ಬಿಡುಗಡೆಯಾದ ಏಳನೇ ದಿನಕ್ಕೆ 'ಕಾಂತಾರ' ಸಂಗೀತ ನಿರ್ದೇಶಕನಿಗೆ ಸಿಕ್ತು ಚಿತ್ರದ ಟಿಕೆಟ್!
ಕಳೆದ ಶುಕ್ರವಾರ ( ಸೆಪ್ಟೆಂಬರ್ 30 ) ಬಿಡುಗಡೆಯಾದ ಕಾಂತಾರ ಚಿತ್ರ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿದೆ. ಚಿತ್ರ ಬಿಡುಗಡೆಯಾಗಿ ಇಂದು ( ಅಕ್ಟೋಬರ್ 6 ) ಏಳನೇ ದಿನದ ಪ್ರದರ್ಶನ ನಡೆಯುತ್ತಿದ್ದು, ಇಂದು ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್ ಅಂತೂ ಇಂತೂ ಕಾಂತಾರ ಚಿತ್ರದ ಟಿಕೆಟ್ ಸಿಕ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಪಿವಿಆರ್ ಚಿತ್ರಮಂದಿರವೊಂದರಲ್ಲಿ ತಮ್ಮ ಕುಟುಂಬಸ್ಥರ ಜತೆ ಚಿತ್ರ ವೀಕ್ಷಿಸುತ್ತಿರುವ ಸೆಲ್ಫಿಯನ್ನು ಅಜನೀಶ್ ಲೋಕನಾಥ್ ಹಂಚಿಕೊಂಡಿದ್ದಾರೆ. ಹೀಗೆ 7 ದಿನ ಕಳೆದ ನಂತರ ಚಿತ್ರ ವೀಕ್ಷಿಸುತ್ತಿರುವ ಅಜನೀಶ್ ಬಿ ಲೋಕನಾಥ್ ಪೋಸ್ಟಿಗೆ ನೆಟ್ಟಿಗರು ಭಿನ್ನ ವಿಭಿನ್ನ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಚಿತ್ರ ಹೇಗಿದೆ, ನಿಮ್ಮ ವಿಮರ್ಶೆ ತಿಳಿಸಿ ಎಂದು ಕಾಲೆಳೆಯುತ್ತಿದ್ದರೆ, ಇನ್ನೂ ಕೆಲವರು ಚಿತ್ರ ಅತ್ಯದ್ಭುತ ಎಂದು ಇಲ್ಲಿಯೂ ಸಹ ಕಾಮೆಂಟ್ ಮಾಡಿ ಚಿತ್ರವನ್ನು ಹೊಗಳುತ್ತಿದ್ದಾರೆ.
ಚಿತ್ರದ ಮತ್ತೊಬ್ಬ ಹೀರೋ ಅಜನೀಶ್ ಬಿ ಲೋಕನಾಥ್:
ಕಾಂತಾರ ಚಿತ್ರಕ್ಕೆ ರಿಷಬ್ ಶೆಟ್ಟಿ ಹೇಗೆ ನಾಯಕರೋ, ಅದೇ ರೀತಿ ಅಜನೀಶ್ ಬಿ ಲೋಕನಾಥ್ ಕೂಡ ನಾಯಕ. ಚಿತ್ರ ಬಿಡುಗಡೆಯಾಗುವ ಮುನ್ನ ಟ್ರೈಲರ್ ಹಾಗೂ ಹಾಡುಗಳ ಮೂಲಕ ಈ ಹಿಂದಿನ ಚಿತ್ರಗಳಂತೆ ಕಾಂತಾರ ಚಿತ್ರಕ್ಕೂ ಸಹ ಅದ್ಭುತವಾದ ಸಂಗೀತ ಸಂಯೋಜನೆ ಮಾಡಿರುವ ಸುಳಿವನ್ನು ನೀಡಿದ್ದ ಅಜನೀಶ್ ಬಿ ಲೋಕನಾಥ್ ಚಿತ್ರ ಬಿಡುಗಡೆಗೊಂಡ ನಂತರ ತಮ್ಮ ಮೇಲಿನ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ದಿನದಿಂದ ದಿನಕ್ಕೆ ಏರುತ್ತಿದೆ ಪ್ರದರ್ಶನ ಹಾಗೂ ಕಲೆಕ್ಷನ್:
ಇನ್ನು ಕಾಂತಾರ ಚಿತ್ರದ ಪ್ರದರ್ಶನಗಳ ಸಂಖ್ಯೆ ಹಾಗೂ ಕಲೆಕ್ಷನ್ಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸರಿಯಾದ ಸಮಯಕ್ಕೆ ಚಿತ್ರ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದು, ಸಾಲು ಸಾಲು ರಜೆ ಇದ್ದ ಕಾರಣ ಚಿತ್ರ ತುಂಬಿದ ಪ್ರದರ್ಶನಗಳನ್ನು ಕಂಡು ಒಳ್ಳೆಯ ಕಲೆಕ್ಷನ್ ಮಾಡಿದೆ. ಹಲವೆಡೆ ಚಿತ್ರಕ್ಕೆ ಹೆಚ್ಚುವರಿ ಪ್ರದರ್ಶನಗಳನ್ನು ನೀಡಲಾಗಿದೆ. ರಜೆ ಇರುವ ಕಾರಣ ಕಾಂತಾರ ಚಿತ್ರ ನೋಡಲು ಚಿತ್ರಮಂದಿರಗಳತ್ತ ಪ್ರೇಕ್ಷಕರು ಮುನ್ನುಗ್ಗುತ್ತಿರುವ ಕಾರಣ ಟಿಕೆಟ್ ಇಲ್ಲದೆ ಬೇಸರಗೊಂಡು ಹಿಂತಿರುಗಿರುವವರ ಸಂಖ್ಯೆಯೂ ಹೆಚ್ಚಿದೆ.


Click it and Unblock the Notifications











