ಅಕ್ಕಿನೇನಿ ನಾಗೇಶ್ವರ ರಾವ್ ವಿಧಿವಶ
ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅಕ್ಕಿನೇನಿ ನಾಗೇಶ್ವರ ರಾವ್ ವಿಧಿವಶರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಜ.22ರ ಬುಧವಾರ 1.30ರ ಸುಮಾರಿಗೆ ಹೈದರಾಬಾದ್ ಕೇರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
1924 ಸೆ.20ರಂದು ಜನಿಸಿದ್ದ ನಾಗೇಶ್ವರರಾವ್ ಹೈದರಾಬಾದ್ ನಲ್ಲಿರುವ ಕೇರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಿಂದ ಅವರ ಪಾರ್ಥಿವ ಶರೀರವನ್ನು ಜೂಬ್ಲಿಹಿಲ್ಸ್ ಪ್ರದೇಶದಲ್ಲಿರುವ ಅವರ ನಿವಾಸಕ್ಕೆ ತರಲಾಗಿದ್ದು, ನಾಗೇಶ್ವರರಾವ್ ನಿಧನಕ್ಕೆ ಟಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ.

ಕರುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಕ್ಕಿನೇನಿ ನಾಗೇಶ್ವರ ರಾವ್ ಅವರಿಗೆ ಹೈದರಾಬಾದಿನ ಜೂಬ್ಲಿಹಿಲ್ಸ್ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿಯೇ ಕಾರ್ಪೋರೇಟ್ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಬುಧವಾರ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ತಕ್ಷಣ ಅವರನ್ನು ಹೈದಾರಾಬಾದ್ ನಲ್ಲಿರುವ ಕೇರ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. [ಅಕ್ಕಿನೇನಿ ನಾಗೇಶ್ವರರಾವ್ ಗೆ ಕ್ಯಾನ್ಸರ್]
ಅಕ್ಕಿನೇನಿ ನಾಗೇಶ್ವರ ರಾವ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಅನ್ನಪೂರ್ಣ ಸ್ಪುಡಿಯೋದಲ್ಲಿ ಅಂತಿಮ ದರ್ಶನಕ್ಕೆ 9.30ರ ನಂತರ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ನಾಗೇಶ್ವರರಾವ್ ಪುತ್ರ ನಾಗರ್ಜುನ ಹೇಳಿದ್ದಾರೆ. ಅಭಿಮಾನಿಗಳು ಶಾಂತಿ ಕಾಪಾಡಬೇಕು ಎಂದು ನಾಗಾರ್ಜುನ ಮನವಿ ಮಾಡಿದ್ದಾರೆ.
1941ರಲ್ಲಿ ಧರ್ಮಪತ್ನಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಅಕ್ಕಿನೇನಿ ನಾಗೇಶ್ವರ ರಾವ್ ಸುಮಾರು 250 ಚಿತ್ರಗಳಲ್ಲಿ ಅಭಿನಯಿಸಿದ್ದರು. ನವರಾತ್ರಿ ಎಂಬ ಚಿತ್ರದಲ್ಲಿ 9 ಪಾತ್ರಗಳಲ್ಲಿ ನಟಿಸಿದ್ದರು. ಶ್ರೇಷ್ಠ ನಟನೆಗೆ ಪದ್ಮಶ್ರೀ, ಪದ್ಮಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಳಿಯ ವಯಸ್ಸಿನಲ್ಲೂ ಅವರು ನಟನೆಯನ್ನ ಮಾತ್ರ ನಿಲ್ಲಿಸಿರಲಿಲ್ಲ. ಅವರು ನಟಿಸುತ್ತಿರುವ ಮನಮ್ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ ನಾಗೇಶ್ವರರಾವ್, ಮಗ ನಾಗಾರ್ಜುನ ಮತ್ತು ಮೊಮ್ಮಗ ನಾಗಚೈತನ್ಯ ಒಟ್ಟಾಗಿ ನಟಿಸಿದ್ದಾರೆ.


Click it and Unblock the Notifications











