ಬ್ಯಾಂಕಿಗೆ ಕನ್ನ ಹಾಕಲಿರುವ ಅಜಯ್ ರಾವ್! ಜೊತೆಗಾರರು ಯಾರು?
ಬ್ಯಾಂಕಿಗೆ ಕನ್ನ ಹಾಕಿ ಹಣ ದೋಚುವ ಥ್ರಿಲ್ಲರ್, ಆಕ್ಷನ್ ಸಿನಿಮಾಗಳು ಹಾಲಿವುಡ್ನಲ್ಲಿ ಹೆಚ್ಚು. ಕೆಲವು ಅತ್ಯದ್ಭುತ ದರೋಡೆ ಕತೆಯುಳ್ಳ ಸಿನಿಮಾಗಳು ಹಾಲಿವುಡ್ನಲ್ಲಿವೆ. ಹಿಂದಿಯಲ್ಲಿಯೂ ಕೆಲವು ಬ್ಯಾಂಕ್ ದರೋಡೆ ಸಿನಿಮಾಗಳಿವೆ ಆದರೆ ಕನ್ನಡದಲ್ಲಿ 'ನಿಷ್ಕರ್ಷ' ಸಿನಿಮಾದ ಹೊರತಾಗಿ ಇನ್ನಾವ ಬ್ಯಾಂಕ್ ದರೋಡೆ ಸಿನಿಮಾವೂ ನೆನಪಿಗೆ ಬರುವುದಿಲ್ಲ.
ಇದೀಗ ಹೊಸದೊಂದು ಬ್ಯಾಂಕ್ ದರೋಡೆಯ ಥ್ರಿಲ್ಲರ್ ಕತೆಯುಳ್ಳ ಸಿನಿಮಾ ಕನ್ನಡದಲ್ಲಿ ತೆರೆಗೇರುತ್ತಿದೆ. ಆದರೆ ಸಿನಿಮಾವು ಥ್ರಿಲ್ಲರ್ ಅಂಶಗಳ ಜೊತೆಗೆ ಹಾಸ್ಯ ಹಾಗೂ ಭಾವುಕತೆಯನ್ನೂ ಒಳಗೊಂಡಿರಲಿದೆ.
ಕನ್ನಡದ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ' ಸಿನಿಮಾ ಸೆಟ್ಟೇರಿದ್ದು, ಈ ಸಿನಿಮಾದಲ್ಲಿ ಅಜಯ್ ರಾವ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಎಚ್ಕೆ ಪ್ರಕಾಶ್ ಬಂಡವಾಳ ಹೂಡಿದ್ದಾರೆ. ಈ ಹಿಂದೆ 'ರಂಗಿತರಂಗ', 'ಅವನೇ ಶ್ರೀಮನ್ನಾರಾಯಣ' ಸಿನಿಮಾಗಳಿಗೆ ಬಂಡವಾಳ ಹೂಡಿದ್ದರು ಇವರು. 'ಬ್ಯಾಂಕ್ ಆಫ್ ಭಾಗ್ಯಲಕ್ಷಿ' ಕಥೆ ಕೇಳಿ ಥ್ರಿಲ್ ಆಗಿದ್ದಾರಂತೆ ನಟ ಅಜಯ್ ರಾವ್. ಪ್ರತಿ ಬಾರಿ ನವ ನಿರ್ದೇಶಕರಿಗೆ ಮೊದಲ ಆದ್ಯತೆ ನೀಡುವ ನಿರ್ಮಾಪಕರಾದ ಹೆಚ್ ಕೆ ಪ್ರಕಾಶ್ ಈ ಬಾರಿಯೂ ನವ ಹಾಗೂ ಪ್ರತಿಭಾವಂತ ನಿರ್ದೇಶಕನೊಂದಿಗೆ ಕೈ ಜೋಡಿಸಿದ್ದಾರೆ. ಅಭಿಷೇಕ್ ಎಂ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ಅಂಗಳಕ್ಕೆ ಪರಿಚಿತರಾಗುತ್ತಿದ್ದಾರೆ.

ನಿರ್ದೇಶಕ ಸಿಂಪಲ್ ಸುನಿ ಜೊತೆ 'ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ', 'ಬಹುಪರಾಕ್' ಮತ್ತು 'ಆಪರೇಷನ್ ಅಲಮೇಲಮ್ಮ' ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. 'ಪಿನಾಕ' ಎಂಬ VFX ಸ್ಟುಡಿಯೋ ಕೂಡ ಹೊಂದಿರುವ ಅಭಿಷೇಕ್ ಎಂ 'ಬ್ಯಾಂಕ್ ಆಫ್ ಭಾಗ್ಯಲಕ್ಷಿ' ಮೂಲಕ ಚೊಚ್ಚಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಡಲು ಸಜ್ಜಾಗಿದ್ದಾರೆ.
ಬ್ಯಾಂಕ್ ವೊಂದನ್ನು ದರೋಡೆ ಮಾಡಲು ಹೊರಟವರ ಸುತ್ತ ಹೆಣೆಯಲಾದ ಇಂಟ್ರಸ್ಟಿಂಗ್ ಕಥಾಹಂದರ ಈ ಚಿತ್ರ ಒಳಗೊಂಡಿದೆ. ಇದಿಷ್ಟನ್ನೇ ರಿವೀಲ್ ಮಾಡಿರುವ ಸಿನಿಮಾ ತಂಡ ಮುಂಬರುವ ದಿನಗಳಲ್ಲಿ ಚಿತ್ರದ ಬಗ್ಗೆ, ನಾಯಕಿ ಮತ್ತು ಕಲಾವಿದರ ಬಳಗ ಇದೆಲ್ಲದರ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ.
ಸದ್ಯ ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಅಭಿಷೇಕ್ ಜಿ ಕಾಸರಗೋಡು ಕ್ಯಾಮೆರಾ ನಿರ್ದೇಶನ, ತೇಜಸ್ ಆರ್ ಸಂಕಲನ, ರಾಘು ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಹೆಚ್. ಕೆ ಪ್ರಕಾಶ್ ಅವರು ತಮ್ಮ ಶ್ರೀದೇವಿ ಎಂಟರ್ ಟೈನರ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಐದನೇ ಚಿತ್ರವಿದು.


Click it and Unblock the Notifications











