ಲಂಕೇಶ್ ಇದ್ದಿದ್ದರೆ ಎಷ್ಟು ಖುಷಿಪಡುತ್ತಿದ್ದರೋ..?
ಕವಿತಾ ಲಂಕೇಶರ ಎರಡನೆಯ ಬೆಳೆ ಕಟಾವಿಗೆ ಬಂದಿದೆ. ದೇವೀರಿ ನಂತರ ಇದೀಗ ಅಲೆಮಾರಿ. ಫಿಲಂ ಡಿವಿಜನ್ ಸಹಯೋಗದಲ್ಲಿ ತಯಾರಾಗಿರುವ ಅಲೆಮಾರಿಗೆ ಮೊನ್ನೆಯಷ್ಟೇ ಕವಿತಾ ಅಂತಿಮ ಟಚ್ ನೀಡಿದರು. ನೀವು ನೋಡಲಿನ್ನೂ ಸ್ವಲ್ಪ ಸಮಯ ಕಾಯಬೇಕು. ಅಲೆಮಾರಿಯ ಪ್ರಥಮ ಪ್ರದರ್ಶನ ನಡೆಯುವುದು ಬೆಂಗಳೂರಿನಲ್ಲಲ್ಲ, ಕೋಲ್ಕತಾದಲ್ಲಿ .
ನವಂಬರ್ 10 ರಿಂದ 17 ರವರೆಗೆ ಕೋಲ್ಕತಾದಲ್ಲಿ ನಡೆಯುವ ಏಳನೇ ಕಲ್ಕತ್ತಾ ಚಿತ್ರೋತ್ಸವದಲ್ಲಿ ಅಲೆಮಾರಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಆನಂತರ ಕೇರಳದತ್ತ ಅಲೆಮಾರಿಯ ಪಯಣ. ನವಂಬರ್ 23 ರ ನಂತರ ಶುರುವಾಗುವ ತಿರುವನಂತಪುರ ಚಿತ್ರೋತ್ಸವದಲ್ಲಿ ಅಲೆಮಾರಿಗೆ ಆಹ್ವಾನವಿದೆ. ಅಲ್ಲಿಗೆ ತೆರೆ ಕಾಣುವ ಮುನ್ನ ನಾಡಿನಾಚೆ ಅಲೆಮಾರಿಯ ಕೀರ್ತಿ ಪತಾಕೆ ಹಾರುತ್ತದೆಂದಾಯಿತು, ಹಾರಲಿ.
ಕಳೆದ ವರ್ಷ ಕೇರಳದಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕವಿತಾರ ಚೊಚ್ಚಿಲ ಚಿತ್ರ ದೇವೀರಿ ಪ್ರದರ್ಶನಗೊಂಡು, ಚಿತ್ರರಸಿಕರ ಮನಸ್ಸು ಗೆದ್ದಿತ್ತು , ಪ್ರಶಸ್ತಿಯನ್ನೂ ಪಡೆದಿತ್ತು . ಅದೇ ಖುಷಿಯಲ್ಲಿ ತಿರುವನಂತಪುರ ಚಿತ್ರೋತ್ಸವದ ಸಂಘಟಕರು ಅಲೆಮಾರಿಗೆ ಆಹ್ವಾನ ಕಳುಹಿಸಿದ್ದಾರೆ.
ಕೇರಳ ಚಲನಚಿತ್ರ ಅಕಾಡೆಮಿಯೀಗ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವುದರಿಂದ ಚಿತ್ರೋತ್ಸವಕ್ಕೆ ವಿಶೇಷ ರಂಗು ಬಂದಿದೆ. ಇಂಥಾ ಚಿತ್ರೋತ್ಸವದಲ್ಲಿ ಭಾಗಿಯಾವುದು ಹೆಮ್ಮೆಯ ವಿಷಯ. ಅಲೆಮಾರಿಯ ಪಯಣ ಇಷ್ಟಕ್ಕೇ ನಿಲ್ಲುವಂತೆ ಕಾಣುತ್ತಿಲ್ಲ . ದೇಶದೊಳಗೆ ಮಾತ್ರವಲ್ಲ , ವಿದೇಶಗಳಲ್ಲೂ ಅಲೆಮಾರಿಗೆ ಬೇಡಿಕೆಯಿದೆ. ಅಪ್ಪನಿಗೆ ತಕ್ಕ ಮಗಳು ಕವಿತಾಗೆ ಶುಭಾಶಯಗಳು! ಲಂಕೇಶ್ ಇದ್ದಿದ್ದರೆ ಎಷ್ಟು ಖುಷಿಪಡುತ್ತಿದ್ದರೋ..?
ಅಲೆಮಾರಿ ಬಳಗ-
ತಾರಾಗಣ : ಪ್ರಕಾಶ್ ರೈ, ಭಾವನಾ, ಅನು ಪ್ರಭಾಕರ್, ಅವಿನಾಶ್
ಛಾಯಾಗ್ರಹಣ: ಎಸ್.ರಾಮಚಂದ್ರ
ಸಂಕಲನ: ಎಂ.ಎನ್.ಸ್ವಾಮಿ
ಸಂಗೀತ: ಐಸಾಕ್ ಥಾಮಸ್
ನಿರ್ದೇಶನ : ಕವಿತಾ ಲಂಕೇಶ್


Click it and Unblock the Notifications