ಮೂರೇ ವರ್ಷಕ್ಕೆ ಕನ್ನಡ ಕೋಗಿಲೆ ದಾಂಪತ್ಯದಲ್ಲಿ ಬಿರುಕು ; ಡಿವೋರ್ಸ್ಗೆ ಕಾರಣವೇನು ? ಮೌನ ಮುರಿದ ಅಖಿಲಾ ಪಜಿಮಣ್ಣು
ಮದುವೆ ಒಂದು ಸಾಂಸ್ಥಿಕ ವ್ಯವಸ್ಥೆ ಎನ್ನುವ ಮಾತು ಹಿಂದೆ ಪ್ರಚಲಿತದಲ್ಲಿತ್ತು. ಆದರೆ ಈಗ ಬದಲಾದ ಸಾಮಾಜಿಕ.. ಆರ್ಥಿಕ.. ಶೈಕ್ಷಣಿಕ.. ವಿಚಾರಗಳು ಮದುವೆಯ ಪರಿಕಲ್ಪನೆ ಮತ್ತು ರೂಪುರೇಷೆಯನ್ನು ಬದಲಿಸಿವೆ. ಮದುವೆ ಈಗ ವ್ಯವಸ್ಥೆಯಾಗಿ ಉಳಿದಿಲ್ಲ. ಎರಡು ಮನಸುಗಳ ಬೆಸುಗೆಯಾಗದ ಮದುವೆ ಈಗ ಕೇವಲ ತೋರಿಕೆಯ ಸಂಪ್ರದಾಯವಾಗಿದೆ. ತೋರ್ಪಡಿಕೆಯ ಆಚರಣೆಯಾಗಿದೆ.
ಬದಲಾದ ಈ ಕಾಲದಲ್ಲಿ.. ಹಲವರು ಸ್ವಾವಲಂಬಿಯಾಗುತ್ತಿದ್ದಾರೆ. ಇವತ್ತು.. ಯಾರು.. ಯಾರ ಅಧೀನದಲ್ಲಿರಲು ಇಷ್ಟ ಪಡುವುದಿಲ್ಲ. ಹೆಣ್ಣಿಗಾಗಲಿ.. ಗಂಡಿಗಾಗಲಿ.. ಯಾರು ಯಾರಿಗೂ ಅನಿವಾರ್ಯವಲ್ಲ ಎಂಬ ಮನೋಭಾವ ಹೆಚ್ಚಾಗಿದೆ. ಮದುವೆ ಎಂಬ ವ್ಯವಸ್ಥೆ ನಶಿಸಿ ಹೋಗಲು ಇವೆಲ್ಲವೂ ಕಾರಣ ಎನ್ನುವ ಅಭಿಪ್ರಾಯ ಆಗಾಗ ವ್ಯಕ್ತವಾಗುತ್ತಲೆ ಇರುತ್ತದೆ.

ಇದಕ್ಕೆ ಪೂರಕವಾಗಿ ಈಗೀಗ ವಿಚ್ಛೇದನದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿಯಂತೂ ಡಿವೋರ್ಸ್ ಎನ್ನುವುದು ಮಾಮೂಲಿಯಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವಾರು ಜನ ಇಲ್ಲಿಯವರೆಗೆ ವಿಚ್ಛೇದನ ಪಡೆದಿದ್ದಾರೆ. ಆ ಪೈಕಿ ಅಖಿಲಾ ಪಜಿಮಣ್ಣು ಕೂಡ ಒಬ್ಬರು.
ಹೌದು, ಅಖಿಲಾ ಪಜಿಮಣ್ಣು.. ಕನ್ನಡ ಕೋಗಿಲೆ. ಕೇವಲ ಗಾಯಕಿ ಮಾತ್ರ ಅಲ್ಲ. ನಿರೂಪಕಿ ಕೂಡ ಹೌದು. ''ಮುಂಜಾನೆ ರಾಗ''.. ''ಸುವರ್ಣ ಸಂಕಲ್ಪ''.. ಇವರ ನಿರೂಪಣಾ ಶೈಲಿಗೆ ಹಿಡಿದ ಅತ್ಯುತ್ತಮ ಕೈಗನ್ನಡಿಗಳು.
