'ರಾಷ್ಟ್ರ ಪ್ರಶಸ್ತಿ ನಿರೀಕ್ಷೆ ಇರಲಿಲ್ಲ, ಬಹಳ ಖುಷಿ ತಂದಿದೆ': ನಟ ಗೋವಿಂದೇ ಗೌಡ
''ರಾಷ್ಟ್ರ ಪ್ರಶಸ್ತಿ ನಿರೀಕ್ಷೆ ಇರಲಿಲ್ಲ. ಈ ಪ್ರಶಸ್ತಿ ಬಹಳ ಖುಷಿ ತಂದಿದೆ. ಕನ್ನಡ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ, ಆ ಚಿತ್ರದಲ್ಲಿ ನಾನು ಭಾಗಿಯಾಗಿದ್ದೇನೆ ಎನ್ನುವುದು ಬಹಳ ಹೆಮ್ಮೆ ಎನಿಸುತ್ತದೆ'' ಎಂದು ನಟ ಗೋವಿಂದೇ ಗೌಡ ಫಿಲ್ಮಿಬೀಟ್ ಕನ್ನಡ ಜೊತೆ ಸಂತಸ ಹಂಚಿಕೊಂಡಿದ್ದಾರೆ.
67ನೇ ಸಾಲಿನ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, 'ಅಕ್ಷಿ' ಚಿತ್ರಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ದೊರೆತಿದೆ. ಈ ಚಿತ್ರದಲ್ಲಿ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಗೋವಿಂದೇ ಗೌಡ (ಜಿಜಿ) ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮನೋಜ್ ಕುಮಾರ್ ಈ ಚಿತ್ರ ನಿರ್ದೇಶಿಸಿದ್ದಾರೆ.
''ರಾಷ್ಟ್ರ ಪ್ರಶಸ್ತಿಯ ಕ್ರೆಡಿಟ್ ನಿರ್ದೇಶಕರಿಗೆ ಸಲ್ಲಬೇಕು. ನನ್ನನ್ನು ಜನ ಹಾಸ್ಯಪಾತ್ರಗಳಲ್ಲಿ ನೋಡಿ ಇಷ್ಟಪಟ್ಟಿದ್ದಾರೆ. 'ಅಕ್ಷಿ' ಸಿನಿಮಾದಲ್ಲಿ ನನ್ನದು ಬಹಳ ಗಂಭೀರ ಪಾತ್ರ. ಜನ ಇದನ್ನು ಎಷ್ಟರ ಮಟ್ಟಿಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಒಮ್ಮೆ ಯೋಚನೆ ಮಾಡಿ ಎಂದು ನಿರ್ದೇಶಕರಲ್ಲಿ ಕೇಳಿದೆ. ಆದರೆ, ಅವರು ಬಹಳ ನಂಬಿಕೆಯಿಂದ ಇದ್ದರು. ಈ ಪಾತ್ರ ನೀವೇ ಮಾಡಬೇಕು, ಚೆನ್ನಾಗಿರುತ್ತೆ ಎಂದು ಹೇಳಿ ಮಾಡಿಸಿದರು. ನಿಜಕ್ಕೂ ಅವರ ಶ್ರಮದಿಂದಲೇ ಈ ಸಿನಿಮಾಗೆ ಪ್ರಶಸ್ತಿ ಲಭಿಸಿದೆ'' ಎಂದು ಜಿಜಿ ಖುಷಿ ವ್ಯಕ್ತಪಡಿಸಿದ್ದಾರೆ.

''ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ. ಕೆಲವರು ಚಿತ್ರ ವೀಕ್ಷಣೆ ಮಾಡಿದ್ದಾರೆ. ನೋಡಿದವರೆಲ್ಲ ನನ್ನ ಅಭಿನಯದ ಬಗ್ಗೆ ಮೆಚ್ಚಿಕೊಂಡಿದ್ದಾರೆ. ವಿಭಿನ್ನ ಪಾತ್ರ ಮಾಡಿದ್ದೀರಾ, ನಿಮ್ಮ ಪಾತ್ರ ಕಣ್ಣಲ್ಲಿ ನೀರು ತರಿಸುತ್ತೆ ಎಂದು ಹೇಳಿದ್ದಾರೆ. ಈ ಸಿನಿಮಾದಲ್ಲಿ ಅಂತಹ ಅಭಿನಯವನ್ನು ನಿರ್ದೇಶಕರು ಹೊರತೆಗೆದಿದ್ದಾರೆ'' ಎಂದು ಜಿಜಿ ಹೇಳಿದ್ದಾರೆ.
''ಇಳಾ ಇಟ್ಲಾ ಅವರು ಬಡ ಕುಟುಂಬದ ಮಹಿಳೆ ಪಾತ್ರದಲ್ಲಿ ನಟಿಸಿದ್ದಾರೆ. ಬಡತನದಿಂದ ಬಂದ ಹೆಣ್ಣು ಮಗಳ ಪಾತ್ರ ಅವರದ್ದು, ತುಂಬಾ ಚೆನ್ನಾಗಿ ನಟಿಸಿದ್ದಾರೆ. ಇಬ್ಬರು ಮಕ್ಕಳು ಚೆನ್ನಾಗಿ ಅಭಿನಯ ಮಾಡಿದ್ದಾರೆ. ನಮ್ಮೆಲ್ಲರಿಂದ ನಿರ್ದೇಶಕರು ಒಳ್ಳೆ ಕೆಲಸ ಮಾಡಿಸಿದ್ದಾರೆ. ಇದೊಂದು ಒಳ್ಳೆಯ ಸಿನಿಮಾ ಆಗುತ್ತದೆ ಎಂಬ ನಂಬಿಕೆ ಇತ್ತು. ಆದರೆ, ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದು ಹೆಚ್ಚು ಸಂತಸ'' ಎಂದು ಜಿಜಿ ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ್ದಾರೆ.

ಅಂದ್ಹಾಗೆ, ಅಕ್ಷಿ ಸಿನಿಮಾ ನೇತ್ರದಾನ ಕುರಿತು ಮೂಡಿಬಂದಿರುವ ಸಿನಿಮಾ. ಮನೋಜ್ ಕುಮಾರ್ ನಿರ್ದೇಶಿಸಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ. ಗೋವಿಂದೇ ಗೌಡ, ಇಳಾ ಇಟ್ಲಾ, ಮಾಸ್ಟರ್ ಮಿಥುನ್, ಮಾಸ್ಟರ್ ಸೌಮ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಏಪ್ರಿಲ್ನಲ್ಲಿ ಸಿನಿಮಾ ತೆರೆಗೆ ತರಲು ತಯಾರಿ ನಡೆದಿದೆ. ಕಲಾದೇಗುಲ ಶ್ರೀನಿವಾಸ್, ರಮೇಶ್ ನಿರ್ಮಾಣ ಮಾಡಿದ್ದಾರೆ. ಕಲಾದೇಗುಲ ಶ್ರೀನಿವಾಸ್ ಅವರೇ ಸಂಗೀತ ಸಂಯೋಜನೆ ಮಾಡಿದ್ದು, ಮುಕುಲ್ ಗೌಡ ಛಾಯಾಗ್ರಹಣವಿದೆ.


Click it and Unblock the Notifications











