ಕನ್ನಡ ಸ್ಟಾರ್ ನಟರ ನೆಚ್ಚಿನ ಛಾಯಾಗ್ರಾಹಕ ಸ್ವಾಮಿ ಜೆ ಗೌಡ
ಬಿಸಿ ಗೌರಿಶಂಕರ್, ಆರ್ಎನ್ ಕೃಷ್ಣಪ್ರಸಾದ್, ಎಸ್ ರಾಮಚಂದ್ರ ಐತಾಳ್, ಪುಟ್ಟಣ್ಣ ಕಣಗಾಲ್, ದಿನೇಶ್ ಬಾಬು, ಸತ್ಯ ಹೆಗಡೆ, ಎಚ್ ಸಿ ವೇಣು ಕನ್ನಡ ಚಿತ್ರರಂಗ ಹಲವು ದಿಗ್ಗಜ ಛಾಯಾಗ್ರಾಹಕರನ್ನು ಕಂಡಿದೆ. ಈಗಿನ ಸಮಯಕ್ಕೆ ಮತ್ತಷ್ಟು ಹೊಸ ಛಾಯಾಗ್ರಾಹಕರು ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ.
ಸ್ಟಾರ್ ನಟರಿಗೆ, ಸ್ಟಾರ್ ನಿರ್ದೇಶಕರಿಗೆ ಅಚ್ಚುಮೆಚ್ಚು ಎನಿಸಿಕೊಂಡಿರುವ ಸ್ವಾಮಿ ಜೆ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿರುವ ಪ್ರತಿಭಾನ್ವಿತ ಛಾಯಾಗ್ರಾಹಕ. ಶಿವಣ್ಣನ ಭಜರಂಗಿ ಚಿತ್ರದಿಂದ ಭಜರಂಗಿ 2 ಸಿನಿಮಾವರೆಗೂ ತಮ್ಮ ಕ್ಯಾಮೆರಾ ಕೈಚಳಕದ ಮೂಲಕ ವಿಶೇಷವೆನಿಸಿಕೊಂಡಿರುವ ತಂತ್ರಜ್ಞ.
ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಆರಂಭಿಸಿದ ಸ್ವಾಮಿ ಜೆ ಗೌಡ ಈಗ ಬೇಡಿಕೆಯ ತಂತ್ರಜ್ಞ. ಅದೃಷ್ಟ ಎಂಬಂತೆ ಸಿಕ್ಕಿದ ಅವಕಾಶವೊಂದು ಸ್ವಾಮಿ ಅವರ ಸಿನಿ ಬದುಕನ್ನೇ ಬದಲಿಸಿತು. ತಮ್ಮ ಪ್ರತಿಭೆ, ಪರಿಶ್ರಮ ಸ್ಟಾರ್ ಛಾಯಾಗ್ರಾಹಕ ಎಂಬ ಪಟ್ಟದಲ್ಲಿ ಕೂರಿಸಿದೆ.

ಬೆಂಗಳೂರಿನ ಸರ್ಕಾರಿ ಚಲನಚಿತ್ರ ಮತ್ತು ಟಿವಿ ಸಂಸ್ಥೆಯಲ್ಲಿ ಮೂರು ವರ್ಷ ಡಿಪ್ಲೋಮಾ ಕೋರ್ಸ್ (ಛಾಯಾಗ್ರಹಣ) ಮಾಡಿದ ಸ್ವಾಮಿ, ನಂತರ ಅನುಭವಿ ಸಿನಿಮಾಟೋಗ್ರಫರ್ ಶೇಖರ್ ಚಂದ್ರು ಬಳಿ 5 ವರ್ಷ ಸಹಾಯಕರಾಗಿ ಕೆಲಸ ಮಾಡಿದರು. ನಂತರ ನೃತ್ಯ ಸಂಯೋಜಕ ಹರ್ಷ ಮಾಸ್ಟರ್ ಜೊತೆ ಪರಿಚಯದಿಂದ ಭಜರಂಗಿ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಪಡೆದುಕೊಂಡರು.
ಭಜರಂಗಿ ಚಿತ್ರಕ್ಕೆ ಜೈ ಆನಂದ್ ಕ್ಯಾಮೆರಾಮ್ಯಾನ್ ಆಗಿ ಕಾರ್ಯನಿರ್ವಹಿಸಿದ್ದರು. ಕಾರಣಾಂತರಗಳಿಂದ ಆ ಚಿತ್ರದ 'ಜಿಯಾ ತೇರಿ ಜಿಯಾ ಮೇರಿ' ಹಾಡಿಗೆ ಛಾಯಾಗ್ರಾಹಣ ಮಾಡುವ ಅದೃಷ್ಟ ಸ್ವಾಮಿಗೆ ಒಲಿಯಿತು. ರಾಜಸ್ಥಾನದಲ್ಲಿ ಮೂರು ದಿನಗಳ ಕಾಲ ಶೂಟ್ ಮಾಡಿದ ಈ ಹಾಡು ಸ್ವಾಮಿ ಹಣೆಬರಹವನ್ನೇ ಬದಲಿಸಿತು. ಜಿಯಾ ತೇರಿ ಜಿಯಾ ಮೇರಿ ಹಾಡಿನ ಬಗ್ಗೆ ಈ ಹಾಡಿನ ಛಾಯಾಗ್ರಾಹಕನ ಬಗ್ಗೆ ಇಂಡಸ್ಟ್ರಿಯಲ್ಲಿ ಮಾತನಾಡುವಂತಾಯಿತು. ಸ್ವಾಮಿ ಜೆ ಕೆಲಸ ನಿರ್ದೇಶಕ ಹರ್ಷ ಅವರಿಗೆ ಇಷ್ಟ ಆಯಿತು.