ಗಾಯಕಿಯಾಗಿ, ನಿರೂಪಕಿಯಾಗಿ ತಮ್ಮದೇ ಛಾಪು ಮೂಡಿಸುತ್ತಿರುವ ಅಖಿಲಾ ಪಜಿಮಣ್ಣು ಮೂರು ವರ್ಷದ ಹಿಂದೆ ಧನಂಜಯ್ ಶರ್ಮಾ ಅವರ ಜೊತೆ ಮದುವೆಯಾಗಿದ್ದರು. ವಿಶೇಷ ಅಂದರೆ ಇವರದ್ದು ಲವ್ ಮ್ಯಾರೇಜ್ ಆಗಿರಲಿಲ್ಲ. ಬದಲಿಗೆ ಮನೆಯ ಗುರು ಹಿರಿಯರು ನಿಶ್ಚಯಿಸಿದ ಮದುವೆ ಆಗಿತ್ತು.
ಆದರೆ 2022ರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಧನಂಜಯ್ ಶರ್ಮಾ ಅವರ ಜೊತೆ ಸಪ್ತಪದಿಯನ್ನು ತುಳಿದ ಅಖಿಲಾ ಅವರ ದಾಂಪತ್ಯದಲ್ಲಿ ಕೇವಲ ಒಂದೂವರೆ ವರ್ಷದಲ್ಲಿ ಬಿರುಕು ಮೂಡಿತ್ತು. ಮೂರು ವರ್ಷಕ್ಕೆ ದಾಂಪತ್ಯ ಜೀವನವೂ ಮುರಿದು ಬಿತ್ತು. ಕಳೆದ ವರ್ಷ ಪುತ್ತೂರು ನ್ಯಾಯಾಲಯದಲ್ಲಿ ಅಖಿಲಾ ಮತ್ತು ಧನಂಜಯ್ ಶರ್ಮಾ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದರು. ವಿಚ್ಚೇದನ ಪಡೆದರು.

ಇನ್ನೂ ನಿಮಗೆ ಗೊತ್ತು. ಕಾಲ ಎಷ್ಟೇ ಬದಲಾದರೂ ಇವತ್ತು ಕೂಡ ಅದು-ಇದು ಎಂದು ಮಾತನಾಡುವರ ಸಂಖ್ಯೆ ಕಡಿಮೆ ಇಲ್ಲ. ಅಖಿಲಾ ಅವರ ವಿಚಾರದಲ್ಲಿ ಕೂಡ ಇದೇ ಆಗಿತ್ತು. ಅಖಿಲಾ ವಿಚ್ಛೇದನದ ವಿಚಾರ ಜಗಜ್ಜಾಹೀರಾಗುತ್ತಿದ್ದಂತೆಯೇ ಹಲವರು ಹಲವು ರೀತಿಯಲ್ಲಿ ಮಾತನಾಡಲು ಶುರು ಮಾಡಿದ್ದರು. ಈ ಎಲ್ಲ ಅಂತೆ-ಕಂತೆಗಳಿಗೆ ಖುದ್ದು ಅಖಿಲಾ ಪಜಿಮಣ್ಣು ಉತ್ತರ ನೀಡಿದ್ದಾರೆ. ನಮ್ಮ ನೋವು ನಮಗೆ ಮಾತ್ರ ಗೊತ್ತು ಎಂದು ಹೇಳಿದ್ದಾರೆ.
ಈ ಕುರಿತು ''ThePowerhouseVines''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಖಿಲಾ ಪಜಿಮಣ್ಣು ವಿಚ್ಚೇದನದ ವಿಚಾರವನ್ನು ಜಗಜ್ಜಾಹೀರು ಮಾಡುವ ಉದ್ದೇಶ ನಮಗೆ ಇರಲಿಲ್ಲ ಎಂದು ಹೇಳಿದ್ದಾರೆ. ನಾವು ಎಲ್ಲವನ್ನೂ ಗೌಪ್ಯವಾಗಿ ಇಡಲು ಬಯಸಿದ್ದೆವು, ಆದರೆ ಅದ್ಹೇಗೋ ವಿಷಯ ಹೊರ ಬಂತು ಎಂದು ಹೇಳಿರುವ ಅಖಿಲಾ ನನಗೆ ಹಾಡಲು ನನ್ನ ಗಂಡ ಬಿಡಲಿಲ್ಲ, ನಿರೂಪಣೆ ಮಾಡಲು ಅವಕಾಶ ಕೊಡಲಿಲ್ಲ, ಈ ಕಾರಣಕ್ಕೆ ನಾನು ಡಿವೋರ್ಸ್ ಪಡೆದೆ ಎಂದೆಲ್ಲಾ ಸುದ್ದಿಯಾಯ್ತು ಆದರೆ ವಾಸ್ತವದಲ್ಲಿ ಅದೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ.
