿರ್ಮಾಣ ಮಾಡಿ ಆರಂಭದಿಂದ ಬಿಡುಗಡೆವರೆಗೂ ಶೋಷಣೆಗೆ ಒಳಗಾಗಿ, ಸಿಕ್ಕಿಹಾಕಿಕೊಂಡು ತಪ್ಪುಮಾಡಿದೆ ಅಂತ ಒದ್ದಾಡಿ, ತಿದ್ದಿಕೊಳ್ಳುವುದರೊಳಗೆ ಅಮಾಯಕನಾಗಿ ಬೀದಿಗೆ ಬರುತ್ತಾನೆ"-ಜಗ್ಗೇಶ್.

ಕನ್ನಡ ಚಿತ್ರಕ್ಕೆ ಕನ್ನಡ ಚಿತ್ರಮಂದಿರವೇ ಶತ್ರು
"ಇಷ್ಟೆಲ್ಲಾ ಆದ ಮೇಲೆ ಚಿತ್ರ ರಿಲೀಸ್ ಆಗಿ 'ಥಿಯೇಟರ್ ಫುಲ್..ಒಳಗೆ ಲೆಕ್ಕ ಹಾಕಿದ್ರೆ ಗಲ್ಲಾನಿಲ್' ಕನ್ನಡ ಚಿತ್ರಗಳಿಗೆ ಕನ್ನಡ ಚಿತ್ರಮಂದಿರಗಳೇ ಶತ್ರು. ಕನ್ನಡ ಚಿತ್ರಮಂದಿರಗಳಲ್ಲಿ ಹಿಂದಿ, ತಮಿಳು, ಮಲಯಾಳಂ ಸಿನಿಮಾ ಬಿಡುಗಡೆ ಆದಾಗ ಕನ್ನಡ ಚಿತ್ರಗಳು ಹೇಳಹೆಸರಿಲ್ಲದಂತೆ ಚಿತ್ರಮಂದಿರದಿಂದ ನಿರ್ಗಮನವಾಗುತ್ತದೆ. ಆಗ ಮಾಧ್ಯಮದವರು ಆ ಚಿತ್ರ ಫ್ಲಾಪ್ ಅಂತ ಸಂಜೆಗೆ ಹೇಳಿಬಿಡುತ್ತಾರೆ. ಅಲ್ಲಿಗೆ ಆ ಚಿತ್ರ ಸಮಾಧಿಯಾಗುತ್ತದೆ".-ಜಗ್ಗೇಶ್.

ದುರಂತ ನಾಯಕ 'ನಿರ್ಮಾಪಕ'
"ಸಿನಿಮಾ ಸೋತಾಗ ಒಳ್ಳೆ ಸಿನಿಮಾ ಮಾಡ್ಲಿಲ್ಲ, ರಿಲೀಸ್ ಗೆ ಸಮಯ ಸರಿ ಇರಲಿಲ್ಲ, ಹಿಂದಿ-ತಮಿಳು ಮುಂದೆ ಬರಬಾರದಿತ್ತು, ಅನ್ನೋ ಬಿಟ್ಟಿ ಸಲಹೆಗೆ ಒಂದು ಹೋಟೆಲ್, ಅಲ್ಲಿ ಕುಡಿದು ವ್ಯರ್ಥ ಚರ್ಚೆ ಮಾತ್ರ. ಒಟ್ಟಿನಲ್ಲಿ ಈ ಚಿತ್ರರಂಗದ ದುರಂತ ನಾಯಕ ಅಂದರೆ ಅದು 'ನಿರ್ಮಾಪಕ' ಬಸವಳಿದು ಬೆಂಡಾದವ. ತನ್ನ ದುಡ್ಡು ಮರಳಿ ಪಡೆಯಲು ಒದ್ದಾಡುತ್ತಿರಬೇಕಾದರೆ, ಅವನು ಪೋಷಕ, ನಾಯಕ-ನಾಯಕಿ ಅಂತ ಎಲ್ಲಿ ಆಲೋಚನೆ ಮಾಡುತ್ತಾನೆ".-ಜಗ್ಗೇಶ್

ಯಾಮಾರಿದರೆ ಕಥೆ ಖತಂ
"ಹಿಂದಿನ ಕಾಲದಲ್ಲಿ ಲಕ್ಷ ರೂಪಾಯಿಗೆ ದೊಡ್ಡವರ ಚಿತ್ರ ಒಂದು ದಿನಕ್ಕೆ ಖರ್ಚಾಗುತ್ತಿತ್ತು. ಇಂದು 5 ರಿಂದ 6 ಲಕ್ಷ, 125 ದಿನ. ಸ್ವಲ್ಪ ಯಾಮಾರಿದರೂ ಜೀವನವೇ ಅಂತ್ಯ. ಅಷ್ಟು ರಿಸ್ಕ್ ಇದೆ. ಕೆಲವು ನಟ-ನಟಿಯರನ್ನು ಬಿಟ್ಟರೆ ಬಹುತೇಕರ ಬದುಕು ಸೂರ್ಯಾಸ್ತಮ ಕಾಲಕ್ಕೆ ಜಾರಿದೆ. ಪಾಪ ಅಪಾದನೆ ಸರಳ, ಅನುಭವಿಸುವಾಗ ಮಾತ್ರ ಘೋರ".-ಜಗ್ಗೇಶ್

