'ಕಾಂತಾರ- 1' ಚಿತ್ರದಲ್ಲಿ ಅದ್ಭುತ ಸಂಗೀತ ಪ್ರಯೋಗ, ದಿಲ್ಜಿತ್ ಆಯ್ಕೆ ಯಾಕಂದ್ರೆ; ಅಜನೀಶ್ ಲೋಕನಾಥ್
3 ವರ್ಷಗಳ ಹಿಂದೆ ಬಂದಿದ್ದ 'ಕಾಂತಾರ' ಚಿತ್ರದ ಗೆಲುವಿನಲ್ಲಿ ಅಜನೀಶ್ ಲೋಕನಾಥ್ ಸಂಗೀತದ ಪಾಲು ಇದೆ. ಹಾಗಾಗಿ 'ಕಾಂತಾರ- 1' ಸಿನಿಮಾ ಮ್ಯೂಸಿಕ್ ಬಗ್ಗೆಯೂ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಟ್ರೈಲರ್ ಬಿಜಿಎಂ ಹಾಗೂ 'ಬ್ರಹ್ಮಕಲಶ' ಸಾಂಗ್ ಹಿಟ್ ಆಗಿದೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿವೆ. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ 'ಕಾಂತಾರ' ಜರ್ನಿ ಬಗ್ಗೆ ಅಜನೀಶ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಯಾವುದೇ ಸಿನಿಮಾ ಗೆಲುವಿಗೆ ಸಂಗೀತ ಮಹತ್ವ ಎನ್ನವಂತಾಗಿದೆ. ಬರೀ ಸಂಗೀತದಿಂದಲೇ ಗೆದ್ದ ಸಿನಿಮಾಗಳು ಇವೆ. 'ಕಾಂತಾರ- 1' ಚಿತ್ರದ ಸಂಗೀತದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆಯಿದೆ. 'ವರಾಹರೂಪಂ' ರೀತಿಯ ಸೂಪರ್ ಹಿಟ್ ಸಾಂಗ್ ಈ ಬಾರಿ ಕೂಡ ಇರುತ್ತಾ ಎಂದು ಕಾಯುವಂತಾಗಿದೆ. ಚಿತ್ರದ ಒಂದು ಹಾಡು ಮಾತ್ರ ಬಿಡುಗಡೆಯಾಗಿದೆ. ಇನ್ನು 3 ಹಾಡುಗಳನ್ನು ಚಿತ್ರತಂಡ ಸರ್ಪ್ರೈಸ್ ಆಗಿಯೇ ಇಟ್ಟುಕೊಂಡಿದೆ.

'ಉಳಿದವರು ಕಂಡಂತೆ' ಚಿತ್ರದ ಸಮಯದಿಂದಲೂ ರಿಷಬ್ ಶೆಟ್ಟಿ ಹಾಗೂ ಅಜನೀಶ್ ನಡುವೆ ಪರಿಚಯ, ಸ್ನೇಹ ಇದೆ. ಬಳಿಕ 'ಕಿರಿಕ್ ಪಾರ್ಟಿ', 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ'(ಹಿನ್ನೆಲೆ ಸಂಗೀತ), 'ಬೆಲ್ಬಾಟಂ' ಹಾಗೂ 'ಕಾಂತಾರ' ಚಿತ್ರದಲ್ಲಿ ಇವರಿಬ್ಬರ ಕಾಂಬಿನೇಷನ್ ಹಿಟ್ ಆಗಿತ್ತು. ಈಗ ಮತ್ತೊಮ್ಮೆ ಇಬ್ಬರು ಸೇರಿ 'ಕಾಂತಾರ- 1' ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಕೊನೆ ಹಂತದ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುವ ಅಜನೀಶ್ ಸಂಗೀತದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