ಮುಂದುವರೆದು ಹಾಗೇ ನೋಡಿದರೆ ನಮ್ಮ ದಾಂಪತ್ಯ ಜೀವನ ಉಳಿಸಿಕೊಳ್ಳಲು ನಾವು ಇಬ್ಬರೂ ಪ್ರಾಮಾಣಿಕವಾದ ಪ್ರಯತ್ನ ಮಾಡಿದೆವು ಎಂಬರ್ಥದಲ್ಲಿ ಮಾತನಾಡಿರುವ ಅಖಿಲಾ, ನಾವಿಬ್ಬರು ಒಂದೂವರೆ ವರ್ಷದಿಂದ ಹೊಂದಾಣಿಕೆ ಮಾಡಿಕೊಂಡು ಬದುಕುವ ಪ್ರಯತ್ನ ಮಾಡಿದೆವು,ಆದರೆ ದುರಾದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಇಬ್ಬರ ನಡುವೆ ಬಿರುಕು ಮೂಡಿದ ನಂತರ ನಾನು ಅಮೆರಿಕಾದಿಂದ ಮತ್ತೆ ಊರಿಗೆ ಬಂದೆ ಎಂದು ಹೇಳಿರುವ ಅಖಿಲಾ ಪಜಿಮಣ್ಣು ಮೂರು ತಿಂಗಳು ಮತ್ತೆ ಒಂದಾಗುವ ಪ್ರಯತ್ನ ಮಾಡಿದೆವು, ಅದಕ್ಕಾಗಿ ಶ್ರಮ ಕೂಡ ಹಾಕಿದೆವು ಆದರೆ ಅದು ಕೂಡ ಸಾಧ್ಯವಾಗಲಿಲ್ಲ, ಹೀಗಾಗಿ ದೂರವಾಗುವ ನಿರ್ಧಾರವನ್ನು ಮಾಡಿ ಕೊನೆಗೆ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದೆವು ಎಂದು ಹೇಳಿದ್ದಾರೆ.
ನಮ್ಮ ಇಬ್ಬರಿಗೂ ನಮ್ಮದೇ ಆದ ಜೀವನ ಇದೆ ಎಂದು ಹೇಳಿರುವ ಅಖಿಲಾ ಇಬ್ಬರಿಗೂ ನೆಮ್ಮದಿ ಮತ್ತು ಶಾಂತಿ ಮುಖ್ಯವಾಗಿತ್ತು ಎಂದು ಹೇಳಿದ್ದಾರೆ. ನಾವು ಪಟ್ಟಿರುವ ಕಷ್ಟ ದೊಡ್ಡದು ನಾವು ಅನುಭವಿಸಿದ ನೋವು ನಮಗೆ ಮಾತ್ರ ತಿಳಿದಿದೆ ಎಂದು ಹೇಳಿದ್ದಾರೆ.
ಇನ್ನೂ ಇದೇ ಸಮಯದಲ್ಲಿ ''ಸುವರ್ಣ ಸಂಕಲ್ಪ'' ಕಾರ್ಯಕ್ರಮದಿಂದ ದಾಂಪತ್ಯ ಜೀವನ ಮುರಿದು ಬಿತ್ತು ಎನ್ನುವ ವಿಚಾರಕ್ಕೆ ಕೂಡ ಸ್ಪಷ್ಟೀಕರಣ ನೀಡಿರುವ ಅಖಿಲಾ ಪಜಿಮಣ್ಣು, ನನ್ನ ವಿಚ್ಚೇದನಕ್ಕೂ ಮತ್ತು ''ಸುವರ್ಣ ಸಂಕಲ್ಪ'' ಕಾರ್ಯಕ್ರಮಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಅವಳು ಇದನ್ನು ಬಯಸಿದ್ದಳು. ಆದರೆ, ಅವಳನ್ನು ಹೋಗಲು ಅವರ ಪತಿ ಬಿಡಲಿಲ್ಲ ಎಂದೆಲ್ಲಾ ಜನ ಮಾತನಾಡುತ್ತಾರೆ, ಆದರೆ ಅದೆಲ್ಲವೂ ಸುಳ್ಳು ಎಂದು ಹೇಳಿರುವ ಅಖಿಲಾ ವೈಯಕ್ತಿಕ ಕಾರಣಗಳಿಂದ ನಾವು ದೂರವಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಅಖಿಲಾ ಅವರ ಈ ಸಂದರ್ಶನದ ನಂತರವಾದರೂ ಇವರ ಡಿವೋರ್ಸ್ ಕುರಿತ ಚರ್ಚೆಗಳು ಅಂತ್ಯವಾಗುತ್ತಾವಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











