ಅಜಯ್ ರಾವ್-ಶಶಾಂಕ್ ಜೋಡಿಯ ಹೊಸ ಸಿನಿಮಾ: ಮತ್ತೆ 'ಕೃಷ್ಣ' ಆಗ್ತಾರಾ ಅಜಯ್?
ಸ್ಯಾಂಡಲ್ ವುಡ್ ಕೃಷ್ಣ ಎಂದೇ ಖ್ಯಾತಿಗಳಿಸಿರುವ ನಟ ಅಜಯ್ ರಾವ್. ಕೃಷ್ಣನ ಸರಣಿಯ ಸಿನಿಮಾ ಮೂಲಕ ಅಭಿಮಾನಿಗಳ ಮನಗೆದ್ದಿರುವ ನಟ ಅಜಯ್ ರಾವ್ ಇದೀಗ ಹೊಸ ಸಿನಿಮಾ ಅನೌನ್ಸ್ ಆಗಿದ್ದು, ಮತ್ತೆ ಕೃಷ್ಣನ ಅವತಾರ ಎತ್ತಲು ಸಜ್ಜಾಗಿದ್ದಾರಾ? ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಕೃಷ್ಣನ್ ಲವ್ ಸ್ಟೋರಿ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಕೃಷ್ಣ ಲೀಲಾ, ಕೃಷ್ಣ ರುಕ್ಕು, ಕೃಷ್ಣನ್ ಮ್ಯಾರೇಜ್ ಸ್ಟೋರಿ ಹೀಗೆ ಸಾಲು ಸಾಲು ಕೃಷ್ಣನ ಸರಣಿಗಳಲ್ಲಿ ಅಜಯ್ ರಾವ್ ನಟಿಸಿದ್ದಾರೆ.
ಇದೀಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದು, ಚಿತ್ರಕ್ಕೆ ಶಶಾಂಕ್ ಕಥೆ ರಚಿಸಿದ್ದಾರೆ. ಶಶಾಂಕ್ ಮತ್ತು ಅಜಯ್ ರಾವ್ ಅವರದ್ದು ಹಿಟ್ ಜೋಡಿ. ಕೃಷ್ಣನ್ ಲವ್ ಸ್ಟೋರಿ ಮತ್ತು ಕೃಷ್ಣ ಲೀಲಾ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದು ಶಶಾಂಕ್. ಇದೀಗ ಮತ್ತೆ ಅಜಯ್ ರಾವ್ ಗೆ ಕಥೆ ಬರೆದಿದ್ದಾರೆ ಅಂದ್ಮೇಲೆ ಕೃಷ್ಣ ಸೀರಿಸ್ ಆಗಿರಲಿದೆ ಎನ್ನುವುದು ಚಿತ್ರಪ್ರಿಯರ ಲೆಕ್ಕಾಚಾರ.
ಅಂದಹಾಗೆ ಶಶಾಂಕ್ ಕಥೆ ಮಾತ್ರ ಬರೆದಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿದ್ದಾರೆ. ಚಿತ್ರಕ್ಕೆ ಶಂಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೊದಲು ರಾಜಾ ಹುಲಿ, ಜಂಟಲ್ ಮ್ಯಾನ್ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಸಿನಿಮಾಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಶಂಕರ್ ಇದೀಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಎಂಟ್ರಿ ಕೊಡುತ್ತಿದ್ದಾರೆ.

ನಿರ್ದೇಶಕ ಗುರುದೇಶಪಾಂಡೆ ಬ್ಯಾನರ್ ನಲ್ಲಿ ಸಿನಿಮಾ ಮೂಡಿಬರುತ್ತಿದೆ. ಹೊಸ ಸಿನಿಮಾ ಮುಹೂರ್ತ ಮುಂದಿನ ವರ್ಷ ಜನವರಿಯಲ್ಲಿ ನೆರವೇರಲಿದೆ. ಜನವರಿ 24ರಂದು ಮುಹೂರ್ತ ಮಾಡಿಕೊಳ್ಳುವ ಮೂಲಕ ಅಧಿಕೃತವಾಗಿ ಚಾಲನೆ ಸಿಗಲಿದೆ. ಇನ್ನು ಉಳಿದಂತೆ ಅಜಯ್ ರಾವ್ ಗೆ ನಾಯಕಿಯಾಗಿ ಟಾಪ್ ನಟಿಯೊಬ್ಬರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾರು ಎನ್ನುವುದು ಬಹಿರಂಗವಾಗಿಲ್ಲ. ಸದ್ಯದಲ್ಲೇ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಲಿದೆ.


Click it and Unblock the Notifications