"ಎಷ್ಟೇ ಕೆಲಸ ಮಾಡಿದ್ರು ತಂತ್ರಜ್ಞರಿಗೆ ಕಮ್ಮಿನೆ ಅನ್ನಿಸುತ್ತೆ. ಅಂತಿಮವಾಗಿ ಪ್ರೇಕ್ಷಕರು ನೋಡಿ ಮೆಚ್ಚಿಕೊಂಡಾಗ ಖುಷಿಯಾಗುತ್ತದೆ. ನನಗೆ ತೃಪ್ತಿ ಎನ್ನುವುದು ಇರುವುದಿಲ್ಲ, ಇನ್ನು ಸಮಯ ಸಿಕ್ಕಿದ್ರೆ ಇನ್ನು ಚೆನ್ನಾಗಿ ಮಾಡಬಹುದು ಎನಿಸುತ್ತಲೇ ಇರುತ್ತದೆ. ಒಟ್ಟಾರೆ ಸಿನಿಮಾ ಚೆನ್ನಾಗಿ ಬಂದಿದೆ, ನಾನು ನೋಡಿ ಖುಷಿಪಟ್ಟಿದ್ದೀನಿ, ಟ್ರೈಲರ್ನಲ್ಲಿ ಈಗಾಗಲೇ ಎಲ್ಲರೂ ನೋಡಿದ್ದೀರಾ. ಚಿತ್ರತಂಡದ ಸಹಕಾರ ಮರೆಯೋಕೆ ಸಾಧ್ಯವಿಲ್ಲ" ಎಂದು ಅಜನೀಶ್ ತಿಳಿಸಿದ್ದಾರೆ.
ನನ್ನ ಸ್ಟುಡಿಯೋದಲ್ಲೇ ಕೆಲಸ ನಡೆಯುತ್ತಿದೆ. ಈ ಹಿಂದೆ ಕುಂದಾಪುರದಲ್ಲಿ ಪ್ರೀಪ್ರೊಡಕ್ಷನ್ ವೇಳೆ ಒಂದಷ್ಟು ದಿನ ಅಲ್ಲೇ ಇದ್ದು ಕೆಲಸ ಮಾಡಿದ್ದೆವು ಎಂದು ಅಜನೀಶ್ ಹೇಳಿದ್ದಾರೆ. "ಕರ್ನಾಟಿಕ್ ಮ್ಯೂಸಿಕ್, ಟ್ರೈಬಲ್ ಮ್ಯೂಸಿಕ್ ಬಳಸಿದ್ದೀವಿ. 'ವರಾಹ ರೂಪಂ'ಗಿಂತ ಒಳ್ಳೆ ಹಾಡುಗಳು ಈ ಚಿತ್ರದಲ್ಲಿ ಇದೆ. ಡ್ಯಾನ್ಸ್ ಮಾಡುವ ಹಾಡುಗಳು ಅಲ್ಲ, ಎಲ್ಲಾ ಮಾಂಟೇಜ್ ಆಗಿ ಬರುತ್ತದೆ. 'ಕಾಂತಾರ' ಚಿತ್ರದ ಕೊನೆಯ 20 ನಿಮಿಷದ ಸನ್ನಿವೇಶಗಳಲ್ಲಿ ಮ್ಯೂಸಿಕ್ ಚೆನ್ನಾಗಿತ್ತು ಅಂತ ಎಲ್ಲರೂ ಹೇಳುವುದಕ್ಕೆ ಕಾರಣ ಅಲ್ಲಿ ನನಗೆ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕಿತ್ತು. ಅಂತಹ ದೃಶ್ಯಗಳಿದ್ದವು. ಭೂತಕೋಲ, ಗುಳಿಗ ದೃಶ್ಯಗಳು ಅದಕ್ಕೂ ಮುನ್ನ ಹೆಚ್ಚು ಸಿನಿಮಾಗಳಲ್ಲಿ ಬಂದಿರಲಿಲ್ಲ. ಹಾಗಾಗಿ ಅದು ಅದ್ಭುತ ಅನಿಸಿತು. ರಿಷಬ್ ಸರ್ ಮೈಜುಮ್ ಎನಿಸೋ ನಟನೆ ಇತ್ತು. ಅದೆಲ್ಲವೂ ಅಷ್ಟು ಒಳ್ಳೆ ಔಟ್ಪುಟ್ ಬರುವುದಕ್ಕೆ ಸಹಕಾರಿಯಾಗಿತು" ಎಂದಿದ್ದಾರೆ.
