'ಮಾಸ್ತಿಗುಡಿ' ದುರಂತದಲ್ಲಿ ಸಾವಿಗೀಡಾದ 'ಖಳನಾಯಕರ' ನೆನೆದ ಅಂತಾರಾಷ್ಟ್ರೀಯ ಮಾಧ್ಯಮ
ಕನ್ನಡ ಚಿತ್ರರಂಗದಲ್ಲಿ 'ಮಾಸ್ತಿಗುಡಿ ದುರಂತ' ಕಪ್ಪುಚುಕ್ಕೆಯಾಗಿ ಉಳಿಯಿತು. ಇಬ್ಬರು ಪ್ರತಿಭಾನ್ವಿತ ಕಲಾವಿದರನ್ನ ಕಳೆದುಕೊಂಡ ಆ ದಿನವನ್ನ ನೆನಪಿಸಿಕೊಂಡರೆ ಪ್ರತಿಯೊಬ್ಬರ ಕಣ್ಣಲ್ಲೂ ಈಗಲೂ ಕಣ್ಣು ಒದ್ದೆಯಾಗುತ್ತೆ.
ಚಿತ್ರರಂಗದಲ್ಲಿ ದೊಡ್ಡ ಕಲಾವಿದರಾಗಿ ಬೆಳಯಬೇಕು ಎಂದು ಸಾಕಷ್ಟು ಕನಸುಗಳನ್ನ ಕಂಡಿದ್ದ ಅನಿಲ್ ಮತ್ತು ಉದಯ್, ಸ್ನೇಹಿತರ ಕಣ್ಣೆದುರೇ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಪ್ರಾಣ ಕಳೆದುಕೊಂಡರು.
ಈ ಘಟನೆ ನಡೆದ ಸುಮಾರು ಮೂರು ವರ್ಷ ಕಳೆದಿದೆ. ಅಯ್ಯೋ ಪಾಪ...ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು....ಆ ಕುಟುಂಬಗಳಿಗೆ ಪರಿಹಾರ ಸಿಗಬೇಕು....ಮುಂದೆ ಇಂತಹ ಘಟನೆಗಳು ನಡೆಯಬಾರದು ಎಂದೆಲ್ಲ ಹೇಳುತ್ತಿದ್ದವರೆಲ್ಲ ಇಬ್ಬರನ್ನ ಮರೆತಿರಬಹುದು. ಆದರೆ, ಅಂತಾರಾಷ್ಟ್ರೀಯ ಮಾಧ್ಯಮ ಈ ದುರಂತ ಖಳನಾಯಕರನ್ನ ಸ್ಮರಿಸಿದೆ. ಯಾವುದು ಆ ವಾಹಿನಿ, ಯಾವ ಕಾರಣಕ್ಕಾಗಿ ನೆನಪಿಸಿಕೊಂಡಿದೆ.? ಮುಂದೆ ಓದಿ...

ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ಕನ್ನಡ ಕಲಾವಿದರು
ಅಂತಾರಾಷ್ಟ್ರೀಯ ಮಟ್ಟದ ಪ್ರಖ್ಯಾತ ಮಾಧ್ಯಮ ಅಲ್ ಜಜೀರಾ ಅವರು, ಕನ್ನಡದ ದಿವಂಗತ ಕಲಾವಿದರಾದ ಅನಿಲ್ ಮತ್ತು ಉದಯ್ ಅವರನ್ನ ಸ್ಮರಿಸಿದೆ. ಭಾರತೀಯ ಸಿನಿರಂಗದ ಸಾಹಸ ಕಲಾವಿದರ ಬಗ್ಗೆ 'ದಿ ಸ್ಟಂಟ್ ಮ್ಯಾನ್ ಅಫ್ ಬಾಲಿವುಡ್' ಎಂಬ ಕಾರ್ಯಕ್ರಮ ಮಾಡಿದೆ. ಇದರಲ್ಲಿ ಅಕ್ಷಯ್ ಕುಮಾರ್ ಸೇರಿದಂತೆ ಹಲವು ಸಾಹಸ ಕಲಾವಿದರ ಕಷ್ಟ-ಸವಾಲುಗಳ ಬಗ್ಗೆ ಸ್ಟೋರಿ ಮಾಡಲಾಗಿದೆ. ಇದರಲ್ಲಿ ಮಾಸ್ತಿಗುಡಿ ದುರಂತದಲ್ಲಿ ಸಾವಿಗೀಡಾದ ಅನಿಲ್ ಮತ್ತು ಉದಯ್ ಘಟನೆಯನ್ನ ಪ್ರಸ್ತಾಪಿಸಿದ್ದಾರೆ.

