ನೈಜ ಘಟನೆಯ ಕಿರುಚಿತ್ರ 'ಪ್ರಾಜೆಕ್ಟ್ ಸ್ವೀಟ್ ಲೈಮ್'
ಈಗಾಗಲೇ ಸಾಕಷ್ಟು ಪ್ರತಿಭಾವಂತರು ಕಿರುತೆರೆಯಿಂದ ಹಿರಿತೆರೆಗೆ ಬಂದು ತಮ್ಮ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ಇದರ ಸಾಲಿಗೆ ಅರ್ಜುನ್ ಕಿಶೋರ್ ಚಂದ್ರ ಕೂಡ ಸೇರ್ಪಡೆಯಾಗಿದ್ದಾರೆ. 2017ರಲ್ಲಿ 'ಲೈಫ್ 360' ಎನ್ನುವ ಸಿನಿಮಾಗೆ ನಿರ್ದೇಶನ ಮತ್ತು ನಾಯಕನಾಗಿ ನಟಿಸಿದ ಅನುಭವ ಇವರಿಗಿದೆ. ಇದರ ಪ್ರೇರಣೆಯಿಂದಲೇ 'ಪ್ರಾಜೆಕ್ಟ್ ಸ್ವೀಟ್ ಲೈಮ್' ಎನ್ನುವ ನೈಜ ಘಟನೆಯ 23 ನಿಮಿಷದ ಕಿರುಚಿತ್ರವನ್ನು ಅರ್ಜುನ್ ಕಿಶೋರ್ ಚಂದ್ರ ಸಿದ್ದ ಪಡಿಸಿದ್ದಾರೆ.
ಕೆಲವು ತಿಂಗಳುಗಳ ಹಿಂದೆ 'ಮಕ್ಕಳ ಅಪಹರಣಕಾರ'ರೆಂದು ಅಮಾಯಕರನ್ನು ಜನರು ಹೀನಾಯವಾಗಿ ಸಾಯಿಸಿದ್ದರು. ರಾಜಸ್ಥಾನದಿಂದ ಬಂದಿದ್ದ ಯುವಕ ಹಾಗೂ ಹೈದರಾಬಾದ್ ನ ವ್ಯಾಪಾರಸ್ಥನನ್ನು ಇದೇ ರೀತಿ ಅನುಮಾನಿಸಿದ ಘಟನೆ ನಿಮಗೆ ನೆನಪಿರಬಹುದು.
ಇದನ್ನೇ ಆಧಾರವಾಗಿಟ್ಟುಕೊಂಡು ಕಿರುಚಿತ್ರವನ್ನು ರಚಿಸಿದ್ದಾರೆ ಅರ್ಜುನ್ ಕಿಶೋರ್ ಚಂದ್ರ. ನಾಲ್ಕು ಜನರ ಸುತ್ತ ಈ ಕಿರುಚಿತ್ರದ ಕತೆ ಸಾಗಲಿದೆ.

ಮೂರು ದಿನಗಳ ಕಾಲ ಬೆಂಗಳೂರು, ಮೈಸೂರಿನಲ್ಲಿ ಈ ಕಿರುಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಅಧಿಕಾರಿಯಾಗಿ ಕೆ.ಎಸ್.ಶ್ರೀಧರ್, ಅಂಗಡಿಯವನಾಗಿ ಪ್ರಕಾಶ್ ತುಮ್ಮಿನಾಡು, ಭಿಕ್ಷುಕನ ಪಾತ್ರಕ್ಕೆ ಕೇಶವಮೂರ್ತಿ, ಗೆಳೆಯನಾಗಿ ರೋಹಿತ್ ನಟಿಸಿದ್ದಾರೆ.
ಛಾಯಾಗ್ರಹಣ ಅನಿಲ್ ಕುಮಾರ್.ಕೆ, ಸಂಭಾಷಣೆ ಮದನ್ ರಾಮ್ ವೆಂಕಟೇಶ್, ಸಂಕಲನ ದುರ್ಗ.ಪಿ.ಎಸ್, ಸಂಗೀತ ಸಿದ್, ಕಾರ್ಯಕಾರಿ ನಿರ್ಮಾಪಕ ಮೈಸೂರು ಶಿವು-ಕೌಶಿಕ್ ಅವರದಾಗಿದೆ. ನಿರ್ದೇಶಕರ ಕನಸಿಗೆ 3 ಪಾಂಡ ಪ್ರೊಡಕ್ಷನ್ ಸಂಸ್ಥೆಯು ಬಂಡವಾಳ ಹೂಡಿದೆ.
ಇತ್ತೀಚೆಗೆ ಟಿಕೆಟ್ ದರದೊಂದಿಗೆ ಈ ಕಿರುಚಿತ್ರದ ಪ್ರದರ್ಶನ ಏರ್ಪಾಟು ಮಾಡಲಾಗಿತ್ತು. ನಟ ವಿನಾಯಕ್ ಜೋಷಿ, ಫೇಸ್ ಟು ಫೇಸ್ ನಾಯಕ ರೋಹಿತ್ ನಾರಾಯಣ್, ಹಿರಿಯ ವಕೀಲ ಹರ್ಷ ಮುತಾಲಿಕ್ ಮುಂತಾದ ಗಣ್ಯರು ಚಿತ್ರ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಗಳಿಕೆ ಹಣವನ್ನು ಪುಲ್ವಾಮ ದುರಂತದಲ್ಲಿ ಮರಣ ಹೊಂದಿದ ಮಂಡ್ಯದ ಯೋಧ ಗುರು ಊರಿನ ಬಡ ಕುಟುಂಬದ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ನೀಡಲು ತಂಡವು ಯೋಜನೆ ಹಾಕಿಕೊಂಡಿದೆ.


Click it and Unblock the Notifications