ಪುಕ್ಕಟೆ ಸಲಹೆ
"ಪ್ರತಿಯೊಬ್ಬ ಕಲಾವಿದರು ನಟನೆಯ ಜೊತೆ-ಜೊತೆಗೆ ಒಂದಾದರೂ ಸಿನಿಮಾ ನಿರ್ಮಾಣ ಮಾಡಿ ಅನುಭವ ಪಡೆಯಬೇಕು. ಆ ಕೆಲಸವನ್ನು ನಾನು ಮಾಡಿದ್ದೇನೆ. 29 ನಿರ್ಮಾಣ, 140 ಸಿನಿಮಾದಲ್ಲಿ ನಟನೆ, 36 ಚಿತ್ರ ವಿತರಣೆ ಮತ್ತು 11 ಚಿತ್ರಮಂದಿರ ನಡೆಸಿದ ಅನುಭವ ಇದೆ. ನೀವು ಮಾಡಿ ಇದು ನನ್ನ ಸಲಹೆ".-ಜಗ್ಗೇಶ್

ಚಿತ್ರರಂಗ ನಡೆದದ್ದೇ ನಾಯಕರಿಂದ
"ಕಲಾ ಮಾತೆ ತಾಯಿ ಶಾರದೆ ಯಾರ ಸೊತ್ತಲ್ಲ, ಯಾರಿಗೆ ಪ್ರತಿಭೆ ಇದೆ ಅವರು ಉಳಿಯುತ್ತಾರೆ ಮತ್ತು ಹೆಚ್ಚು ಸಂಪಾದನೆ ಮಾಡುತ್ತಾರೆ. ಅಲ್ಲೊಂದು ಇಲ್ಲೊಂದು ನಾಯಕಿ ಗೆದ್ದಿದ್ದು ಬಿಟ್ಟರೆ 80 ವರ್ಷ ಸಿನಿಮಾ ನಡೆದಿದ್ದೇ ನಾಯಕರಿಂದ. ಅದು ಸಿನಿಮಾದ ಮೂಲಮಂತ್ರ, ಇಲ್ಲಿ ಯಾರನ್ನೂ ಯಾರೂ ಬೆಳೆಸೊಲ್ಲ, ನಾವು ನಾವಾಗೇ ಬೆಳೆಯಬೇಕು. ಇದಕ್ಕೆಲ್ಲಾ ಉತ್ತಮ ಉದಾಹರಣೆ ಇಳಿ ವಯಸ್ಸಿನ ನಟರಾದ ಅಮಿತಾಭ್ ಬಚ್ಚನ್ ಮತ್ತು ರಜನಿಕಾಂತ್".-ಜಗ್ಗೇಶ್

ಪಾಲಿಗೆ ಬಂದದ್ದೇ ಪಂಚಾಮೃತ
"ನಾವು ಕಲಾವಿದರು, ಯಾರಲ್ಲೂ ಒಗ್ಗಟ್ಟಿಲ್ಲ, ಕನ್ನಡ ಕಲಾವಿದರ ಬದುಕೇ ದೌರ್ಭಾಗ್ಯ, ಭಾವನಾತ್ಮಕ ಸಂಬಂಧವಿಲ್ಲ, ಯಾರಿಗೂ ಯಾರ ಬಗ್ಗೆಯೂ ಮಾಹಿತಿ ಇಲ್ಲ. ಹಾಗಾಗಿ ನಾನು ನೋಡಿದರೂ ನೋಡದೆ, ಕೂಗಿದರು ಕೇಳದಂತೆ ನಟಿಸಿ, ಒಗ್ಗಟ್ಟಿಲ್ಲದ ಜಾಗ ಬಿಟ್ಟು, ನಾನು ಕೂಡಿಟ್ಟು, ಕಟ್ಟಿದ ಮನೆಯಲ್ಲಿ ಏಕಾಂಗಿಯಾಗಿ ಕೂತುಬಿಡುತ್ತೇನೆ. ಈ ಪಾತ್ರ ಅಧ್ಯಾತ್ಮ ಜೀವನಕ್ಕೆ ಸಹಕಾರಿಯಾಗಿದೆ. ನಾನು ಯಾರನ್ನೂ ಜರಿಯದೆ ಪಾಲಿಗೆ ಬಂದದ್ದರಲ್ಲೇ 'ಸರ್ವೆಜನಃಸುಖಿನೋಭವಂತು' ಅಂತ ಬಾಳುತ್ತಿದ್ದೇನೆ".-ಜಗ್ಗೇಶ್.

ಸ್ಟೇಟಸ್ ಇಲ್ಲಿದೆ ನೋಡಿ...ಪೂರ್ತಿ ಸ್ಟೇಟಸ್ ನೋಡಿ..
'ಮತ್ತೊಬ್ಬರ ಕಡೆ ಬೊಟ್ಟು ಮಾಡಿ ತೋರಿಸುವ ಮುನ್ನ ನಾವೆಷ್ಟು ಮಾಡಿದ್ದೇವೆ ಅನ್ನೋದನ್ನ ಮೊದಲು ಅರಿತುಕೊಳ್ಳಿ' ಎಂದಿರುವ ನವರಸ ನಾಯಕ ಜಗ್ಗೇಶ್ ಅವರು ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿರುವ ಕಂಪ್ಲೀಟ್ ಸ್ಟೇಟಸ್ ಇಲ್ಲಿದೆ ನೋಡಿ...


Click it and Unblock the Notifications