ಭಾವುಕಾರದ ಉದಯ್ ಸಹೋದರ
ಅಲ್ ಜಜೀರಾ ವಾಹಿನಿ ಅವರು ಬೆಂಗಳೂರಿನಲ್ಲಿ ಅನಿಲ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಮಾಸ್ತಿಗುಡಿ ದುರಂತ ನಡೆದ ತಿಪ್ಪಗೊಂಡನಹಳ್ಳಿ ಕೆರೆ ಬಳಿಯೂ ಹೋಗಿದ್ದಾರೆ. ವಾಹಿನಿ ಜೊತೆ ಮಾತನಾಡಿರುವ ತಾಯಿ ಮತ್ತು ಸಹೋದರ ಬಾಲಾಜಿ ಅವರು ಭಾವುಕರಾಗಿದ್ದಾರೆ. ''ಕೆರೆಯಲ್ಲಿ ಯಾರಾದರೂ ಆಡುತ್ತಿರುವುದನ್ನ ನೋಡಿದರೆ ಉದಯ್ ನೆನಪಾಗ್ತಾನೆ. ಈಜು ಬರುತ್ತಿರಲಿಲ್ಲ. ಆದರೂ ನಿರ್ದೇಶಕ, ಸಾಹಸ ನಿರ್ದೇಶಕರು ನೀರಿಗೆ ಇಳಿಸಿದ್ದರು'' ಎಂದು ಬಾಲಾಜಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಾವಿಗೆ ಹೊಣೆ ಯಾರು?
ದೊಡ್ಡ ಕಲಾವಿದರಾಗಬೇಕು ಎಂಬ ಕನಸು ಹೊತ್ತು ಜೀವವನ್ನ ಪಣಕ್ಕಿಟ್ಟು ವಿಧಿಯ ಮುಂದೆ ಸೋತಾ ಅನಿಲ್ ಮತ್ತು ಉದಯ್ ಅವರ ಸಾವಿಗೆ ಯಾರು ಹೊಣೆ ಎಂಬುದು ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಅವರ ಮನೆಯವರಿಗೂ ಯಾರನ್ನ ದೂರಬೇಕು ಎಂಬುದರ ಬಗ್ಗೆ ಗೊಂದಲದಲ್ಲಿಯೇ ಇದ್ದಾರೆ. ಆದರೆ, ಮಗನನ್ನು ಕಳೆದುಕೊಂಡ ಆ ತಾಯಿ ಮತ್ತು ಸಹೋದರನನ್ನು ಕಳೆದುಕೊಂಡ ಬಾಲಾಜಿ ಯಾರನ್ನ ಕೇಳಬೇಕಿದೆ?

ಅನಿಲ್-ಉದಯ್ ಇಲ್ಲದ 3 ಮೂರು ವರ್ಷ
2017 ನವೆಂಬರ್ 7 ರಂದು ತಿಪ್ಪಗೊಂಡನಹಳ್ಳಿಯ ಕೆರೆಯಲ್ಲಿ ಈ ದುರಂತ ನಡೆದಿತ್ತು. ದುನಿಯಾ ವಿಜಯ್, ಅನಿಲ್, ಉದಯ್ ಮೂರು ಜನ ಹೆಲಿಕಾಫ್ಟರ್ ನಿಂದ ನೀರಿಗೆ ಹಾರಿದ್ದರು. ಲೈಫ್ ಜಾಕೆಟ್ ಇಲ್ಲದ ಕಾರಣ ಅನಿಲ್ ಮತ್ತು ಉದಯ್ ನೀರಿನಲ್ಲಿ ಮುಳುಗಿದರು. ದುನಿಯಾ ವಿಜಯ್ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದರು. ಈ ಘಟನೆ ನಡೆದು ಮೂರು ವರ್ಷ ಆಗಿದೆ. ಕೊನೆಗೂ ಈ ಸಾವಿಗೆ ನ್ಯಾಯ ಸಿಕ್ಕಿಲ್ಲ ಎನ್ನುವುದು ದುರಂತ.


Click it and Unblock the Notifications











