ವಿಧಿಯ ಅಟ್ಟಹಾಸಕ್ಕೆ ಬಲಿಯಾದ ನಟಿ ರಚನಾ ಯಾರು.? ಅಕೆಯ ಹಿನ್ನಲೆ ಏನು.?
ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ಇಷ್ಟೊತ್ತಿಗೆ ರಚನಾ ಹೈದರಾಬಾದ್ ನಲ್ಲಿರಬೇಕಿತ್ತು. ಎಂದಿನಂತೆ ಚಿತ್ರೀಕರಣದಲ್ಲಿ ಬಿಜಿಯಾಗಿರಬೇಕಿತ್ತು. ಆದ್ರೆ, ವಿಧಿ ಆಟವೇ ಬೇರೆ ಆಗಿತ್ತು. ಗೆಳೆಯನ ಹುಟ್ಟುಹಬ್ಬದ ನಿಮಿತ್ತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ ರಚನಾ ವಾಪಸ್ ಬರಲೇ ಇಲ್ಲ.
ಗುರುವಾರ (ಆಗಸ್ಟ್ 24) ಮುಂಜಾನೆ ಮಾಗಡಿ ತಾಲ್ಲೂಕು ಸೋಲೂರು ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ರಚನಾ ಹಾಗೂ ಜೀವನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಅಷ್ಟಕ್ಕೂ, ಈ ರಚನಾ ಯಾರು.? ಅವರ ಹಿನ್ನಲೆ ಏನು.? ಯಾವ್ಯಾವ ಧಾರಾವಾಹಿಗಳಲ್ಲಿ ರಚನಾ ಅಭಿನಯಿಸಿದ್ದಾರೆ ಎಂಬುದರ ವರದಿ ಇಲ್ಲಿದೆ ಓದಿರಿ...

ರಾಜರಾಜೇಶ್ವರಿ ನಗರದ ನಿವಾಸಿ
ನಟಿ ರಚನಾ ಮೂಲತಃ ಎಲ್ಲಿಯವರು ಎಂಬ ಮಾಹಿತಿ ತಿಳಿದುಬಂದಿಲ್ಲ. ಆದ್ರೆ, ತಂದೆ, ತಾಯಿ ಹಾಗೂ ತಮ್ಮನೊಂದಿಗೆ ರಾಜರಾಜೇಶ್ವರಿ ನಗರದಲ್ಲಿ ರಚನಾ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಕುಟುಂಬಕ್ಕೆ ಆಕೆಯೇ ಆಧಾರ
ರಾಜರಾಜೇಶ್ವರಿ ನಗರದಲ್ಲಿ ಪುಟ್ಟ ಕ್ಯಾಂಟೀನ್ ನಡೆಸುತ್ತಿದ್ದ ರಚನಾ ಪೋಷಕರಿಗೆ ಆಕೆಯೇ ಆಧಾರಸ್ತಂಭ. ಕುಟುಂಬ ನಿರ್ವಹಣೆಗೆ ರಚನಾ ಆಧಾರವಾಗಿದ್ದರು.

ಪ್ರತಿಭಾವಂತೆ ರಚನಾ
ರಚನಾ ಅದ್ಭುತ ಭರತನಾಟ್ಯ ಕಲಾವಿದೆ ಕೂಡ ಹೌದು. ನೃತ್ಯ ಸಂಯೋಜನೆ ಕೂಡ ಮಾಡುತ್ತಿದ್ದ ರಚನಾ ಅನೇಕ ವೇದಿಕೆಗಳಲ್ಲಿ ಪರ್ಫಾಮೆನ್ಸ್ ಕೂಡ ನೀಡಿದ್ದರಂತೆ.

ಧಾರಾವಾಹಿಗಳಲ್ಲಿ ನಟನೆ
ಕನ್ನಡ ಕಿರುತೆರೆಯ ಜನಪ್ರಿಯ 'ತ್ರಿವೇಣಿ ಸಂಗಮ', 'ಮಧುಬಾಲಾ', 'ಮಹಾನದಿ' ಧಾರಾವಾಹಿಗಳಲ್ಲಿ ರಚನಾ ಅಭಿನಯಿಸಿದ್ದರು.

ರಚನಾಗೆ ಇದ್ದ ಆಸೆ...
ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿಯಬೇಕು... ಸಿನಿಮಾಗಳಲ್ಲಿ ಮಿಂಚಬೇಕು... ಶಿವಣ್ಣನ ಜೊತೆ ನಟಿಸಬೇಕು ಎಂಬುದು ರಚನಾರವರಿಗಿದ್ದ ಆಸೆ. ಆದ್ರೆ, ಕನಸುಗಳೆಲ್ಲ ಈಡೇರುವ ಮುನ್ನವೇ ರಚನಾ ಕೊನೆಯುಸಿರೆಳೆದಿದ್ದಾರೆ.

ಇಂದು ಹೈದರಾಬಾದ್ ಗೆ ತೆರಳಬೇಕಿತ್ತು
ಶೂಟಿಂಗ್ ಒಂದರ ನಿಮಿತ್ತ ಇಂದು ಹೈದರಾಬಾದ್ ಗೆ ರಚನಾ ತೆರಳಬೇಕಿತ್ತು. ಆದ್ರೆ, ಅಷ್ಟರಲ್ಲಿ ವಿಧಿ ಅಟ್ಟಹಾಸ ಮೆರೆದಿದೆ. ಬಣ್ಣದ ಬದುಕಿನಲ್ಲಿ ಬಾಳಿ ಬದುಕಬೇಕಿದ್ದ ಪ್ರತಿಭೆ ಬಾರದ ಲೋಕಕ್ಕೆ ಪಯಣ ಬೆಳೆಸಿದೆ.


Click it and Unblock the Notifications