"ದಕ್ಷಿಣ ಕನ್ನಡದ ಜನಪದ ಪ್ರತಿಭೆಗಳನ್ನು ಹುಡುಕಿ ಅವ್ರು ಕೆಲಸಗಳನ್ನು ನಾವು ಬಳಸಿಕೊಳ್ಳಲು ರಾಮ್ದಾಸ್ ಅವರ ಸಹಕಾರ ಮರೆಯುವಂತಿಲ್ಲ. 'ಕಾಂತಾರ' ಚಿತ್ರಕ್ಕಾಗಿಯೂ ಕೂಡ ಕೆಲಸ ಮಾಡಿದ್ದರು. ಅವ್ರು ಹಾಡುಗಾರರು, ಬಹಳ ಚೆನ್ನಾಗಿ ಬರೀತ್ತಾರೆ. 'ವಾ ಪೊರ್ಲಿಯಾ' ಎನ್ನುವ ಹಾಡನ್ನು ರಚಿಸಿದ್ದಾರೆ. ಎಲೆಮರೆಯ ಕಾಯಿಯಂತಹ ಪ್ರತಿಭೆಗಳನ್ನು ಅವರ ನೈಜ ಪ್ರತಿಭೆಯನ್ನು ಬಳಸಿಕೊಳ್ಳಲು ಸಹಾಯವಾಯಿತು. 'ಉಳಿದವರು ಕಂಡಂತೆ' ಚಿತ್ರದ ಹುಲಿ ಕುಣಿತವನ್ನು ತೆರೆಗೆ ತಂದಾಗ ಕೂಡ ಇದೇ ಪ್ರಯತ್ನ ಮಾಡಿದ್ದೆವು. ಅವ್ರು ಸಹಜವಾಗಿ ಹಾಡುತ್ತಾರೆ, ಅದನ್ನೆಲ್ಲಾ ನಾವು ನಮಗೆ ಹೇಗೆ ಬೇಕೋ ಹಾಗೆ ಸಿನಿಮಾದಲ್ಲಿ ಬಳಸಿಕೊಂಡಿದ್ದೇವೆ. ಅದು ದೊಡ್ಡ ಪ್ರಕ್ರಿಯೆ. ಅದನ್ನು ಮಾತುಗಳಲ್ಲಿ ಹೇಳುವುದು ಕಷ್ಟ" ಎಂದು ಅಜನೀಶ್ ವಿವರಿಸಿದ್ದಾರೆ.
'ಕಾಂತಾರ- 1' ಜೊತೆಗೆ ದರ್ಶನ್ ನಟನೆಯ 'ಡೆವಿಲ್' ಹಾಗೂ ಸುದೀಪ್ ನಟನೆಯ 'ಮಾರ್ಕ್' ಚಿತ್ರಗಳಿಗೆ ಅಜನೀಶ್ ಲೋಕನಾಥ್ ಕೆಲಸ ಮಾಡುತ್ತಿದ್ದಾರೆ. ಇದು ಹೊರೆ ಅನ್ನಿಸಲಿಲ್ಲವೇ ಎನ್ನುವ ಪ್ರಶ್ನೆಗೆ "ಮಾಡಲೇಬೇಕು, ಅಷ್ಟೇ, ಹೇಗೆ ಎಂದು ಆಲೋಚಿಸುತ್ತಾ ಕೂತ್ರೆ ಅಲ್ಲೇ ನಿಂತುಬಿಡ್ತೀವಿ. 'ಕಾಂತಾರ- 1' ಮುಗೀತು, ಮುಂದೆ 'ಡೆವಿಲ್' ಹಾಗೂ 'ಮಾರ್ಕ್' ಅದರ ಕಡೆ ಗಮನ ಹರಿಸಬೇಕು" ಎಂದು ಅಜನೀಶ್ ತಿಳಿಸಿದ್ದಾರೆ.
