ಯುವ ಚಿತ್ರ ಗೆಲ್ಲೋದು ಪಕ್ಕಾ, ಯುವ ಸ್ಟಾರ್ ಆಗೋದು ಖಚಿತ; ಚಿತ್ರದ ದೃಶ್ಯ ನೋಡಿದ ಇಬ್ಬರ ಮಾತಿದು!
ಚಂದನವನದಲ್ಲಿ ಯಾರಾದರೂ ಓರ್ವ ನಟನ ಮೊದಲ ಚಿತ್ರಕ್ಕೆ ಈಗಾಗಲೇ ಚಿತ್ರರಂಗದಲ್ಲಿ ಸ್ಟಾರ್ ಆಗಿರುವ ನಟರ ಚಿತ್ರಗಳ ರೇಂಜಿಗೆ ಕಾದ ಉದಾಹರಣೆ ಇದೆಯಾ ಎಂಬ ಪ್ರಶ್ನೆ ಎದುರಾದರೆ ಅದಕ್ಕೆ ಕನ್ನಡ ಸಿನಿ ರಸಿಕರು ಮುಂದಿನ ದಿನಗಳಲ್ಲಿ ಕೊಡುವ ಉತ್ತರ ಯುವ ಚಿತ್ರ ಎಂದು ಎಂದರೆ ತಪ್ಪಾಗಲಾರದು.
ಏಕೆಂದರೆ ಯುವ ಚಿತ್ರದ ರೇಂಜ್ ಹಾಗಿದೆ. ಪುನೀತ್ ರಾಜ್ಕುಮಾರ್ ನಿಧನದ ನಂತರ ಅಪ್ಪುವಿನ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಯುವ ರಾಜ್ಕುಮಾರ್ ಹಾಗೂ ಸಂತೋಷ್ ಆನಂದ್ರಾಮ್ ಕಾಂಬಿನೇಶನ್ನ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಘೋಷಿಸಿದಾಗಲೇ ಚಿತ್ರಕ್ಕೆ ಅಪಾರವಾದ ನಿರೀಕ್ಷೆ ಹುಟ್ಟಿಕೊಂಡಿತ್ತು.

ಅಚ್ಚುಕಟ್ಟಾದ ಚಿತ್ರಗಳನ್ನು ನಿರ್ಮಿಸುವ ಕಲೆ ಬಲ್ಲ ತಂಡ ಈ ಚಿತ್ರಕ್ಕಾಗಿ ಕೈ ಜೋಡಿಸುತ್ತಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸಿನಿ ರಸಿಕರು ಈ ಚಿತ್ರದ ಬಗ್ಗೆ ಕುತೂಹಲತೆಯಿಂದ ನೋಡಿದರೆ, ರಾಜ್ವಂಶದ ಅಭಿಮಾನಿಗಳು ಯುವ ರಾಜ್ಕುಮಾರ್ ಭರ್ಜರಿಯಾಗಿ ತಮ್ಮ ಆಸೆಯಂತೆ ಲಾಂಚ್ ಆಗುವುದು ಪಕ್ಕಾ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಹೀಗೆ ಕೇವಲ ಚಿತ್ರದ ಘೋಷಣೆಯಿಂದಲೇ ಕನ್ನಡ ಸಿನಿಮಾ ಅಡ್ಡದಲ್ಲಿ ಸಂಚಲನ ಸೃಷ್ಟಿಸಿದ್ದ ಯುವ ಸಿನಿಮಾ ಫಸ್ಟ್ ಲುಕ್ ಟೀಸರ್ನಿಂದ ನಿರೀಕ್ಷೆ ಎಂಬ ಬೆಂಕಿಗೆ ಪೆಟ್ರೋಲ್ ಸುರಿದಿತ್ತು. ಹೌದು, ಆ ಫಸ್ಟ್ ಲುಕ್ ಟೀಸರ್ನಲ್ಲಿನ ಪ್ರತಿಯೊಂದು ಶಾಟ್ ಮತ್ತೊಂದು ಹಂತ ಎನ್ನುವಂತಿತ್ತು. ಯುವ ಖಡಕ್ ಡೈಲಾಗ್ ಕೇಳಿದ್ದ ಹಾಗೂ ಲುಕ್ ನೋಡಿದ್ದ ಸಿನಿ ರಸಿಕರು ಈತ ಅಬ್ಬರಿಸುವುದು ಖಚಿತ ಎಂದಿದ್ರು.
ಹೀಗೆ ಟೈಟಲ್, ಫಸ್ಟ್ ಲುಕ್ ಮೂಲಕ ದೊಡ್ಡ ಮಟ್ಟದ ಹೈಪ್ ಹುಟ್ಟುಹಾಕಿದ್ದ ಯುವ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ವರ್ಷಾಂತ್ಯದಲ್ಲಿ ಕ್ರಿಸ್ಮಸ್ ಪ್ರಯುಕ್ತ ಡಿಸೆಂಬರ್ 22ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡಲು ಕಾಯುತ್ತಿದೆ. ಇಷ್ಟರ ಮಟ್ಟಿಗೆ ಟಾಕ್ ಹುಟ್ಟಿಹಾಕಿರುವ ಯುವ ಚಿತ್ರದ ಕೆಲಸಗಳನ್ನು ಕಂಡ ಸಿನಿ ಕಲಾವಿದರು ಚಿತ್ರದ ಬಗ್ಗೆ ಹೇಳಿದ ಮಾತುಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿವೆ.
ಈ ಹಿಂದೆ ನಟ ರವಿಶಂಕರ್ ಗೌಡ ಯುವ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿ ಅಲ್ಲಿ ಯುವ ರಾಜ್ಕುಮಾರ್ ನಟನೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದೇ ರೀತಿ ಇದೀಗ ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್ ಸಹ ಯುವ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅಂದಹಾಗೆ ಅಜನೀಶ್ ಬಿ ಲೋಕನಾಥ್ ಯುವ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಈ ಚಿತ್ರದ ಕೆಲ ದೃಶ್ಯಗಳಿಗೆ ಹಿನ್ನೆಲೆ ಸಂಗೀತ ಸಂಯೋಜಿಸುವ ವೇಳೆ ಆ ದೃಶ್ಯಗಳನ್ನು ವೀಕ್ಷಿಸಿ ಮನ ಸೋತಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಅಜನೀಶ್ ಬಿ ಲೋಕನಾಥ್ "ಯುವ ಚಿತ್ರದ ಅದ್ಭುತ ದೃಶ್ಯಗಳನ್ನು ವೀಕ್ಷಿಸಿ ಬೆರಗಾಗಿದ್ದೇನೆ. ಚಿತ್ರದ ದೃಶ್ಯಗಳು ಆಕರ್ಷಕವಾಗಿವೆ ಮತ್ತು ಯುವ ರಾಜ್ಕುಮಾರ್ ಅವರ ಅಭಿನಯ ಅದಕ್ಕೆ ಶಕ್ತಿ ತುಂಬಿದೆ. ನಾನು ಈಗಷ್ಟೇ ನೋಡಿದ ಅದ್ಭುತ ದೃಶ್ಯಗಳನ್ನು ನೀವೆಲ್ಲರೂ ಆನಂದಿಸಲು ಕಾತರರಾಗಿ ಕಾದಿರಿ. ನಿರ್ದೇಶಕ ಸಂತೋಷ್ ಆನಂದ್ರಾಮ್ ವಿಷನ್ಗೆ ಖುದೋಸ್" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