ಇಲ್ಲಿಂದ ಹರ್ಷ ಮಾಸ್ಟರ್ ಚಿತ್ರಗಳಿಗೆ ಸ್ವಾಮಿ ಜೆ ಗೌಡ ಖಾಯಂ ಛಾಯಾಗ್ರಾಹಕರಾದರು. ಸ್ಟಾರ್ ನಟರು ಇಷ್ಟಪಡುವ ಕೆಲಸಗಾರರ ಎನಿಸಿಕೊಂಡರು.
- ಸ್ವಾಮಿ ಜೆ ಗೌಡ ಅವರ ಚಿತ್ರಗಳು
ಭಜರಂಗಿ (ಜಿಯಾ ತೇರಿ ಜಿಯಾ ಮೇರಿ ಹಾಡು- 2013)
ವಜ್ರಕಾಯ (2015)
ಜೈ ಮಾರುತಿ 800 (2016)
ಉಪೇಂದ್ರ ಮತ್ತೆ ಬಾ (2017)
ಅಂಜನಿಪುತ್ರ (2017)
ಸೀತಾರಾಮ ಕಲ್ಯಾಣ (2019)
ಭಜರಂಗಿ 2 (2021)
ಜೇಮ್ಸ್
ಶಿವಣ್ಣ-ಹರ್ಷ ಹೊಸ ಸಿನಿಮಾ (2022)

''ಸದ್ಯದಲ್ಲೇ ತೆಲುಗು ಇಂಡಸ್ಟ್ರಿಗೆ ಹೋಗುತ್ತಿದ್ದೇನೆ. ಎರಡ್ಮೂರು ಸಿನಿಮಾಗಳ ಆಫರ್ ಬಂದಿದೆ. ಮಾತುಕತೆ ನಡೆಯುತ್ತಿದೆ, ಡೇಟ್ ಸಮಸ್ಯೆಯಾಗುತ್ತಿರುವುದರಿಂದ ಕಾಯುತ್ತಿದ್ದೇನೆ'' ಎಂದು ಸ್ವಾಮಿ ಜೆ ಫಿಲ್ಮಿಬೀಟ್ ಜೊತೆ ಸಂತಸ ಹಂಚಿಕೊಂಡಿದ್ದಾರೆ.
ಮೂಲತಃ ಮಂಡ್ಯದ ಬನ್ನಳ್ಳಿಯವರಾದ ಸ್ವಾಮಿ ಜೆ ಈಗ ಸ್ಯಾಂಡಲ್ವುಡ್ನಲ್ಲಿ ಬೇಡಿಕೆಯ ಛಾಯಾಗ್ರಾಹಕರಲ್ಲಿ ಒಬ್ಬರು. ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ (ಚೇತನ್ ಕುಮಾರ್ ನಿರ್ದೇಶಕ) ಹಾಗೂ ಶಿವಣ್ಣ-ಹರ್ಷ ಕಾಂಬಿನೇಷನ್ನಲ್ಲಿ ಬರಲಿರುವ ಮತ್ತೊಂದು ಚಿತ್ರಕ್ಕೆ ಸ್ವಾಮಿ ಅವರೇ ಛಾಯಾಗ್ರಾಹಕರಾಗಿದ್ದಾರೆ.


Click it and Unblock the Notifications