ಇತ್ತೀಚೆಗೆ ವಿದೇಶಗಳಲ್ಲಿ ಕೂಡ ಕನ್ನಡ ಸಿನಿಮಾ ರೆಕಾರ್ಡಿಂಗ್ ನಡೀತಿದೆ. ಅಲ್ಲಿನ ಆರ್ಕೇಸ್ಟ್ರಾ ಬಳಸಿಕೊಂಡು ಕಂಪೋಸ್ ಮಾಡುತ್ತಿದ್ದಾರೆ. 'ಕಾಂತಾರ- 1' ರೀತಿಯ ದೊಡ್ಡ ಚಿತ್ರದ ಸಂಗೀತದ ಕೆಲಸಗಳು ಎಲ್ಲವೂ ಇಲ್ಲೇ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿ "ಈ ಚಿತ್ರಕ್ಕೆ ಇಲ್ಲಿನ ಜನಪದ ಸಂಗೀತ, ಕರ್ನಾಟಿಕ್ ಸಂಗೀತ ಹೆಚ್ಚು ಬಳಸಿಕೊಂಡಿದ್ದೇವೆ. ಚಾಪ್ಟರ್-1ಗಾಗಿ ಸಣ್ಣ ಪುಟ್ಟ ಕಡೆ ಬುಡಾಫೆಸ್ಟ್ ಆಕ್ರೇಸ್ಟ್ರಾ ಸಹ ಬಳಸಿಕೊಂಡಿದ್ದೇವೆ" ಎಂದು ಮಾಹಿತಿ ನೀಡಿದ್ದಾರೆ.
'ಬ್ರಹ್ಮಕಳಶ' ಹಾಡಿಗೆ ಶಶಿರಾಜ್ ಕಾವೂರ್ ಸಾಹಿತ್ಯ ಬರೆದಿದ್ದರು. ರಾಮ್ನಾಥ್, ಪ್ರಮೋದ್ ಮರವಂತೆ, ತ್ರಿಲೋಕ್ ಇನ್ನುಳಿದ ಹಾಡುಗಳಿಗೆ ಸಾಹಿತ್ಯ ಬರೆದಿರುವುದಾಗಿ ಅಜನೀಶ್ ಹೇಳಿದ್ದಾರೆ. ಇನ್ನು ದಿಲ್ಜಿತ್ ದೋಸಾಂಜ್ ಅವರನ್ನು ಯಾಕೆ ಬಳಸಿಕೊಂಡಿದ್ದು ಎಂದು ತಿಳಿಸಿದ್ದಾರೆ. "ನಮಗೆ ಆ ಹಾಡು ಹಾಡಲು ಸಿನಿಮಾ ಗಾಯಕರು ಬೇಡ, ಜನಪದ ಶೈಲಿ ಗಾಯಕ ಬೇಕಿತ್ತು. ರಾಮ್ದಾಸ್ ಹಾಡಿದಾಗಲೇ ಅದ್ಭುತ ಅನ್ನಿಸಿತ್ತು. ಹಾಗಾಗಿ ಕನ್ನಡದಲ್ಲಿ ಅದನ್ನೇ ಉಳಿಸಿಕೊಂಡೆವು. ಹಿಂದಿಯಲ್ಲಿ ಯಾರು ಹಾಡಬೇಕು ಎಂದಾಗ ರಿಷಬ್ ಸರ್ ದಿಲ್ಜಿತ್ ಅವರನ್ನು ಆಯ್ಕೆ ಮಾಡಿದ್ರು. ಅವರು ಪಂಜಾಬಿ ಜಾನಪದ ಶೈಲಿಯ ಗಾಯಕ. ಹಾಗಾಗಿ ಅವರು ಚೆನ್ನಾಗಿ ಹಾಡಬಲ್ಲರು ಎಂದು ಹಾಡಿಸಿದ್ದೆವು" ಎಂದು ಅಜನೀಶ್ ವಿವರಿಸಿದ್ದಾರೆ.


Click it and Unblock the Notifications











